ಲೇಖಕರು – ಶಾರೂಕ್ ತೀರ್ಥಹಳ್ಳಿ
ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಒಂದು ವೀಡಿಯೋ ವೈರಲ್ ಆಗಿತ್ತು ಅದರಲ್ಲಿ ಹಸಿದ ಮೊಸಳೆಯೊಂದು ಜಿಂಕೆಯನ್ನು ಬೇಟೆಯಾಡಿ ಇನ್ನೇನು ತಿಂದು ಮುಗಿಸಬೇಕು ಅಂದುಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ಆ ಮೊಸಳೆಗೆ ತಾನು ಬೇಟೆಯಾಡಿದ ಜಿಂಕೆ ಗರ್ಭಿಣಿ ಎಂದು ಅರಿವಾಯಿತು, ಆಗ ಆ ಮೊಸಳೆ ನಾನು ಗರ್ಭಿಣಿ ಜಿಂಕೆಯನ್ನು ಕೊಂದು ತಿಂದರೆ ಕೇವಲ ಒಂದು ಜೀವ ಮಾತ್ರ ಅಲ್ಲ ಅದರ ಹೊಟ್ಟೆಯೊಳಗಿರುವ ಇನ್ನೊಂದು ಜೀವಕ್ಕೂ ತೊಂದರೆ ಬರಬಹುದು ಎಂದು ಮನಗಂಡ ಮೊಸಳೆ ಬಾಯಿಯ ನೇರಕ್ಕೆ ಬಂದ ಆಹಾರವನ್ನು ಬಿಟ್ಟು ಕೊಟ್ಟು ಜಿಂಕೆಗೆ ಪುನರ್ ಜೀವನ ನೀಡಿತು. ಅದೇ ಸಮಯದಲ್ಲಿ ತೀರ್ಥಹಳ್ಳಿಯಲ್ಲಿ ಒಂದು ಘಟನೆ ನಡೆಯಿತು ಆ ಘಟನೆ ಸಾರ್ವಜನಿಕರ ಆಕ್ರೊಶಕ್ಕೂ ಕೂಡ ತೀವ್ರ ಕಾರಣವಾಗಿತ್ತು. ಪಟ್ಟಣದ ಹೊರ ವಲಯದ ಬಾಳೆಬೈಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ರಾತ್ರಿ ವೇಳೆಯಲ್ಲಿ ಗಬ್ಬದ ಹಸುವಿನ ಕಾಲನ್ನು ಕಡಿದು ಕಾರಿನಲ್ಲಿ ಕಸಾಯಿಖಾನೆಗೆ ಸಾಗಿಸುವ ವಿಫಲ ಪ್ರಯತ್ನ ನಡೆದಿತ್ತು. ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೂಡ ಸಫಲರಾಗಿದ್ದರು. ಗಬ್ಬದ ಹಸು ಏಪ್ರೀಲ್ 20ರಂದು ಕರುವಿಗೆ ಜನ್ಮ ನೀಡಿದರು ಕೂಡ ಕರು ಜನಿಸುವಾಗಲೇ ಅಸುನೀಗಿತ್ತು. ಆ ಹಸುನೀಗಿದ ಕರು ಮತ್ತು ಅದರ ತಾಯಿಯನ್ನು ನೋಡಿದರೆ ಎಂಥವರ ಕಣ್ಣಿನಿಂದ ನೀರು ಬರಿಸದೇ ಇರುತ್ತಿರಲಿಲ್ಲ. ಹಸು ಗರ್ಭಿಣಿ ಎಂದು ತಿಳಿದು ಕೂಡ ಕದ್ದು ಕಸಾಯಿಖಾನೆಗೆ ಸಾಗಿಸಲು ಪ್ರಯತ್ನಸಿ ಸಿಕ್ಕಿ ಬಿದ್ದ ಆರೋಪಿಗಳ ವಿರುದ್ದ ನಾಗರಿಕರು ತೀವ್ರ ಆಕ್ರೋಶವನ್ನು ಸಹ ವ್ಯಕ್ತಪಡಿಸಿದ್ದರು.
ಪ್ರತಿನಿತ್ಯ ಈ ರೀತಿಯ ಹಲವು ಘಟನೆಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಲಿರುತ್ತದೆ. ಕೆಲವೊಂದು ಘಟನೆಗಳು ಮಾತ್ರ ನಮಗೆ ಕಾಣಲು ಸಿಗುತ್ತದೆ. ಒಂದು ಕಾಲವಿತ್ತು ಆಗ ಮಾನವ ಪ್ರಾಣಿಗಳಂತೆ ಕಾಡುಗಳಲ್ಲಿ ಜೀವಿಸಿ ಗಡ್ಡೆ ಗೆಣಸುಗಳನ್ನು ತಿಂದು ಪ್ರಾಣಿಗಳ ಜೊತೆಯಲ್ಲೆ ಜೀವಿಸುತ್ತಿದ್ದಂತಹ ಕಾಲ, ವರ್ಷಗಳು ಕಳೆದಂತೆ ಮಾನವ ಆಧುನೀಕರಣದ ಕಡೆಗೆ ಮುಖ ಮಾಡಿದ ಕೆಲವೊಮ್ಮೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡ, ಕೆಲವೊಮ್ಮೆ ಎಲ್ಲವನ್ನೂ ಗಾಳಿಗೆ ತೂರಿ ತನಗೆ ಮನಬಂದತೆ ಜೀವನ ನಡೆಸಲು ತೊಡಗಿದೆ. ಮನುಷ್ಯನಿಗೆ ಯಾವಾಗ ತನ್ನ ಅಸ್ಥಿತ್ವದ ಬಗ್ಗೆ ಸರಿಯಾದ ಜ್ಞಾನ ಇಲ್ಲದೇ ಹೋಯಿತೋ ಆಗ ಮನುಷ್ಯ ಮೃಗಗಳಿಗಿಂತ ಕಡೆಯಾಗಿ ಹೋದ. ಈಗಲೂ ಕೂಡ ನಾವು ನೋಡುವುದಾದರೇ ಮನುಷ್ಯ ಸಾಮಾಜಿಕ ಜೀವಿ ಎನ್ನುವುದನ್ನು ಮರೆತು ಸಮಾಜದಿಂದ ದೂರ ಸರಿಯಲು ಪ್ರಯತ್ನಿಸಿ ತನ್ನ ಕುಟುಂಬ ಸಂಬಂಧ, ನೆರೆಕರೆಯವರೊಂದಿಗಿನ ಸಂಬಂಧ, ತಾನು ಜೀವಿಸುವ ಸಮಾಜದೊಂದಿಗಿನ ಸಂಬಂಧವನ್ನು ತೊರೆದು ಬಹುದೂರ ನಡೆಯಲು ಪ್ರಯತ್ನಿಸಿದ ಇದರಿಂದಾಗಿ ಪರಸ್ಪರ ಪ್ರೀತಿ, ಸ್ನೇಹ, ಶಾಂತಿ, ಅನುಕಂಪ ಎಲ್ಲವೂ ಕೂಡ ಅವನಲ್ಲಿ ಇಲ್ಲದಂತಾಯಿತು. ಆಧುನಿಕ ಶಿಕ್ಷಣವನ್ನು ಪಡೆದ ಮನುಷ್ಯ ಆಧುನಿಕತೆಗೆ ಮಾರು ಹೋಗಿ ಕುಟುಂಬ ಸಂಬಂಧದಿಂದ ದೂರ ಸರಿದ, ತನ್ನನ್ನು ಹೊತ್ತು ಹೆತ್ತವರನ್ನೇ ವೃದ್ದಾಶ್ರಕ್ಕೆ ಅಟ್ಟಲೂ ಕೂಡ ಮುಂದಾದ. ಇನ್ನೊಂದು ಕಡೆಯಲ್ಲಿ ನಾವು ಏನು ಪ್ರಾಣಿಗಳನ್ನು ಕಡೆಗಳಿಸುತ್ತೇವೆಯೋ ಅಂತಹ ಪ್ರಾಣಿಗಳೆ ಅದೇಷ್ಟೊ ಮಾನವ ಜೀವಗಳನ್ನು ರಕ್ಷಿಸಿದ ಉದಾಹರಣೆಗಳು ಬಹಳಷ್ಟು ಇದೆ. ಮತ್ತು ಅವುಗಳು ತನ್ನ ಕುಟುಂಬದೊಂದಿಗೆ ಜೀವನ ನಡೆಸುವ ನಿದರ್ಶನಗಳು ಕೂಡ ನಾವು ಕಾಣಬಹುದಾಗಿದೆ.
ಅಂದಹಾಗೆ, ವಾಟ್ಸಪ್ ಫೇಸ್ ಬುಕ್ ನಲ್ಲಿಯೂ ಈ ಸಂದೇಶ ಹರಿದಾಡುತ್ತಿತ್ತು. ಆ ಮೊಸಳೆ ಯಾಕೆ ಜಿಂಕೆಯನ್ನು ಬಿಟ್ಟು ಬಿಡ್ತು ? ಆ ವಿಡಿಯೋದ ಬೆಲೆ ಎನಿಮಲ್ ಪ್ಲಾನೆಟ್ ಕೊಟ್ಟಿದ್ದು ಸುಮಾರು ಒಂದು ಲಕ್ಷ ಡಾಲರ್, ಮನುಷ್ಯತ್ವ ಇಲ್ಲದ ಮಾನವನಿಗೆ ಆ ವಿಡಿಯೋವನ್ನು ನೋಡಿ ಕೂಡ ಏನು ಪಾಠ ಕಲಿಯೂವುದಿಲ್ಲ. ಏಕೆಂದರೆ ಆ ಮೊಸಳೆ ಯಾವ ಯುನಿವರ್ಸಿಟಿಯಲ್ಲಿ ಪದವಿ ಪಡೆದಿಲ್ಲಾ. ಅದು ಯಾವ ಮಸೀದಿಯಲ್ಲಿ ನಮಾಝ್ ಮಾಡಿಲ್ಲ, ಅದು ಯಾವ ಚರ್ಚ್ ನಲ್ಲಿ ಪ್ರಾರ್ಥನೆ ಮಾಡಿಲ್ಲ. ಅದು ಯಾವ ದೇವಸ್ಥಾನದಲ್ಲಿಯೂ ಕೂಡ ಪೂಜೆಗೆ ಹೋಗಿಲ್ಲ, ಸಂಸ್ಕಾರವಾಗಲಿ ಅರಿವಾಗಲಿ ಎಲ್ಲೂ ಕಲಿಯುವ ಕಲಿಸುವ ಅವಶ್ಯಕತೆ ಇಲ್ಲ ಅನುಭವ ಸಾಕಲ್ಲವೆ. ಮಾನವೀಯತೆ ಎಂದು ಹೇಳುತ್ತೇವೆ ಬುದ್ದಿವಂತರು ಅನಿಸಿಕೊಂಡಿದ್ದೇವೆ ನಾವು ಎಲ್ಲಾ ದಿನವೂ ಕಿತ್ತಾಡುತ್ತಿದ್ದೇವೆ, ಮನುಷ್ಯರೆಲ್ಲರೂ ಒಂದೇ ಆದರೂ ಚಾಕು ಚೂರಿ ಬಾಂಬ್ ಬಂದೂಕುಗಳನ್ನ ಹಿಡಿದುಕೊಂಡು ಬಲಿಗಾಗಿ ಕಾದು ಕುಳಿತಿದ್ದೇವೆ, ಪ್ರಾಣಿಗಳಿಗಿರುವಷ್ಟು ಧರ್ಮ, ಕರ್ಮ, ಅರಿವು ಮನುಷ್ಯನಿಗಿಲ್ಲ ಎಂಬುದನ್ನು ಮತ್ತೆ ಮತ್ತೆ ಸಾಬೀತು ಪಡಿಸುತ್ತಿದೆ. ಮನುಷ್ಯನ ಯೋಗ್ಯತೆ ಇಲ್ಲಿದೆ ನೋಡು ಎಂದು ನಮ್ಮನ್ನು ಅಣುಕಿಸಿದಂತಿದೆ.
ಈ ಎರಡು ಘಟನೆಗಳನ್ನು ವಿಮರ್ಶಿಸಿ ಆಲೋಚಿಸಿದಾಗ ನಮ್ಮ ಮನದಲ್ಲಿ ಒಂದು ವಿಷಯ ಪದೇ ಪದೇ ಮೂಡಿಬರುತ್ತದೆ ಅದೇನೆಂದರೆ ಪ್ರಾಣಿಗಳಲ್ಲೆ ಶ್ರೇಷ್ಟವಾದ, ಬುದ್ದಿವಂತ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು, ಸರಿ ತಪ್ಪುಗಳನ್ನು ತಿಳಿದು ನಡೆಯುವ ಮನುಷ್ಯ ಪ್ರಾಣಿಗಿಂತ, ಯಾರಿಗೂ ಬೇಡವಾದ ಕೇವಲ ಕ್ರೂರತೆಗೆ ಹೆಸರಾದ ಮೂಕ ಮೂಸಳೆ ಎಂಬ ಪ್ರಾಣಿಯ ಮಾನವೀಯ ಗುಣವನ್ನು ನೋಡಿದ ಅದೆಂತಹ ಕಠೋರ ಹೃದಯವನ್ನು ಸಹ ಕರಗಿಸಿತು.