ಶಿಕ್ಷಣ ರಂಗದ ಕಗ್ಗೊಲೆಗೆ ಜೀವಂತ ಸಾಕ್ಷ್ಯಗಳು- 4

ನಿರೂಪಣೆ: ನಿಖಿಲ್ ಕೋಲ್ಪೆ

ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮೀಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರುಗಳನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ್ಯ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.


ಸಾಮಾನ್ಯ ನಾಗರಿಕರ ಅರಿವಿಗೇ ಬಾರದಂತೆ ಸರಕಾರ ಮತ್ತು ಖಾಸಗಿ ಕಾರ್ಪೊರೇಟ್ ದುಷ್ಟಕೂಟವು ಶಿಕ್ಷಣ ರಂಗದಲ್ಲಿ ಕಾರ್ಯಾಚರಿಸುತ್ತಿದೆ. ಸರಕಾರದ ಉದ್ದೇಶ ಶಿಕ್ಷಣ ರಂಗಕ್ಕೆ ವೆಚ್ಚ ಮಾಡುವ ಹಣವನ್ನು ಬೇರೆಡೆ ತಿರುಗಿಸುವುದಾದರೆ, ಖಾಸಗಿ ರಂಗದ ಉದ್ದೇಶವು ಬಂಡವಾಳಶಾಹಿ ಗುಣಸ್ವಭಾವವಾದ ಲಾಭ ಮಾತ್ರ. ಇದರ ಬಲಿಪಶುಗಳು ಮಾತ್ರ ದೇಶದ ಭವಿಷ್ಯ ಎನಿಸಿದ ಯುವಜನರು ಮತ್ತು ಅವರ ಹೆತ್ತವರು. ಈ ವಿಷಯ ನ್ಯಾಯಮಂಡಳಿಯ ಮುಂದೆ ಮಂಡಿಸಲಾದ ಸಾಕ್ಷ್ಯಗಳಿಂದ ಬಯಲಿಗೆ ಬಂತು.

2009ರಲ್ಲಿ ಹಿಂದಿನ ಸರಕಾರವು 2022ರ ಒಳಗೆ 50 ಕೋಟಿ ಜನರಿಗೆ ಕೌಶಲ ಒದಗಿಸುವ ಗುರಿಯನ್ನು ಹೊಂದಿರುವ ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಚಯಿಸಿತ್ತಾದರೂ, ಈಗಿನ ಸರಕಾರವು ತನ್ನ ಪ್ರಸಿದ್ಧ ‘ಸ್ಕಿಲ್ ಇಂಡಿಯಾ’ ಅಭಿಯಾನದ ಮೂಲಕ ಈ ಗುರಿಯನ್ನು 40 ಕೋಟಿಗೆ ಪರಿಷ್ಕರಿಸಿದ್ದು, ಈ ವಾಸ್ತವಾಂಶವನ್ನು ಅಡಗಿಸಿಡಲಾಗಿದೆ ಎಂದು ಪ್ರೊ. ರಘುರಾಮ್ ತಿಳಿಸಿದರು. ಅಸಂಖ್ಯಾತ ಖಾಸಗಿ ಶಾಲೆ ಮತ್ತು ಕಾಲೇಜುಗಳ ಒಡೆತನವನ್ನು ಕಾರ್ಪೊರೇಟ್ ಮಾಫಿಯಾ ಹೊಂದಿದ್ದು, ಶಿಕ್ಷಣದ ಕಾರ್ಪೋರೇಟೀಕರಣದ ಅಪಾಯಗಳ ಕುರಿತು ಪ್ರೊ. ರಘುರಾಮ್ ಮಾತನಾಡಿದರು. ಲಕ್ಷಾಂತರ ಕೋಟಿ ರೂ.ಗಳಲ್ಲಿ ದುಡಿಯದ ಆಸ್ತಿ (Non Performing Assets-NPA) ಅಥವಾ ವಸೂಲಾಗದ ಸಾಲಗಳನ್ನು ಮನ್ನಾ ಮಾಡಲು ಹಣ ಇರುವ ಸರಕಾರದಲ್ಲಿ ಶಿಕ್ಷಣಕ್ಕೆ ಹಣ ಇಲ್ಲದಿರುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

ದಂತ ವೈದ್ಯಕೀಯ ಮತ್ತು ವೈದ್ಯಕೀಯ ಕೋರ್ಸುಗಳಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET)ಯನ್ನು 2017ರಲ್ಲಿ ಕಡ್ಡಾಯಗೊಳಿಸುವ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಕೇಂದ್ರೀಕರಣಗೊಳಿಸಿದ ಕ್ರಮ ಮತ್ತು ಸರಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡು ದುರಂತ ಸಾವಿಗೆ ಶರಣಾದ ವಿದ್ಯಾರ್ಥಿನಿ ಅನಿತಾ ಅವರ ಪ್ರಕರಣವನ್ನು ಅವರ ಸಹೋದರ ಮಣಿರತ್ನಂ ಅವರು ತೀರ್ಪುಗಾರರ ಮಂಡಳಿಯ ಮುಂದೆ ತಂದರು.

ಕೃಷಿ ಕೂಲಿ ಕಾರ್ಮಿಕರೊಬ್ಬರ ಮಗಳಾಗಿದ್ದ ಅನಿತಾ, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರು. ಆಕೆ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸಿದ್ದು, ಆರ್ಥಿಕ ಮುಗ್ಗಟ್ಟಿನ ಹೊರತಾಗಿಯೂ 12ನೇ ತರಗತಿಯ ಪರೀಕ್ಷೆಯಲ್ಲಿ 1,200 ಅಂಕಗಳಲ್ಲಿ 1,176 ಅಂಕಗಳನ್ನು ಪಡೆದ ಈ ಪ್ರತಿಭಾವಂತ ವಿದ್ಯಾರ್ಥಿನಿಗೆ ‘ನೀಟ್’ ಪರೀಕ್ಷೆ ಪಾಸಾಗಲು ಸಾಧ್ಯವಾಗಿಲ್ಲ. ಏಕೆಂದರೆ, ಅದರಲ್ಲಿ ಕೇಂದ್ರೀಯ ಶಿಕ್ಷಣ (ಸಿಬಿಎಸ್‌ಸಿ) ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದ್ದು, ಅದು ಕಡೆಗಣಿತ ವರ್ಗಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳನ್ನು ಗಂಭೀರವಾದ ಅನನುಕೂಲತೆಗೆ ತಳ್ಳುತ್ತದೆ.

‘ನೀಟ್’ ಪರೀಕ್ಷೆಯ ಕಡ್ಡಾಯ ಹೇರಿಕೆಯ ವಿರುದ್ಧದ ಪ್ರತಿಭಟನೆಯಲ್ಲಿ ಅನಿತಾ ಮುಂಚೂಣಿಯಲ್ಲಿದ್ದರು ಮತ್ತು ಸುಪ್ರೀಂಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದ್ದ ಅರ್ಜಿದಾರರಲ್ಲಿ ಒಬ್ಬರೂ ಆಗಿದ್ದರು. ಆಕೆ ಮತ್ತು ಇತರ ವಿದ್ಯಾರ್ಥಿಗಳು ನಡೆಸಿದ ವಿವಿಧ ಯತ್ನಗಳು ಮತ್ತು ಸಕ್ರಿಯ ಹೋರಾಟದ ಹೊರತಾಗಿಯೂ, ತಮಿಳುನಾಡು ರಾಜ್ಯ ‘ನೀಟ್’ನಿಂದ ವಿನಾಯಿತಿ ಹೊಂದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಅನಿತಾ ತನ್ನ ಜೀವವನ್ನೇ ಕೊನೆಗೊಳಿಸುವ ಕಠಿಣ ಹೆಜ್ಜೆ ಇಟ್ಟರು. ಸರಕಾರದ ಈ ರೀತಿಯ ತಾರತಮ್ಯದ ಧೋರಣೆಯಿಂದ ಅತ್ಯಂತ ಹಿಂದುಳಿದ ಸಮುದಾಯಗಳಾದ ಎಸ್‌ಸಿ, ಎಸ್ಟಿ ಮತ್ತು ಓಬಿಸಿಯವರ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಮಣಿರತ್ನಂ ತನ್ನ ಸಾಕ್ಷ್ಯದಲ್ಲಿ ಒತ್ತಿಹೇಳಿದರು.

ಬದಲಾದ ಮನೋಭಾವ

ಜಾಗತೀಕರಣೋತ್ತರದಲ್ಲಿ ಭಾರತೀಯ ಕಾರ್ಪೋರೇಟ್‌ಗಳ ಚಿಂತನೆ ಕೂಡಾ ಸಂಪೂರ್ಣ ಬದಲಾಗಿದೆ. 2000ದ ದಶಕದಲ್ಲಿ ಎನ್‌ಡಿಎ ಸರಕಾರ ಇದ್ದಾಗ ಖಾಸಗೀಕರಣದ ಪೂರ್ಣ ನೀಲನಕ್ಷೆಯಾದ ಬಿರ್ಲಾ-ಅಂಬಾನಿ ವರದಿ ಬಿಡುಗಡೆಯಾಯಿತು ಎಂದು ಪ್ರೊ. ನಾರಾಯಣ್ ತಿಳಿಸಿದರು. ಜನರು ಮತ್ತು ಸಮಾಜದಲ್ಲಿ ವಿಶ್ಲೇಷಣಾತ್ಮಕ ಚಿಂತನೆಯನ್ನು ಬೆಳೆಸುವ ಸಾಮಾಜಿಕ ಮತ್ತು ಮಾನವಿಕ ವಿಜ್ಞಾನಗಳು ಕಾರ್ಪೋಪೋರೇಟ್‌ಗಳಿಗೆ ಯಾವುದೇ ಪ್ರಯೋಜನವಿಲ್ಲ. ಆದುದರಿಂದ ಅವುಗಳು ತಾಂತ್ರಿಕತೆಯ ಮೇಲೆ ಗಮನಕೇಂದ್ರೀಕರಿಸಿರುವ ಸರಕಾರದ ಯೋಜನೆಯ ಭಾಗವಾಗಿಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬಂದ ಯುಪಿಎ ಕೂಡಾ ಹಿಂದಿನ ಎನ್‌ಡಿಎ ಸರಕಾರದ ಧೋರಣೆಯನ್ನು ಮುಂದುವರಿಸಿತು. ಶಿಕ್ಷಣವನ್ನು ಒಂದು ಮಾರಾಟದ ಸರಕನ್ನಾಗಿ ಮಾಡಲು ಮತ್ತು ಜಾಗತೀಕರಣವನ್ನು ತರಲು ಗ್ಯಾಟ್ (ಜನರಲ್ ಎಗ್ರೀಮೆಂಟ್ ಆನ್‌ ಟ್ರೇಡ್ ಎಂಡ್ ಟಾರಿಫ್) ಅಡಿಯಲ್ಲಿ ಜಾಗತಿಕ ವ್ಯಾಪಾರ ಸಂಸ್ಥೆಗೆ 2005ರಲ್ಲಿ ಪ್ರಸ್ತಾವನೆ ಕಳುಹಿಸುವುದರ ಮೂಲಕ ಇದನ್ನು ಮಾಡಲಾಯಿತು ಎಂದು ಪ್ರೊ. ನಾರಾಯಣ್ ವಿವರಿಸಿದರು.

ಹಿಂದೆಲ್ಲಾ ಶಿಕ್ಷಣದಲ್ಲಿ ಪಾಲು ಹೊಂದಿದ್ದ ಬನ್ಷೀಧರ್, ಶ್ರೀ ರಾಮ್, ಧರಂವೀರ್ ಮುಂತಾದ ಕೈಗಾರಿಕೋದ್ಯಮಿ ಕುಟುಂಬಗಳು ಅಲ್ಪಾವಧಿಯ ಮಾರುಕಟ್ಟೆ ಕೇಂದ್ರಿತ ಕೋರ್ಸುಗಳನ್ನು ವಿರೋಧಿಸುವಲ್ಲಿ ಬೋಧಕ ವರ್ಗದ ಜೊತೆ ಜೊತೆಯಲ್ಲಿ ನಿಲ್ಲುತ್ತಿದ್ದರು ಎಂದು ಪ್ರೊ. ಶಾ ನೆನಪಿಸಿದರು. ಅವರು, ಬಂಡವಾಳಿಗರಾಗಿದ್ದರೂ, ತಿಳುವಳಿಕೆಯ ಸಾಮರ್ಥ್ಯ ಹೆಚ್ಚಿಸಿ, ಸಮರ್ಥ ನಾಯಕರನ್ನು ರೂಪಿಸಬಲ್ಲ ಸಾಂಪ್ರದಾಯಿಕ ಜ್ಞಾನಶಾಖೆಗಳ ಪರವಿದ್ದರು ಎಂದು ಪ್ರೊ. ಶಾ ಹೇಳಿದರು. ಆ ಪರಿಸ್ಥಿತಿ ಈಗ ಸಂಪೂರ್ಣ ಬದಲಾಗಿದೆ.

ಗುಜರಾತಿನ ಅತ್ಯಂತ ದೊಡ್ಡ ಮತ್ತು ಅತ್ತುತ್ತಮ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೆ ನೆರವಾಗಲು 1949ರಲ್ಲಿ ಕೈಗಾರಿಕೋದ್ಯಮಿ ಕಸ್ತೂರ್‌ಬಾ ಲಾಲ್ ಭಾಯ್ ಅವರು ಅದಕ್ಕೆ ಕೇವಲ ಒಂದು ರೂ. ಬೆಲೆಗೆ ದೊಡ್ಡ ಜಮೀನನ್ನು ಮಾರಿದಂತಹ ವಾತಾವರಣವು ಇಂದು ಬದಲಾಗಿದೆ ಎಂದು ಪ್ರೊ. ಶಾ ಹೇಳಿದರು. ಏನಿದ್ದರೂ, ಈಗಲೂ ‘ನಿರ್ಮಾ’ದ ಕರ್ಸನ್‌ದಾಸ್ ಪಟೇಲ್ ಮತ್ತು ‘ರಿಲಯನ್ಸ್’ನ ಮುಖೇಶ್ ಅಂಬಾನಿಯಂತವರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದ್ದರೂ, ಅವರ ಮುಖ್ಯ ಗಮನ ಲಾಭಕೇಂದ್ರಿತವಾಗಿರುವುದರಿಂದ ಶಿಕ್ಷಣವನ್ನು ಒಂದು ಸರಕಾಗಿ ಪರಿಗಣಿಸುತ್ತಿದ್ದಾರೆ ಎಂದು ಪ್ರೊ. ಶಾ ವಿವರಿಸಿದರು.

ತೆರಿಗೆದಾರರ ಹಣವನ್ನು ಸಾರ್ವಜನಿಕ ನಿಧಿಯಿಂದ ನಡೆಯುವ ಶಿಕ್ಷಣ ವ್ಯವಸ್ಥೆಗೆ ಬಳಸಲಾಗುತ್ತಿರುವುದಕ್ಕೆ ಮತ್ತೆ ಮತ್ತೆ ಆಕ್ಷೇಪ ಎತ್ತಲಾಗುತ್ತಿರುವುದನ್ನು ಪ್ರೊ. ನಾರಾಯಣ್ ಪ್ರಶ್ನಿಸಿದರು. ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ಜನರಿಗೆ ಕೈಗೆಟಕುವಂತೆ ಮಾಡುವುದರ ಮೂಲಕ ನೈಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದೇ ಸಾರ್ವಜನಿಕ ನಿಧಿಯಿಂದ ನಡೆಯುವ ವಿಶ್ವವಿದ್ಯಾಲಯಗಳ ಉದ್ದೇಶವಾಗಿದೆ. ತೆರಿಗೆ ಹಾಕಲಾಗುತ್ತಿರುವುದು ಬಡವರಲ್ಲಿ ಅತೀ ಬಡವರಿಗೂ ಶಿಕ್ಷಣ ಸಿಗುವಂತೆ ಮಾಡಲು. ಆದಾಯ ಮತ್ತು ಬಂಡವಾಳಗಳು ಸಾರ್ವಜನಿಕ ಹಣವಾಗಿದ್ದು, ಸರಕಾರ ಕೇವಲ ಅದರ ಪಾಲಕ ಅಥವಾ ಟ್ರಸ್ಟಿ ಮಾತ್ರ ಮತ್ತು ಹಣವನ್ನು ಹೇಗೆ ವೆಚ್ಚ ಮಾಡಬೇಕು ಎಂಬುದನ್ನು ನಿರ್ಧರಿಸುವುದು ಜನರಿಗೆ ಸೇರಿದ್ದು ಎಂದು ಪ್ರೊ. ನಾರಾಯಣ್ ಹೇಳಿದರು.

ಪ್ರಸ್ತುತ ಕೇಂದ್ರ ಸರಕಾರವು ಶಿಕ್ಷಣ ಕುರಿತ ಹೊಸ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಹಿಂದೆ ಸರಕಾರವು ಈ ವಿಷಯದಲ್ಲಿ ಕೆಲವು ಬಾರಿ ಹಿಂದೆ ಸರಿಯಬೇಕಾಗಿ ಬಂದಿದ್ದರೂ, ಹಲವು ಪ್ರಸ್ತಾಪಗಳನ್ನು ಸಂಸತ್ತಿನ ಮೆಟ್ಟಿಲು ಹತ್ತದೆಯೇ ಜಾರಿಗೊಳಿಸಲಾಗುತ್ತಿದ್ದು, ಇದಕ್ಕೆ ಒಂದು ಉದಾಹರಣೆ ಎಂದರೆ ಶ್ರೇಣೀಕೃತ ಸ್ವಾಯತ್ತತೆ ಕುರಿತ ನೀತಿ ಎಂದು ಅವರು ಎಚ್ಚರಿಸಿದರು.

ಕೃಪೆ: ವಾರ್ತಾಭಾರತಿ

LEAVE A REPLY

Please enter your comment!
Please enter your name here