ಇಸ್ಮತ್ ಫಜೀರ್

““Students are our honourable customers”” ಈ ಅಣಿಮುತ್ತನ್ನು ಮತ್ತೊಮ್ಮೆ ಓದಿಕೊಳ್ಳಿ ಈ ವಾಕ್ಯವನ್ನು ಯಾವುದೋ ಕಾಲೇಜಿನ ಪಕ್ಕದ ಸ್ಟೇಶನರಿ ಅಂಗಡಿಯಲ್ಲೋ, ಫಾಸ್ಟ್‍ಪುಡ್ ಡಾಬಾದಲ್ಲೋ, ಕ್ಯಾಂಟೀನಿನಲ್ಲೋ ಬರೆದಿರುವುದಲ್ಲ. ಇದು ಮಂಗಳೂರಿನ ಒಂದು ಪ್ರತಿಷ್ಟಿತ ಇಂಜಿಯರಿಂಗ್ ಕಾಲೇಜಿನ ಚೆಯರ್ ಮ್ಯಾನ್ ಸಂಸ್ಥೆಯ ಅಧ್ಯಾಪಕರುಗಳ ಸಭೆಯಲ್ಲಿ ಉದುರಿಸಿದ ಅಣಿಮುತ್ತಿದು. ಇದೇ ಮಾತನ್ನು ಮುಂದುವರಿಸುತ್ತಾ ಅವರು ಹೇಳಿದ ಮುಂದಿನ ವಾಕ್ಯ “so you should respect them” ಈ ವಾಕ್ಯದ ಅರ್ಥ ನೀವು ವಿದ್ಯಾರ್ಥಿಗಳ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸಿ ಎಂದಲ್ಲ. ನೀವು ನಿಮ್ಮ ವಿದ್ಯಾರ್ಥಿಗಳನ್ನು ಗೌರವಿಸಿ ಏಕೆಂದರೆ ಅವರು ನಮಗೆ ಭರ್ಜರಿ ವ್ಯಾಪಾರ ನೀಡುವ ಗ್ರಾಹಕರು ಈ ಮೇಲೆ ಉಲ್ಲೇಖಿಸಲ್ಪಟ್ಟ ಎರಡು ವಾಕ್ಯಗಳು ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಯಾವ ರೀತಿ ವಾಣಿಜ್ಯೀಕರಣಗೊಂಡಿದೆ ಎಂಬುದನ್ನು ಬಿಂಬಿಸುತ್ತದೆ.

ಶಿಕ್ಷಣದ ವ್ಯಾಪಾರೀಕರಣ ಇಂದು ಕೇವಲ ವೃತ್ತಿ ಶಿಕ್ಷಣಕ್ಕೆ ಸೀಮಿತಗೊಂಡಿಲ್ಲ. ಅದು ಕೆ.ಜಿ. ತರಗತಿಯಿಂದ ಪ್ರಾರಂಭವಾಗಿ ಉನ್ನತ ಶಿಕ್ಷಣದವರೆಗೆ ಎಲ್ಲಾ ಹಂತಗಳನ್ನೂ ವ್ಯಾಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ನಾಟಾ ಕಳ್ಳರು, ದೋನಂಬರ್ ದಂಧೆಕೋರರು, ವಸೂಲಿ ಕೋರ ರೌಡಿಗಳು, ಅಡ್ಡದಾರಿಯಿಂದ ದುಡ್ಡು ಸಂಪಾದಿಸಿದ ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಬೆಳ್ಳಗಾಗಿಸಲು ಟ್ರಸ್ಟ್‍ಗಳನ್ನು ಪ್ರಾರಂಭಿಸಿ ಅದರ ಮೂಲಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಮಾಜಕ್ಕೆ ಇನ್ನೊಂದು ರೀತಿಯಲ್ಲಿ ಕಂಟಕರಾಗುತ್ತಿದ್ದಾರೆ. ಅದು ಇತ್ತೀಚಿನ ವರ್ಷಗಳಲ್ಲಿ ತನ್ನ ಪ್ರಭಾವವನ್ನು ಸಮಾಜದಲ್ಲಿ ಯಾವ ರೀತಿ ಬೀರುತ್ತಿದೆಯೆಂದರೆ “ಮದ್ರಸಾ ಶಿಕ್ಷಣವೂ ವಾಣಿಜ್ಯೀಕರಣಗೊಳ್ಳುತ್ತಿದೆ.” ಪ್ರಸ್ತುತ ಮಂಗಳೂರು ನಗರದಲ್ಲಿ ದುಬಾರಿ ಶುಲ್ಕದ ಕೆಲವು ಹೈಟೆಕ್ ಮದ್ರಸಾಗಳು ತಲೆಯೆತ್ತಿವೆ.

ಎಲ್ಲಿಯವರೆಗೆ ಸಮಾನ ಅಥವಾ ಏಕರೂಪಿ ಶಿಕ್ಷಣ ನೀತಿ ಜಾರಿಗೆ ಬರುದಿಲ್ಲವೋ ಅಲ್ಲಿಯವರೆಗೆ ಶಿಕ್ಷಣದ ವಾಣಿಜ್ಯೀಕರಣಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಎಲ್ಲಿಯವರೆಗೆ ವಾಣಿಜ್ಯೀಕರಣ ಪ್ರಕ್ರಿಯೆ ಜಾರಿಯಲ್ಲಿರುತ್ತದೋ ಅಲ್ಲಿಯವರೆಗೆ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಸುಶಿಕ್ಷಿತ ವರ್ಗ ತಾನು, ತನ್ನ ಮನೆ, ತನ್ನ ಕುಟುಂಬ ಎಂಬ ಸಂಕುಚಿತ ಆಲೋಚನೆಯಲ್ಲೇ ಬದುಕಲು ವಾಣಿಜ್ಯೀಕೃತ ಶಿಕ್ಷಣ ವ್ಯವಸ್ಥೆಯೂ ಒಂದು ಕಾರಣ. ಸಮಾಜದ ದುರ್ಬಲರ ಕಷ್ಟ-ಸಂಕಷ್ಟಗಳಿಗೆ ಸುಶಿಕ್ಷಿತ ವರ್ಗ ಅಂಧವಾಗಿರುತ್ತದೆ.

ಲಕ್ಷಾಂತರ ರೂಪಾಯಿ ಫೀಸು ಗೆಬರುವ ಸಂಸ್ಥೆಗಳಲ್ಲಿ ಕೆ.ಜಿ ಶಿಕ್ಷಣ ಕೊಡುವುದೇ ಕೆಲವು ಹೆತ್ತವರಿಗೆ ಪ್ರತಿಷ್ಠೆಯ ವಿಚಾರ. ಇಂತಹ ಹೆತ್ತವರು ಏನು ಭಾವಿಸುತ್ತಾರೆಂದರೆ ತಾವು ತಮ್ಮ ಮಕ್ಕಳಿಗೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ. ಖಂಡಿತವಾಗಿಯೂ ಅವರ ಎಣಿಕೆ ತಪ್ಪು. ಅವರು ಆ ಮೂಲಕ ತಮ್ಮ ಮಕ್ಕಳಿಗೆ ಐಷಾರಾಮಿ ಬದುಕನ್ನು ಎಳವೆಯಲ್ಲಿಯೇ ತೋರಿಸಿಕೊಡುತ್ತಾರೆಯೇ ಹೊರತು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡುತ್ತಿಲ್ಲ. ಜೀವನದ ನೈಜ ಮೌಲ್ಯಗಳನ್ನು ಕಲಿಸಿಕೊಡುತ್ತಿಲ್ಲ. ಅವರಿಗೆ ಬದುಕಿನ ವಾಸ್ತವವನ್ನು ತಿಳಿಸಿಕೊಡುತ್ತಿಲ್ಲ. ಈ ಸಂದರ್ಭ ನನಗೆ ನನ್ನ ಆತ್ಮೀಯರಾದ ಹಿರಿಯ ಸಾಹಿತಿ ಫಕೀರ್ ಮಹಮ್ಮದ್ ಕಟ್ಟಾಡಿಯವರ ಪ್ರಸಿದ್ಧ ಕಥೆ “ನೋಂಬು” ನೆನಪಾಗುತ್ತಿದೆ.

ಒಂದೂರಿನಲ್ಲಿ ಒಂದೇ ಪ್ರಾಯದ ಒಟ್ಟೊಟ್ಟಿಗೆ ಬೆಳೆಯುವ ಇಬ್ಬರು ಮಕ್ಕಳಿದ್ದರು. ಒಂದು ಒಪೆÇ್ಪತ್ತಿನ ಊಟಕ್ಕೂ ಯಾತನೆ ಪಡುತ್ತಿರುವ ಕುಟುಂಬದ ಮಗು, ಇನ್ನೊಂದು ಹಸಿವು ಎಂದರೇನೆಂದೇ ತಿಳಿಯದ ಶ್ರೀಮಂತ ಕುಟುಂಬದ ಮಗು. ಒಮ್ಮೆ ಶ್ರೀಮಂತರ ಕುಟುಂಬದ ಮಗು ಬಡ ಕುಟುಂಬದ ಮಗುವಿನೊಂದಿಗೆ ಕೇಳುತ್ತದೆ “ಇವತ್ತು ಬೆಳಿಗ್ಗೆ ಚಹಾಕ್ಕೆ ನಿಮಗೇನು ತಿಂಡಿ”…? ಚಹಾವನ್ನೇ ಕುಡಿಯದ, ತಿಂಡಿಯ ಮುಖವನ್ನು ಕಾಣದೇ ಅದೆಷ್ಟೋ ದಿನಗಳಾಗಿರುವ ಆ ಮಗು ಹೇಳುತ್ತದೆ. “ನಮಗೆ ಇಂದು ನೋಂಬು”… ಹಸಿವೆಂದರೇನೆಂದೇ ತಿಳಿಯದ ಮಗು ತನ್ನ ತಾಯಿಯಲ್ಲಿ ನನಗೂ “ನೋಂಬು” ಎಂಬ ತಿಂಡಿ ಬೇಕೆಂದು ರಚ್ಚೆ ಹಿಡಿಯುತ್ತದೆ. (ನೋಂಬು= ಉಪವಾಸ). ಖಂಡಿತವಾಗಿಯೂ ದುಡ್ಡು ಚಾಚುವ ಶಿಕ್ಷಣ ಸಂಸ್ಥೆಗಳಿಂದ ನಮ್ಮ ಮಕ್ಕಳು ಬದುಕಿನ ಕಟು ವಾಸ್ತವವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಮಕ್ಕಳಿಗೆ ಜೀವನದ ಮೌಲ್ಯಗಳು ಅರ್ಥವಾಗಬೇಕಾದರೆ ಸಮಾಜದ ಕೆಳವರ್ಗದ ಜನರ ನೋವು-ನಲಿವುಗಳು ಅರ್ಥವಾಗಬೇಕು. ಬಡವರ ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಕೂತು ಕಲಿಯುವ ಶಾಲೆಗಳಲ್ಲಿ ಮಾತ್ರ ಬದುಕಿನ ಕಟುವಾಸ್ತವಗಳನ್ನು ಅರಿಯಲು ಸಾಧ್ಯ. ಇಂತಹ ವಾಸ್ತವಗಳನ್ನು ಅರಿತ ಮಕ್ಕಳಿಂದ ಮಾತ್ರ ನಾವು ಜೀವನದ ಮೌಲ್ಯಗಳನ್ನು ನಿರೀಕ್ಷಿಸಲು ಸಾಧ್ಯ. ಏಕರೂಪೀ ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ಇದು ಸಾಧ್ಯ…… ಈ ಂsಠಿeಛಿಣಗಳು ಕೆಲವು ಹೆತ್ತವರಿಗೆ ದೊಡ್ಡ ಸಂಗತಿಯಾಗಿ ಕಾಣಲು ಸಾಧ್ಯವಿಲ್ಲ. ಅದು ಅವರ ಮನಸ್ಥಿತಿಯ ಪ್ರತೀಕ. ಇದರ ಬೇರೊಂದು ಂsಠಿeಛಿಣ ನ್ನೂ ನೋಡೋಣ.

ಕೇ.ಜಿ ತರಗತಿಗೆ ಲಕ್ಷಾಂತರ ರೂಪಾಯಿ ಫೀಸು ಪಡೆಯುವ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ನಾವು ನಮ್ಮ ಮಕ್ಕಳಿಗೆ ಶಿಕ್ಷಕರಿಂದ ಖಾಸಗಿಯಾಗಿ ಮನೆಪಾಠ (ಹೋಂ ಟ್ಯೂಷನ್) ನೀಡಲು ಒತ್ತಡ ಹೇರುತ್ತದೆ. ಇದು ಅವರು ನೀಡುವ ಶಿಕ್ಷಣದ ಗುಣಮಟ್ಟವನ್ನು ತೋರಿಸುತ್ತದೆ. ಹೇಗೆಂದರೆ ಸರಕಾರಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಯುವ ಮಕ್ಕಳು ಯಾವುದೇ ಟ್ಯೂಷನ್ ಪಡೆಯದೇ ರ್ಯಾಂಕ್‍ಗಳನ್ನು ಪಡೆಯುತ್ತಾರೆ, ಫಸ್ಟ್‍ಕ್ಲಾಸ್, ಡಿಸ್ಟಿಂಕ್ಷನ್ ಪಡೆಯುತ್ತಾರೆ. ಇವರು ಇಷ್ಟೆಲ್ಲಾ ದುಡ್ದು ಗೆಬರಿಯೂ ಹೋಂ ಟ್ಯೂಷನ್ ಕೊಡಿಸಬೇಕೆಂದರೆ ಏನರ್ಥ….?

ಸಂಜೆ ಹೊತ್ತಿಗೆ ಹೋಂ ಟ್ಯೂಷನ್ ನೀಡುವ ಮೂಲಕ ನಾವು ನಮ್ಮ ಮಕ್ಕಳ ಬಾಲ್ಯವನ್ನು, ಅವರ ಸಹಜ ಬದುಕನ್ನು ಅವರಿಂದ ಕಸಿದುಕೊಳ್ಳುತ್ತೇವೆ ಎಂಬ ವಾಸ್ತವ ನಮ್ಮರಿವಿಗೆ ಬರುವುದೇ ಇಲ್ಲ. ಶಾಲೆಯಿಂದ ಹಿಂದುರಿಗಿ ಬಂದ ಮಕ್ಕಳನ್ನು ಮತ್ತೆ ಟ್ಯೂಷನ್‍ಗೆ ಕಳುಹಿಸಿ ಅವರ ಸಾಯಂಕಾಲವನ್ನು ಅವರಿಂದ ಕಸಿದು ನಾವು ಅಂಕಗಳಿಸುವ ಯಂತ್ರಗಳನ್ನಾಗಿಸುತ್ತೇವೆ. ಮಕ್ಕಳ ಬಾಲ್ಯ ಸಹಜ ಚೇಷ್ಟೆಗಳಿಂದ, ದೈಹಿಕ ಶ್ರಮದ ಆಟದಿಂದ ಅವರನ್ನು ನಾವು ವಂಚಿಸುತ್ತೇವೆ. ಸದಾ ಒಂದೇ ರೀತಿಯ ಯಾಂತ್ರಿಕ ಬದುಕಿನಿಂದಾಗಿ ಮಕ್ಕಳಿಗೆ ಖಿನ್ನತೆಯಂತಹ ಮಾನಸಿಕ ಖಾಯಿಲೆಗಳು ಬಾಧಿಸುವ ಸಾಧ್ಯತೆಯಿದೆ. ಬರೇ ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್‍ಗಳಿಗಷ್ಟೇ ಮಕ್ಕಳ ಮನರಂಜನೆಯನ್ನು ಸೀಮಿತಗೊಳಿಸುತ್ತೇವೆ. ಇನ್ನೂ ಹೆಚ್ಚಿನ ಮನರಂಜನೆಯೆಂದರೆ  ಚಾನೆಲ್‍ಗಳ ವೀಕ್ಷಣೆ. ದೈಹಿಕ ಶ್ರಮದ ಆಟಗಳನ್ನು ಮಕ್ಕಳಿಗೆ ನಿರಾಕರಿಸುವ ಮೂಲಕ ಹೆತ್ತವರು ತಮ್ಮ ಮಕ್ಕಳಲ್ಲಿ ಬೊಜ್ಜು ಬೆಳೆಸುತ್ತಾರೆ. ಇದರ ದೂರಗಾಮಿ ಪರಿಣಾಮವನ್ನು ವಿವರಿಸಬೇಕಾದ ಅಗತ್ಯವೇ ಇಲ್ಲ.

ಶಿಕ್ಷಣದ ವ್ಯಾಪಾರೀಕರಣದ ಭರಾಟೆಯಲ್ಲಿ ಇಂದು ಒಂದು ಶಾಲೆಯೆಂದರೆ ಹೇಗಿರಬೇಕೆಂಬ ಪರಿಕಲ್ಪನೆಯೇ ಇಲ್ಲವಾಗಿದೆ. ಒಂದು ಶಾಲೆಯೆಂದರೆ ಅದಕ್ಕೆ ಸರಿಯಾದ ಕೊಠಡಿಗಳಿರಬೇಕು, ಆ ಕೊಠಡಿಯಲ್ಲಿ ಸಮರ್ಪಕವಾಗಿ ಗಾಳಿ ಮತ್ತು ಬೆಳಕು ಹರಿದಾಡಬೇಕು, ಸರಿಯಾದ ಪೀಠೋಪಕರಣಗಳಿರಬೇಕು, ಸಾಕಷ್ಟು ಸಂಖ್ಯೆಯ ಶೌಚಾಲಯಗಳಿರಬೇಕು, ವಿಶಾಲವಾದ ಆಟದ ಮೈದಾನವಿರಬೇಕು. ಇಂದು ಅಲ್ಲಲ್ಲಿ ಕೇವಲ ದುಡ್ಡು ಚಾಚುವ ಉದ್ದೇಶದಿಂದಲೇ ನಾಯಿಕೊಡೆಗಳಂತೆ ತಲೆಯೆತ್ತುವ ಅದೆಷ್ಟೋ ಖಾಸಗಿ ಶಾಲೆಗಳನ್ನು ವಾಣಿಜ್ಯ ಕಟ್ಟಡಗಳ ಮಹಡಿಗಳಲ್ಲಿ ನಡೆಸಲಾಗುತ್ತಿದೆ. ಇಂತಹ ಹೆಚ್ಚಿನೆಲ್ಲಾ ಶಾಲೆಗಳ ತರಗತಿ ಕೊಠಡಿಯಲ್ಲಿ ಶುದ್ಧ ಗಾಳಿ ಮತ್ತು ಬೆಳಕಿರುವುದಿಲ್ಲ. ವಾಣಿಜ್ಯ ಉದ್ದೇಶಗಳಿಗೆ ನಿರ್ಮಿಸಲ್ಪಟ್ಟ ಕಟ್ಟಡಗಳಲ್ಲಿ ಅವುಗಳ ಅಗತ್ಯಕ್ಕೆ ತಕ್ಕಂತೆ ನಿರ್ಮಾಣಗಳಿರುತ್ತವೆ. ವಾಣಿಜ್ಯ ಸಂರ್ಕೀಣಗಳಲ್ಲಿ ಶಾಲೆಯ ವಾತಾವರಣ ಖಂಡಿತ ಇರುವುದಿಲ್ಲ. ಮಂಗಳೂರಿನ ಪ್ರಸಿದ್ಧ ವೈದ್ಯರಾದ ಡಾ| ಶ್ರೀನಿವಾಸ ಕಕ್ಕಿಲ್ಲಾಯರು ಆಗಾಗ ಹೇಳುವ ಮತೊಂದು ಇಂತಿದೆ. “ಎಲ್ಲಾ ಶಾಲೆಗಳಲ್ಲಿ ಸರಿಯಾದ ಆಟದ ಮೈದಾನಗಳು ನಿರ್ಮಾಣವಾದರೆ ಅರ್ಧಕ್ಕರ್ಧ ಆಸ್ಪತ್ರೆಗಳು ಮುಚ್ಚಬೇಕಾಗಬಹುದು”. ಇದೊಂದು ಉತ್ಪ್ರೇಕ್ಷೆಯ ಮಾತು ಎನ್ನುವುದನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಇದನ್ನು ತೀರಾ ನಿರ್ಲಕ್ಷಿಸುವಂತಿಲ್ಲ. ಬರೀ ದುಡ್ಡು ಮಾಡುವ ಉದ್ದೇಶದಿಂದ ವಾಣಿಜ್ಯ ಕಟ್ಟಡಗಳಲ್ಲಿ ನಡೆಯುವ ಅನೇಕ ಶಾಲೆಗಳಿಗೆ  ಆಟದ ಮೈದಾನಗಳೇ ಇರುವುದಿಲ್ಲ. ಮೈದಾನಗಳಿಲ್ಲದ ಮೇಲೆ ದೈಹಿಕ ಶ್ರಮದ ಕ್ರೀಡೆಗಳಿಗೆ ಎಲ್ಲಿಯ ಅವಕಾಶ….? ಒಟ್ಟಿನಲ್ಲಿ ಅನೇಕ ಹೆತ್ತವರು ಮಕ್ಕಳ ಉತ್ತಮ ಭವಿಷ್ಯದ ಕನಸಿನಲ್ಲಿ ಶಿಕ್ಷಣವನ್ನು ಬಿಕರಿಗಟ್ಟಿರುವ ಸಂತೆಗಳಿಗೆ ಮಕ್ಕಳನ್ನು ಸೇರಿಸಿ ಅವರ ವರ್ತಮಾನದ ನೆಮ್ಮದಿಯನ್ನು ಕಸಿಯುತ್ತಾರೆ.

ಪ್ರ್ರೌಡಶಾಲಾ ಶಿಕ್ಷಣ ಮುಗಿದಾಕ್ಷಣ ಮಕ್ಕಳ ಭವಿಷ್ಯದ ಕುರಿತಂತೆ ಹೆಚ್ಚೆಚ್ಚು ತಲೆ ಕೆಡಿಸುವ ಹೆತ್ತವರು ತಮ್ಮ ಮಕ್ಕಳನ್ನು ಸ್ವಘೋಷಿತ ಪ್ರತಿಷ್ಠಿತ ಕಾಲೇಜುಗಳಿಗೆ ಸೇರಿಸಲು ಆತುರಪಡುತ್ತಾರೆ. ಕೈಯಲ್ಲಿ ಪುಡಿಗಾಸಿದ್ದವರು ತಮ್ಮ ಮಕ್ಕಳಿಗೆ ಈ ಪ್ರತಿಷ್ಠಿತ ಕಾಲೇಜುಗಳ ಎಲಿಜಿಬಿಲಿಟಿಯ ಅಂಕಗಳಿಲ್ಲದಿದ್ದರೂ ಕಾಸಿನ ಬಲದಿಂದ ಅಂತಹ ಕಾಲೇಜುಗಳಿಗೆ ಸೇರಿಸಿಬಿಡುತ್ತಾರೆ. ಯಾವ ಕಾಲೇಜಲ್ಲೂ ಹೆಚ್ಚು ದುಡ್ಡು ಕೊಟ್ಟು ಬಂದವರೆಂದು ವಿಶೇಷ  ಶಿಕ್ಷಣ ನೀಡುವುದಿಲ್ಲ.

ಸಾಮಾನ್ಯವಾಗಿ ಪ್ರತಿಷ್ಠಿತ ಕಾಲೇಜುಗಳು ಶೇಕಡಾ 75-80 ಮೇಲ್ಪಟ್ಟು ಅಂಕಪಡೆದವರಿಗೆ ಮಾತ್ರ ಪ್ರವೇಶಾತಿ ನೀಡುತ್ತದೆ. ಅಂಕಬಲವಿಲ್ಲದವರಿಗೆ ಧನಬಲದ ಆಧಾರದಲ್ಲಿ ಪ್ರವೇಶಾತಿ ನೀಡುತ್ತದೆ. ಸರಕಾರಿ ಕಾಲೇಜುಗಳಲ್ಲಿ ಮತ್ತು ಇತರ “ಪ್ರತಿಷ್ಠಿತ” ವಲ್ಲದ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರೆಲ್ಲರೂ 35-45% ಅಂಶ ಪಡೆದವರು, ಎರಡನೇ, ಮೂರನೇ ಯತ್ನದಲ್ಲಿ ಉತ್ತೀರ್ಣರಾದವರು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅಡಿಶನಲ್ ಟ್ಯೂಷನ್ ಪಡೆಯುವಂತೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಒತ್ತಡ ಹೇರುತ್ತದೆ. ಅದಾಗ್ಯೂ ಕಾಲೇಜುಗಳ ಫಲಿತಾಂಶ 70-80%ದಷ್ಟಿರುತ್ತವೆ. 35-45% ಅಂಕ ಪಡೆದು ಬಂದ, ಎರಡು-ಮೂರನೇ ಯತ್ನದಲ್ಲಿ ಉತ್ತಿರ್ಣರಾಗಿ ಬಂದ, ಯಾವುದೇ ಆಡಿಶನಲ್ ಟ್ಯೂಷನ್ ಪಡೆಯದ ವಿದ್ಯಾರ್ಥಿಗಳಿಂದಲೇ ತುಂಬಿದ ಕಾಲೇಜುಗಳು 60-70% ಫಲಿತಾಂಶ ಪಡೆಯುತ್ತವೆ. (ಈ ಸತ್ಯವನ್ನು ಯಾರು ಬೇಕಾದರೂ ಸರ್ವೇ ನಡೆಸಿ ಪರಿಶೀಲಿಸಬಹುದು) ಇವೆರಡು ವಿಧಗಳ ಕಾಲೇಜುಗಳಲ್ಲಿ ಯಾವುದು ಉತ್ತಮ ಎಂಬುದನ್ನು ಓದುಗರೇ ನಿರ್ಧರಿಸಬಹುದು.

ಇನ್ನು ವೃತ್ತಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣದ ಕೆಲವು ನಮೂನೆಗಳು ಮತ್ತು ಅದರ ಪರಿಣಾಮಗಳನ್ನು ನೋಡೋಣ. ವಿದ್ಯಾರ್ಥಿಗಳನ್ನು ಗೌರವಾನ್ವಿತ ಗ್ರಾಹಕರೆಂದೂ, ಅವರನ್ನು ಗೌರವಿಸಿ ಎಂದು ಅಧ್ಯಾಪಕರಿಗೆ ಆದೇಶಿಸುವ ಶಿಕ್ಷಣ ಸಂಸ್ಥೆಗಳು ಗುರು-ಶಿಷ್ಯ ಸಂಬಂಧಕ್ಕೆ ಎಳ್ಳು ನೀರು ಬಿಡುತ್ತವೆ. ವಿದ್ಯಾರ್ಥಿಗಳನ್ನು ಗೌರವಿಸಬೇಕಾದ ಅನಿವಾರ್ಯತೆಗೆ ಸಿಲುಕಿರುವ ಅಧ್ಯಾಪಕರುಗಳು ಅಲ್ಲಿ ಜೀತದಾಳುಗಳಂತಿರುತ್ತಾರೆ ಎಂಬುವುದನ್ನು ಪ್ರತ್ಯೇಕ ವಿವರಿಸಬೇಕಾದ ಅಗತ್ಯ ಬೀಳದು. ಇಂತಹ ಕಾಲೇಜುಗಳು ಬರೀ ರಿಸಲ್ಟ್ ಓರಿಯೆಂಟೆಡ್ ಕಾಲೇಜುಗಳಾಗಿರುತ್ತವೆ. ತಮ್ಮ ಸಂಸ್ಥೆ ಪಡೆದಿರುವ ಫಲಿತಾಂಶವನ್ನು ಪ್ರದರ್ಶಿಸಿ ಜಾಹೀರಾತು ಮಾಡುತ್ತವೆ. ಆದರೆ ಅಲ್ಲಿ ಎಲ್ಲವೂ ಸರಿಯಿರುವುದಿಲ್ಲ ಎಂಬುವುದು ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ನನ್ನ ಆಪ್ತರಾದ ಕೆಲವು ಉಪನ್ಯಾಸಕರು ಹೇಳುವ ಪ್ರಕಾರ ಅಲ್ಲಿನ ಅಟೆಂಡೆನ್ಸ್ ಸಿಸ್ಟಂ ದಿಗಿಲು ಹುಟ್ಟಿಸುತ್ತದೆ. ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲಿ, ಹಾಜರಾಗದಿರಲಿ ಪರೀಕ್ಷೆ ಕುಳಿತುಕೊಳ್ಳಲು ಬೇಕಾದಷ್ಟು ಹಾಜರಿ ನೀಡಬೇಕು. ಅವರು ಅರ್ಹರಿರಲಿ, ಇಲ್ಲದಿರಲಿ ಆಂತರಿಕ ಮೌಲ್ಯಮಾಪನ (Internal Assessment) ದಲ್ಲಿ ಭರ್ತಿ ಅಂಕ ನೀಡಬೇಕು. ವಿದ್ಯಾರ್ಥಿಗಳ ಅರ್ಹತೆಯನ್ನು ಪರಿಗಣಿಸುವ ಯಾವ ಹಕ್ಕೂ ಅಧ್ಯಾಪಕನಿಗಿರುವುದಿಲ್ಲ. ಆಡಳಿತ ಮಂಡಳಿ ಏನು ನಿರ್ದೇಶನ ನೀಡುತ್ತದೋ ಅದನ್ನು ಪಾಲಿಸಬೇಕು. ತರಗತಿಗಳಿಗೆ ಮೊಬೈಲ್ ಫೋನ್ ತರಬಾರದೆಂದು ಕಟ್ಟೆಚ್ಚರವನ್ನು ಆಡಳಿತ ಮಂಡಳಿ ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ನೀಡುತ್ತದೆ. ಮತ್ತು ಮೊಬೈಲ್ ಸೀಝ್ ಮಾಡುವ ಹಕ್ಕನ್ನೂ ಅಧ್ಯಾಪಕರುಗಳಿಗೆ ನೀಡಿರುತ್ತವೆ. ಅಂತೆಯೇ ಅಧ್ಯಾಪಕರುಗಳು ಸೀಝ್ ಮಾಡಿದ ಮೊಬೈಲ್‍ಗಳನ್ನು ವಿದ್ಯಾರ್ಥಿಗಳಿಗೆ ಮರಳಿ ನೀಡುವ ಹಕ್ಕನ್ನು ಆಡಳಿತ ಮಂಡಳಿ ಕಾಯ್ದಿರಿಸುತ್ತದೆ. ಅಧ್ಯಾಪಕರುಗಳು ತರಗತಿಗಳಲ್ಲಿ ಮೊಬೈಲ್ ಬಳಸಿದ ವಿದ್ಯಾರ್ಥಿಗಳ ಮೊಬೈಲನ್ನು ಸೀಝ್ ಮಾಡಿ ಸಂಬಂಧಪಟ್ಟವರಿಗೆ ಒಪ್ಪಿಸುತ್ತಾರೆ. ಅವರು ಅದನ್ನು ಮರಳಿ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಇಂತಹವುಗಳು ಅನೇಕ ಕಾಲೇಜುಗಳಲ್ಲಿ ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳ ಕೈಯಿಂದ ಮೊಬೈಲ್ ಸೀಝ್ ಮಾಡಿದ ಅಧ್ಯಾಪಕರುಗಳನ್ನು ದುಡ್ಡಿನ ದರ್ಪದ ವಿದ್ಯಾರ್ಥಿಗಳು ಬಫೂನ್‍ಗಳಂತೆ ಅಣಕಿಸುತ್ತಾರೆ. ಕೇವಲ ಧನಬಲದಿಂದ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು 100% ಫಲಿತಾಂಶ ನೀಡಬೇಕೆಂದು ಆಡಳಿತ ಮಂಡಳಿ ಅಧ್ಯಾಪಕ ವರ್ಗದ ಮೇಲೆ ಒತ್ತಡ ಹೇರುತ್ತದೆ. ಈ ಶಿಕ್ಷಣ ಸಂಸ್ಥೆಗಳ ವ್ಯಾಪಾರ ವೃದ್ಧಿಯಾಗಬೇಕಾದರೆ 100% ಫಲಿತಾಂಶ ತೋರಿಸಬೇಕು. 100% ಫಲಿತಾಂಶ ನೀಡಬೇಕೆಂದು ಅಧ್ಯಾಪಕರುಗಳ ಮೇಲೆ ಒತ್ತಡ ಹೇರುವ ಬಂಡವಾಳಶಾಹಿಗಳ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಹಾಜರಾತಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತೀರಾ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೂ ಅಟೆಂಡೆನ್ಸ್ ನೀಡಿ ಎಂಬ ಆದೇಶವನ್ನು ಅಧ್ಯಾಪಕ ವರ್ಗಕ್ಕೆ ನೀಡುತ್ತದೆ. ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಂದ 100% ಫಲಿತಾಂಶ ನಿರೀಕ್ಷಿಸಲು ಹೇಗೆ ಸಾಧ್ಯ? ಇಂತಹ ಸಂಸ್ಥೆಗಳು ಗುಣಮಟ್ಟದ ವೃತ್ತಿಪರರನ್ನು ಸಮಾಜಕ್ಕೆ ನೀಡಲು ಸಾಧ್ಯವೇ ಇಲ್ಲ. ಕೇವಲ ಧನಬಲದಿಂದ ಪದವಿ ಪಡೆದು ಹೊರಬರುವ ವೃತ್ತಿಪರರಿಂದ ವೃತ್ತಿಯಲ್ಲಿ ಕನಿಷ್ಠ ಮಟ್ಟದ ಎಥಿಕ್ಸನ್ನು ಮತ್ತು ನೈತಿಕತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಇನ್ನು ಜನರ ಪ್ರಾಣ ರಕ್ಷಿಸಬೇಕಾದ ವೈದ್ಯರುಗಳನ್ನು ತಯಾರಿಸುವ ಮೆಡಿಕಲ್ ಕಾಲೇಜುಗಳ ಕಥೆಗಳಂತೂ ಪ್ರಜ್ಞಾವಂತರನ್ನು ಭಯಭೀತರಾಗಿಸಬಹುದು. ಕೇವಲ ದುಡ್ಡಿನಿಂದಾಗಿ ವೈದ್ಯನಾಗುವ ಮೂಲ ಅರ್ಹತೆಗಳೇ ಇಲ್ಲದ ಶ್ರೀಮಂತರ ಮಕ್ಕಳಿಗೆ ಖಾಸಗಿ ಮೆಡಿಕಲ್ ಕಾಲೇಜುಗಳು ಸೀಟು ನೀಡುತ್ತವೆ. ಇಂದಿನ ವ್ಯಾಪಾರೀಕರಣದ ಯುಗದಲ್ಲಿ ನಿಜವಾದ ಅರ್ಹತೆಯುಳ್ಳ ಬಡವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕನಸೂ ಕಾಣುವಂತಿಲ್ಲ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್‍ನಲ್ಲಿ ಸೀಟು ಪಡೆದರೆ ಮಾತ್ರ ಬಡವಿದ್ಯಾರ್ಥಿಗಳು ವೈದ್ಯರಾಗಬಹುದು. ಓಇಇಖಿ, ಅ.ಇ.ಖಿ, ಅಔಒಇಆಏಇ ಪರೀಕ್ಷೆಗಳಲ್ಲಿ ಉನ್ನತ ರ್ಯಾಂಕ್ ಪಡೆದವರ ಹೊರತಾಗಿ ಇತರರು ಪ್ರವೇಶ ಪಡೆಯಬೇಕೆಂದರೆ ಕನಿಷ್ಠ 15 ರಿಂದ 20 ಲಕ್ಷ ರೂಪಾಯಿಗಳ ಗಂಟು ಬೇಕೇ ಬೇಕು. ಶೈಕ್ಷಣಿಕ ಸಾಲ ನೀಡುವ ಎಲ್ಲಾ ಬ್ಯಾಂಕ್‍ಗಳೂ ವಿದ್ಯಾರ್ಥಿಯ ಹೆತ್ತವರ ಸಂಪತ್ತು ನೋಡಿಯೇ ಸಾಲ ನೀಡುತ್ತದೆ. ಸ್ವಂತ ಮನೆಯೂ ಇರದ ಅಥವಾ ಆಶ್ರಯ ಮನೆಯಲ್ಲಿ ವಾಸಿಸುವ ಯಾವ ವಿದ್ಯಾರ್ಥಿಗೂ ಬ್ಯಾಂಕ್‍ಗಳು ಶೈಕ್ಷಣಿಕ ಸಾಲ ಸುತರಾಂ ನೀಡುವುದಿಲ್ಲ. ಇದನ್ನು ಯಾರು ಬೇಕಾದರೂ ಪರೀಕ್ಷಿಸಿ ನೋಡಬಹುದು. ಕೇವಲ ದುಡ್ಡಿನ ಬಲದಿಂದಲೇ ವೈದ್ಯರಾಗುವವರಿಗೆ ಸಮಾಜದ ತಳವರ್ಗದ ಜನರ ಭಾವನೆಗಳು ಅರ್ಥವಾಗುವುದೇ ಇಲ್ಲ. ದುಡ್ಡು ಕೊಟ್ಟು ವೈದ್ಯರಾದವರು ದುಡ್ಡಿನ ಹೊರತಾಗಿ ಬೇರೇನನ್ನೂ ಯೋಚಿಸುವುದಿಲ್ಲ. ಒಂದು ಕೋಟಿ ರೂಪಾಯಿ ಖರ್ಚು ಮಾಡಿ ಅಥವಾ 20-25 ಲಕ್ಷ ಖರ್ಚು ಮಾಡಿ ವೈದ್ಯಕೀಯ ಪದವಿ ಪಡೆದವನಿಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ಸರಕಾರ ಆದೇಶಿಸಿದರೆ ಆತ ಹೇಗೆ ತಾನೇ ಹೋಗಲು ಸಿದ್ಧನಿರುತ್ತಾನೆ? ಇಂದು ಕಮಿಷನ್ ಇಲ್ಲದೇ ವೃತ್ತಿ ನಿರ್ವಹಿಸುವ ವೈದ್ಯರು ಬಹು ವಿರಳ. ಒಂದೆಡೆ ಡಯೋಗ್ನೋಸ್ಟಿಕ್ ಸೆಂಟರ್‍ಗಳಿಂದ ಕಮಿಷನ್, ಇನ್ನೊಂದೆಡೆ ಔಷಧೀಯ ಕಂಪೆನಿಗಳ ಗಿಫ್ಟ್ ವೋಚರ್‍ಗಳು ವೈದ್ಯರನ್ನು ಸಮಾಜದ ನೋವಿಗೆ ಕುರುಡಾಗಿಸಿವೆ.

ಪ್ರತಿದಿನವೂ ವೈದ್ಯರ ಕ್ಲಿನಿಕ್‍ಗಳಿಗೆ ಎಡತಾಕುವ ಕಂಪೆನಿ ಪ್ರತಿನಿಧಿಗಳು ದಿನಕ್ಕೊಂದು ಬಗೆಯ ಹೊಸ ಹೊಸ ಔಷಧಿಯನ್ನು ಪರಿಚಯಿಸುತ್ತಾರೆ. ದುಡ್ಡೇ ದೊಡ್ಡಪ್ಪ ಎನ್ನುವ ವೈದ್ಯರುಗಳ ಪಾಲಿಗೆ ಅವರು ಕಾಮಧೇನುಗಳು. ಕೆಲವು ವೈದ್ಯರುಗಳು ರೋಗಿಯ ಆರ್ಥಿಕ ಸ್ಥಿತಿಯ ಬಗ್ಗೆ ಗಮನಹರಿಸುವುದೇ ಇಲ್ಲ. ಇವರಿಗೆ ತಾವು ಶಿಕ್ಷಣ ಪಡೆಯಲು ಹಾಕಿದ ಬಂಡವಾಳವನ್ನು ವಾಪಾಸು ಗಳಿಸಬೇಕು.

ಕೆಲವು ವರ್ಷಗಳ ಹಿಂದೆ ವೈದ್ಯಕೀಯ ಕಾಲೇಜೊಂದರಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ ನಾನು ಕಂಡ ವಾಸ್ತವಗಳಲ್ಲಿ ಒಂದೆರಡನ್ನು ಓದುಗರ ಮುಂದಿಡುತ್ತೇನೆ.

ನಮ್ಮ ಮಂಗಳೂರಿನ ಒಂದೆರಡು ಮೆಡಿಕಲ್ ಕಾಲೇಜುಗಳನ್ನು ಬಿಟ್ಟರೆ ಹೆಚ್ಚಿನೆಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ Basic infrastructure ಗಳೇ ಇಲ್ಲ. ಕೇವಲ ಕಟ್ಟಡ ಕಟ್ಟಿ ಆಸ್ಪತ್ರೆ ಎಂಬ ಬೋರ್ಡ್ ನೇತಾಡಿಸಿ ಒಂದಷ್ಟು ಜನರನ್ನು ಬೆಡ್‍ಗಳಲ್ಲಿ ಮಲಗಿಸಿ ರೋಗಿಗಳೆಂದು ಹೇಳಿ M.C.I. (Medical Council of India) ನಿಂದ ಮಂಜೂರಾತಿ ಪಡೆದುಕೊಂಡು ಮೆಡಿಕಲ್ ಕಾಲೇಜು ಪ್ರಾರಂಭಿಸುತ್ತಾರೆ. ಅಲ್ಲಿ ಕಣ್ಣಿಗೆ ಕಾಣುವುದೆಲ್ಲವೂ ನಿಜವಲ್ಲ ಎಂಬ ಸತ್ಯವನ್ನು M.C.I. ನ ಅಧಿಕಾರಿಗಳು ಅರಿತಿರುತ್ತಾರೆ. ಅವರು ಆಡಳಿತ ಮಂಡಳಿಯವರು ನೀಡುವ “ಸೂಟ್‍ಕೇಸ್” ಪಡೆದು ಮಂಜೂರಾತಿ ನೀಡಿ ಹೋಗುತ್ತಾರೆ. ಈ ಮೆಡಿಕಲ್ ಕಾಲೇಜುಗಳು ಪ್ರತೀ ವರ್ಷವೂ ಹೆಚ್ಚುವರಿ ಪ್ರವೇಶಾತಿಗೆ ಅನುಮತಿ ಕೋರಿ M.C.I. ಯ ಮೊರೆ ಹೋಗುತ್ತವೆ. ಆ ಸಂದರ್ಭದಲ್ಲಿ M.C.I. ಇನ್ಸ್‍ಪೆಕ್ಷನ್ ಎಂಬ ನಾಟಕವಾಡುತ್ತದೆ. ಇನ್ಸ್‍ಪೆಕ್ಷನ್ ಕಾಲದಲ್ಲಿ ಆಸ್ಪತ್ರೆಯ ಬೆಡ್‍ಗಳ ಮೇಲೆ ಮಲಗಲು ಸಂಸ್ಥೆಗಳು ಬಾಡಿಗೆ ರೋಗಿಗಳನ್ನು ಹಿಡಿದು ತರುತ್ತಾರೆ. ಮಾತ್ರವಲ್ಲ ಬಾಡಿಗೆ ವೈದ್ಯರನ್ನು, ಬಾಡಿಗೆ ಅರೆವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸುತ್ತದೆ. ಇವ್ಯಾವುವೂ M.C.I. ಮಂದಿಗೆ ತಿಳಿಯದ ವಿಚಾರಗಳೇನಲ್ಲ. ಶಿಕ್ಷಣ ವ್ಯಾಪಾರಿಗಳು ನೀಡುವ “ಸೂಟ್‍ಕೇಸ್” ಮುಂದೆ ಅವೆಲ್ಲವೂ ಗೌಣ. ಸೂಟ್‍ಕೇಸ್ ಮಾತ್ರವಲ್ಲದೇ M.C.I. ಅಧಿಕಾರಿಗಳಿಗೆ ಸಾಕು ಸಾಕಾಗುವಷ್ಟು ಗುಂಡು ತುಂಡು ಸರಬರಾಜು ಮಾಡಲಾಗುತ್ತದೆ. ಅವರು ತಂಗುವ ಐಷಾರಾಮಿ ಫೈವ್‍ಸ್ಟಾರ್ ಹೋಟೆಲುಗಳ ಕೊಠಡಿಗಳಿಗೆ ಬೆಲೆವೆಣ್ಣುಗಳನ್ನು ಸರಬರಾಜು ಮಾಡಿ ಅವರ ರಾತ್ರಿಗಳನ್ನು ಸುಖಕರವಾಗಿಸಲಾಗುತ್ತದೆ.

ಡೀಮ್ಡ್ ಯುನಿವರ್ಸಿಟಿಗಳ ಕಥೆಯಂತೂ ಕೇಳುವುದೇ ಬೇಡ. ಅಲ್ಲಿ ಎಂತಹ ದಡ್ಡನೂ ಪಾಸಾಗಿ ಪದವಿ ಪಡೆಯುತ್ತಾನೆ. ಡೀಮ್ಡ್ ಯುನಿವರ್ಸಿಟಿಗಳಿರುವುದೇ ನಾಲಾಯಕ್‍ಗಳಿಗೆ ವೈದ್ಯಕೀಯ, ತಾಂತ್ರಿಕ ಪದವಿ ನೀಡುವುದಕ್ಕೆ ಎಂಬಷ್ಟರ ಮಟ್ಟಿಗೆ ಅವುಗಳ ಗುಣಮಟ್ಟ ಕುಸಿದಿವೆ. ಇತ್ತೀಚಿನ ವರ್ಷಗಳಲ್ಲಿ ಮಲ್ಟಿಮಿಲಿಯನರ್ಸ್‍ಗಳು ತಮ್ಮ ನಾಲಾಯಕ್ ಮಕ್ಕಳನ್ನು ವೈದ್ಯರನ್ನಾಗಿಯೋ, ಇಂಜಿನಿಯರ್‍ಗಳನ್ನಾಗಿಯೋ ಮಾಡಲು ಇಂತಹ ದುಡ್ಡು ಗೆಬರುವ ಡೀಮ್ಡ್ ಯುನಿವರ್ಸಿಟಿಗಳನ್ನೇ ಅವಲಂಬಿಸುತ್ತಿದ್ದಾರೆ. ಶಿಕ್ಷಣವನ್ನು ವ್ಯಾಪಾರದ ಸರಕಾಗಿಸಿರುವ ಕೆಲವು ಸಂಸ್ಥೆಗಳಿಗೆ ತಮ್ಮ ತಿಜೋರಿ ತುಂಬಿಸಲು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳೆಂಬ ಸಿಂಪಥಿ ಬೇರೆ ಕೇಡು. ಪ್ರತಿವರ್ಷವೂ ಸರಕಾರಿ ಸೀಟು ಹಂಚಿಕೆಯ ಸಂದರ್ಭದಲ್ಲಿ ಇವರ ತಕರಾರುಗಳಿದ್ದೇ ಇರುತ್ತವೆ. ಇವರುಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಮುದಾಯವನ್ನು ಗುರಾಣಿಯನ್ನಾಗಿಸಿ ಹಿಡಿಯುತ್ತಾರೆ. ತಮ್ಮ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಮೂರು ಬಿಲ್ಲಿಯ ಉಪಕಾರ ಮಾಡದಿದ್ದರೂ ಅಲ್ಪಸಂಖ್ಯಾತರೆಂಬ ಗುರಾಣಿಯಂತೂ ಇವರಿಗೆ ಬೇಕು.

ಕಳೆದ ಕೆಲವು ವರ್ಷಗಳಿಂದ ಸೀಟು ಹಂಚಿಕೆಯ ವಿಚಾರದಲ್ಲಿ ಇವರು ನ್ಯಾಯಾಲಯಗಳ ಮೆಟ್ಟಿಲೇರಿ “ನಮ್ಮದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾದುದರಿಂದ ನಮ್ಮಿಂದ ಸರಕಾರ ಸೀಟು ಕೇಳಬಾರದೆಂದು” ರಚ್ಚೆ ಹಿಡಿದು ಕೂರುತ್ತಾರೆ. ಇವರಿಗಂತೂ ಸಮುದಾಯದ ಮೇಲಿರುವ ತಮ್ಮ ಬಾಧ್ಯತೆ ನೆನಪಿರುವುದಿಲ್ಲ. ಸರಕಾರವಾದರೂ ಅದನ್ನು ಕೊಡಿಸಲೇಬೇಕು. ತಮ್ಮ ಲಾಭಕ್ಕಾಗಿ ಸಮುದಾಯದ “ಅಲ್ಪಸಂಖ್ಯಾತ” ಎಂಬ ಸಿಂಪಥಿಯನ್ನು ಇವರು ಎನ್‍ಕ್ಯಾಶ್ ಮಾಡಿಕೊಳ್ಳುತ್ತಾರಲ್ವಾ. ಕೆಲವು ಹಣೆಬರಹಗೆಟ್ಟ, ಮೂರೂ ಬಿಟ್ಟ ಸಂಸ್ಥೆಗಳಿವೆ. ತಮ್ಮ ಸಂಸ್ಥೆಯ ವಿದ್ಯಾರ್ಥಿನಿಗಳಿಗೆ ಹಿಜಾಬ್ ತೊಡಿಸಿ, ಏಪ್ರನ್ ಅಥವಾ ಸಂಸ್ಥೆಯ ಯೂನಿಫಾರ್ಮ್ ತೊಡಿಸಿ ಫೋಟೋ ತೆಗೆದು ಗಲ್ಫ್ ರಾಷ್ಟ್ರಗಳಿಗೆ ಕಳುಹಿಸಿ ನಾವು ಮುಸ್ಲಿಂ ಸಮುದಾಯವನ್ನು ಎಜುಕೇಟ್ ಮಾಡುತ್ತಿದ್ದೇವೆ. ಸಮುದಾಯದ ಯುವಪೀಳಿಗೆಗೆ ಉನ್ನತ ಶಿಕ್ಷಣ ಕೊಡುತ್ತೇವೆ ಎಂದು ಬಿಂಬಿಸಿ ಅಲ್ಲಿಂದಲೂ ದೊಡ್ಡ ಮೊತ್ತದ ದೇಣಿಗೆ ಪಡೆದುಕೊಳ್ಳುತ್ತಾರೆ.

ಅಲ್ಪಸಂಖ್ಯಾತ ಸಂಸ್ಥೆಯೆಂದು ಸರಕಾರದೊಂದಿಗೆ ಸೀಟು ಚೌಕಾಶಿಗಿಳಿಯುವ, ವಿದೇಶಗಳಿಗೆ ಪೋಟೋ ಕಳುಹಿಸುವ ಈ ಮಂದಿಗಳು ಸಮುದಾಯದ ಮಕ್ಕಳಿಗೆ ಉಚಿತ ಸೀಟು ಕೊಡುವುದೂ ಇಲ್ಲ ಅಥವಾ ಅರ್ಧ ಬೆಲೆಗೆ ಮಾರಿಕೊಳ್ಳುವುದೂ ಅಲ್ಲ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣವು ಜಾಗತೀಕರಣ, ಖಾಸಗೀಕರಣ, ನವಾಉದಾರೀಕರಣದ ದುಷ್ಪರಿಣಾಮಗಳು. ಇವು ನಿಸ್ಸಂಶಯವಾಗಿಯೂ ಮಾನವೀಯತೆಯನ್ನು ಕೊಲ್ಲುತ್ತದೆ. ಈ ಕೊಳ್ಳುಬಾಕ ಸಂಸ್ಕೃತಿ ಹೆತ್ತ ಅಮ್ಮ-ಅಪ್ಪಂದಿರನ್ನೂ, ಒಡ-ಹುಟ್ಟಿದವರನ್ನು ಹೆಂಡತಿ-ಮಕ್ಕಳನ್ನೂ ಗ್ರಾಹಕ ಎಂಬ ದೃಷ್ಟಿಯಲ್ಲೇ ನೋಡಲು ಕಲಿಸುತ್ತದೆ. ವಾಣಿಜ್ಯೀಕರಣಗೊಂಡ ಶಿಕ್ಷಣ ಸಂಸ್ಥೆಯ ಪೆÇ್ರಡಕ್ಟ್‍ಗಳು ಎಲ್ಲವನ್ನೂ ವ್ಯಾಪಾರೀ ದೃಷ್ಟಿಕೋನದಲ್ಲಿ ನೋಡುತ್ತದೆ.

(ಲೇಖಕರು ಸಾಮಾಜಿಕ ಕಾರ್ಯಕರ್ತರು ಮತ್ತು ರಾಜ್ಯದ ಪ್ರಮುಖ ಅಂಕಣಕಾರರಾಗಿದ್ದಾರೆ)

 

1 COMMENT

  1. ಆತ್ಮೀಯ ಸಾಲ ಹುಡುಕುವವರು
    ನಾವು ವಿಶ್ವದ ಪ್ರಮುಖ ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರತಿಷ್ಠಿತ ಹಣಕಾಸು ಕಂಪನಿಯಾಗಿದ್ದು, ನಮ್ಮ ವರ್ಗಾವಣೆಯನ್ನು 100% ಯಶಸ್ವಿಯಾಗಿಸಿದೆ. ನಾವು 3% ಬಡ್ಡಿಯೊಂದಿಗೆ ಸಾಲವನ್ನು ನೀಡುತ್ತೇವೆ ನಿಮಗೆ ಆಸಕ್ತಿ ಇದ್ದರೆ, ನಿಮ್ಮ ಸಾಲದ ಅರ್ಜಿಯನ್ನು ಈ ಇಮೇಲ್‌ನಲ್ಲಿ ನಮಗೆ ಕಳುಹಿಸಲು ನಾವು ಬಯಸುತ್ತೇವೆ:
    [email protected] ಅನೇಕ ಧನ್ಯವಾದಗಳು.

LEAVE A REPLY

Please enter your comment!
Please enter your name here