ಲೇಖಕರು: ಎಲ್ದೋ ಹೊನ್ನೇಕುಡಿಗೆ.
9731315193.

ರಾಸ್ ಬಿಹಾರಿ ಬೋಸ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ವಿಶೇಷ ಲೇಖನ

ಅದೊಂದು ಸಂಜೆ ಗುರುಗಳಾದ ಚಾರುಚಂದರಾಯ್ ತಮ್ಮ ಮೂವರು ವಿದ್ಯಾರ್ಥಿಗಳೊಂದಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡಿದ ನಂತರ “ನಿನ್ನ ಬಳಿ ಒಂದೇ ಗುಂಡು ಇದ್ದಾಗ ನೀನು ಬ್ರಿಟಿಷರ ಕೈಗೆ ಸಿಕ್ಕಿ ಬಿದ್ದರೆ ಏನು ಮಾಡುವೆ”? ಎಂಬ ಪ್ರಶ್ನೆಯನ್ನು ಶಿಷ್ಯರ ಮುಂದಿಟ್ಟರು.
ಮೊದಲನೆಯ ಶಿಷ್ಯ: ಬ್ರಿಟಿಷರ ಕೈಗೆ ಸಿಕ್ಕಿ ಹಾಕಿಕೊಳ್ಳುವದಕ್ಕಿಂತ ನಾನೇ ಆ ಗುಂಡಿನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದ.

ಎರಡನೆಯ ಶಿಷ್ಯ: ನಾನು ಆ ಗುಂಡಿನಿಂದ ದೇಶದ್ರೋಹಿಯನ್ನು ಮುಗಿಸುತ್ತೇನೆಂದ.
ಮೂರನೆಯ ಶಿಷ್ಯ: ಏನೂ ಉತ್ತರ ನೀಡದೆ ಸುಮ್ಮನಿದ್ದ. ಮರುದಿನ ಶಿಷ್ಯನನ್ನು ಭೇಟಿ ಮಾಡಿ ಗುರುಗಳು “ನನ್ನ ಪ್ರಶ್ನೆಗೆ ನೀನೇಕೆ ಉತ್ತರ ನೀಡಲಿಲ್ಲ”? ಎಂದು ಕೇಳಿದರು.
ಅದಕ್ಕುತ್ತರಿಸಿದ ಶಿಷ್ಯ ”ನಾನು ಬ್ರಿಟಿಷ್ ಸೈನ್ಯ ಸೇರಿ ಅವರಿಂದ ತರಬೇತಿ ಪಡೆದು ಭಾರತೀಯರ ಸೈನ್ಯವನ್ನು ಕಟ್ಟುತ್ತೇನೆ, ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಕಟ್ಟುತ್ತೇನೆ” ಎಂದ! ಗುರುಗಳ ಕಣ್ಣಂಚಿನಲ್ಲಿ ಹನಿಮುತ್ತುಗಳು ಉರುಳಿದವು.
ಇತಿಹಾಸದ ಅದ್ಭುತವೆಂದರೆ ಈ ಮೂರು ಶಿಷ್ಯರು ನುಡಿದಂತೆ ನಡೆದರು. ಮೊದಲ ಶಿಷ್ಯ ಪ್ರಪುಲ್ಲ ಚಾಕಿ, ಎರಡನೇ ಶಿಷ್ಯ ಕನೈಲಾಲ್, ಹಾಗೂ ಮೂರನೆಯ ಶಿಷ್ಯನೇ ರಾಸ್ ಬಿಹಾರಿ ಬೋಸ್!

ಈ ಮೂರನೆ ಶಿಷ್ಯ1886 ಮೇ 25ರಂದು ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯ ಪಲರಾಬಿಘಾಟಿ ಎಂಬ ಹಳ್ಳಿಯಲ್ಲಿ ಬಿನೋದ್ ಬಿಹಾರಿ ಬೋಸ್ ಮತ್ತು ಭುವನೇಶ್ವರಿ ದಂಪತಿಗಳ ಮಗನಾಗಿ ಜನಿಸಿದರು

ಒಮ್ಮೆ ರಾಸ್ ಬಿಹಾರಿ ಬೋಸ್ ತಮ್ಮ ಸಹ ಕ್ರಾಂತಿಕಾರಿಗಳೊಂದಿಗೆ ಸಭೆ ಸೇರಿದ್ದ ಮನೆಯನ್ನು ಶಸ್ತ್ರಸಜ್ಜಿತ ಬ್ರಿಟಿಷ್ ಪೊಲೀಸ್ ಪಡೆ ಸುತ್ತುವರಿಯಿತು. ಕೆಲವು ಕ್ಷಣಗಳ ಹಿಂದೆ ಪ್ರಶಾಂತವಾಗಿದ್ದ ವಾತಾವರಣ ಒಮ್ಮೆಲೆ ಆತಂಕ ಗಾಬರಿಗಳಿಂದ ಕೂಡಿದೆ. ಕಾರಣ ಅವರು ಹಿಡಿಯ ಹೊರಟಿದ್ದು ಬ್ರಿಟಿಷರಿಗೆ ಸಿಂಹಸ್ವಪ್ನನಾದ ಕ್ರಾಂತಿಕಾರಿಯನ್ನು. ಈ ಮಧ್ಯೆ ಮಲ ಹೊರುವವನೊಬ್ಬ ತಲೆಯ ಮೇಲೆ ಗೊಬ್ಬರದ ಮಂಕರಿಯನ್ನು ಹೊತ್ತು ಆ ಮನೆಯಿಂದ ಹೊರಬಂದ. ಪೊಲೀಸರು ಮೂಗು ಮುಚ್ಚಿಕೊಂಡು ಪಕ್ಕಕ್ಕೆ ಸರಿದರು. ನಂತರ ಪೊಲೀಸರು ಆ ಮನೆಯ ಕೋಣೆ ಕೋಣೆಗೂ ನುಗ್ಗಿ ಅಲ್ಲಿದ್ದವರನ್ನೆಲ್ಲಾ ಹೊರಗೆಳೆದು ತಂದರು. ಆದರೆ ಅವರಲ್ಲಿ ರಾಸ್ ಬಿಹಾರಿ ಇರಲಿಲ್ಲ. ನಂಬಿಗಸ್ತ ಮಾಹಿತಿದಾರ ರವಾನಿಸಿದ್ದ ಸುದ್ದಿ ತಪ್ಪಂದೆಣಿಸಿ ಪೊಲೀಸರು ಬರಿಗೈಯಲ್ಲಿ ಹಿಂತಿರುಗಿದರು. ಕೆಲವು ದಿನಗಳ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿತು ಮಲಹೊರುವವನ ವೇಷಧರಿಸಿ ಹೊರಬಂದ ವ್ಯಕ್ತಿಯೇ ರಾಸ್ ಬಿಹಾರಿ ಬೋಸ್ ಎಂದು!

ತಮ್ಮ ಮಾತೃಭಾಷೆ ಬಂಗಾಳಿಯೊಂದಿಗೆ ಹಿಂದಿ, ಪಂಜಾಬಿ, ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ರಾಸ್ ಬಿಹಾರಿಯವರು ಸಾಧಿಸಿದ್ದ ಹಿಡಿತ ಪೊಲೀಸರಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಿದ್ದವು

ಒಂದರ ಮೇಲೊಂದರಂತೆ ಕ್ರಾಂತಿಕಾರಿ ಚಟುವಟಿಕೆಯನ್ನು ಸಂಘಟಿಸಿ ಕಾರ್ಯರೂಪಕ್ಕೆ ತರುತ್ತಿದ್ದ ರಾಸ್ ಬಿಹಾರಿಯವರು ಬ್ರಿಟಿಷರ ವಾಂಟೆಡ್ ಪಟ್ಟಿಯ ಬಹುಮುಖ್ಯ ಕ್ರಾಂತಿಕಾರಿಯಾದರು ತತ್ಸಂಬಂಧ ಬ್ರಿಟಿಷರು ಅವರನ್ನು ಜೀವಂತವಾಗಿ ಅಥವಾ ಮೃತವಾಗಿಯಾದರು ಹಿಡಿಯಬೇಕೆಂದು ಅತ್ಯಂತ ಪ್ರಬಲವಾದ ಬಲೆಯನ್ನು ಹಣೆದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿಯುತ್ತಿದ್ದಂತೆಯೇ ಅವರ ಸ್ನೇಹಿತರು ರಾಸ್ ಬಿಹಾರಿಯವರನ್ನು ಭಾರತ ಬಿಟ್ಟುಹೋಗುವುದು ಕ್ಷೇಮವೆಂದು ಒತ್ತಾಯಿಸಿದರು. ಹಾಗಾಗಿ ಅವರು 1915 ಮೇ 12ರಂದು ದೇಶ ಬಿಟ್ಟು ಹೊರಟು ಹೋದರು.

ದೇಶದ ಒಳಗಿದ್ದರೇನು ಹೊರಗಿದ್ದರೇನು ಹೋರಾಟ ಮಾತ್ರ ನಿರಂತರ! ಮೊದಲು ಸಿಂಗಾಪುರ ತಲುಪಿದ ರಾಸ್ ಬಿಹಾರಿಯವರು ಅಲ್ಲಿಂದ ಜಪಾನಿಗೆ ಪ್ರಯಾಣಿಸುತ್ತಾರೆ, ಜಪಾನಿನಲ್ಲೂ ಹಲವಾರು ಸಭೆಗಳನ್ನು ಸಂಘಟಿಸಿ ತಾಯ್ನಾಡನ್ನು ಸ್ವತಂತ್ರಗೊಳಿಸುವ ಕಾಯಕದಲ್ಲಿ ನಿರತರಾಗುತ್ತಾರೆ. ಇವರು ಬ್ರಿಟಿಷರಿಂದ ತಲೆಮರೆಸಿಕೊಂಡು ಬಂದಿರುವ ಕ್ರಾಂತಿಕಾರಿಯೆಂದು ತಿಳಿಯುತ್ತಿದ್ದಂತೆ ಜಪಾನಿನ ಸರ್ಕಾರವು ಇವರನ್ನು ಜಪಾನ್ ಬಿಟ್ಟು ತೊಲಗುವಂತೆ ಬಹಿಷ್ಕಾರ ಆದೇಶವನ್ನು ಹೊರಡಿಸುತ್ತದೆ. ಆಗ ಅಲ್ಲಿನ  ಟೊಯಮ ಎಂಬ ರಾಜಕಾರಣಿಯೊಬ್ಬರು ಅವರ ಸ್ನೇಹಿತ ಅಯ್ಜೊಸೊಮ ಎಂಬುವರ ಮನೆಯಲ್ಲಿ ರಾಸ್ ಬಿಹಾರಿಯವರಿಗೆ  ಆಶ್ರಯ ಒದಗಿಸುತ್ತಾರೆ. ತದನಂತರ ಕೇವಲ ನಾಲ್ಕು ತಿಂಗಳಲ್ಲಿ ಜಪಾನಿ ಭಾಷೆಯನ್ನು ಕಲಿತು ಅಯ್ಜೊಸೊಮ  ಅವರ ಪುತ್ರಿ ಟೊಶಿಕೊ ಅವರನ್ನು ವರಿಸುತ್ತಾರೆ. ಅವರಿಗೆ ಇಬ್ಬರು ಮಕ್ಕಳು ಜನಿಸುತ್ತಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಅವರ ಪತ್ನಿ ಮೃತರಾಗುತ್ತಾರೆ. ಆ ನೋವೂ ಅವರನ್ನು ತಮ್ಮ ಗುರಿಯಿಂದ  ಎಳ್ಳಷ್ಟೂ ವಿಚಲಿತಗೊಳಿಸಲಿಲ್ಲ.

1942ರ  ಸೆಪ್ಟೆಂಬರ್ನಲ್ಲಿ ಐತಿಹಾಸಿಕ ಇಂಡಿಯನ್ ನ್ಯಾಷನಲ್ ಆರ್ಮಿ(INA)ಯನ್ನು ಅಧಿಕೃತವಾಗಿ ಸ್ಥಾಪಿಸಿದ ರಾಸ್ ಬಿಹಾರಿ ಬೋಸ್ ರು ನೇತಾಜಿ ಸುಭಾಷ್ಚಂದ್ರ ಬೋಸ್ ರವರನ್ನು ಪೂರ್ವ ಏಷ್ಯಾಕ್ಕೆ ಬಂದು INAಯ ನೇತೃತ್ವ ವಹಿಸಬೇಕೆಂದು ಆಮಂತ್ರಿಸಿದರು. ನೇತಾಜಿಯವರು ಹರ್ಷದಿಂದ ಇದನ್ನು ಸ್ವೀಕರಿಸಿದರು.

1943 ಜುಲೈ 4 ರಂದು ಸಿಂಗಾಪುರದಲ್ಲಿ ನಡೆದ ಐತಿಹಾಸಿಕ ಅಧಿವೇಶನದಲ್ಲಿ ರಾಸ್ ಬಿಹಾರಿ ಬೋಸ್ ಮತ್ತು  ಸುಭಾಷ್ ಚಂದ್ರ ಬೋಸರು ಅಕ್ಕ ಪಕ್ಕದಲ್ಲಿ ನಿಂತು ನೆರೆದಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ರಾಸ್ ಬಿಹಾರಿಯವರು “ಸ್ನೇಹಿತರೆ ಮತ್ತು ಸಹಯೋಧ ಕಾಮ್ರೇಡರೆ, ಇಂದು ನಾನು ನಿಮ್ಮೆಲ್ಲರ  ಉಪಸ್ಥಿತಿಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಮತ್ತು  ಸುಭಾಷ್ಚಂದ್ರ ಬೋಸ್ ರನ್ನು ಪೂರ್ವ ಏಷ್ಯಾದಲ್ಲಿ  ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ ಅಧ್ಯಕ್ಷರಾಗಿ  ನೇಮಿಸುತ್ತಿದ್ದೇನೆ” ಎಂದು ಘೋಷಿಸಿದರು.  ನೇತಾಜಿಯವರು ಆ ದೊಡ್ಡ ಜವಾಬ್ದಾರಿಯನ್ನು ಎಲ್ಲ ಗೌರವಾದರಗಳಿಂದ, ನಮ್ರತೆಯಿಂದ ಸ್ವೀಕರಿಸಿದರು.

ಸಕ್ಕರೆ ಕಾಯಿಲೆ ಮತ್ತಿತರ ತೊಂದರೆಗಳಿಂದಾಗಿ ಹಾಸಿಗೆ ಹಿಡಿದಿದ್ದ ರಾಸ್ ಬಿಹಾರಿಯವರು 1945 ಜನವರಿ 21ರಂದು ಕೊನೆಯುಸಿರೆಳೆದರು.
ರಾಸ್ ಬಿಹಾರಿಯವರ ದೇಹಕ್ಕೆ ಹೂಗುಚ್ಚವಿರಿಸಿ ಅತಿ ಭಾವುಕತೆಯಿಂದ ನೇತಾಜಿಯವರು ಹೀಗೆಂದರು “ಭಾರತದಲ್ಲಿ ರಾಸ್ ಬಿಹಾರಿಯವರು ಬ್ರಿಟಿಷರ ವಿರುದ್ಧ ಎಸಗುತ್ತಿದ್ದ ಸಾಹಸಮಯ ಕೃತ್ಯಗಳನ್ನು ಕೇಳಿ ನಾ ಪುಳಕಿತಗೊಳ್ಳುತ್ತಿದ್ದೆ.  ಈಗ ಮೂವತ್ತು ವರ್ಷಗಳ ನಂತರ ಪೂರ್ವ ಏಷ್ಯಾದಲ್ಲಿ ಅವರ ನಿಕಟ  ಸಂಪರ್ಕಕ್ಕೆ ಬಂದಾಗ ಅವರ ಅದಮ್ಯ ಉತ್ಸಾಹ ಮತ್ತು ಅಪಾರ ಆಶಾವಾದದಿಂದ ನಾನು ಪ್ರಭಾವಿತನಾದೆ. ಅವರ ಇಳಿ ವಯಸ್ಸಾಗಲಿ ಅಥವಾ ಅನಾರೋಗ್ಯವಾಗಲಿ ಅವರ ಹೋರಾಟದ ಕೆಚ್ಚನ್ನು ಕುಗ್ಗಿಸಲಿಲ್ಲ”!.

ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿದ್ದ ಕ್ರಾಂತಿಕಾರಿಗಳಲ್ಲಿ ಭಾರತದ ಒಳಗಾಗಲಿ,  ಭಾರತದ ಹೊರಗಾಗಲಿ,  ಬ್ರಿಟಿಷ್ ಸಾಮ್ರಾಜ್ಯದ ದಕ್ಷ ಪೊಲೀಸ್ ಪಡೆಗೆ ಸೆರೆಯಳಾಗದೆ ಒಂದು ದಿನವೂ ಲಾಕಪ್ ನಲ್ಲಿ ಕಳೆಯದೆ ಕಾರ್ಯನಿರ್ವಹಿಸಿದ ಅದ್ವಿತೀಯ ಹೆಗ್ಗಳಿಕೆ ರಾಸ್ ಬಿಹಾರಿಯವರಿಗೆ ಸಲ್ಲುತ್ತದೆ. ಸಚೀಂದ್ರನಾಥ್ ಸನ್ಯಾಲ್, ಕರ್ತಾರ್ ಸಿಂಗ್ ಸರಬ, ವಿಷ್ಣುಗಣೇಶ್ ಪಿಂಗ್ಲೆ,  ಅಮೀರ್ ಚಾಂದ್,  ವಿನಾಯಕ್ ರಾವ್ ಕಾಪ್ಲೆ, ಅಬಾದ್ ಬಿಹಾರಿ, ಬಲ್ಮೊಕಂಡ್,  ಬಸಂತ್ ಕುಮಾರ್ ಬಿಶ್ವಾಸ್,  ಕುನ್ವರ್ ಪ್ರತಾಪ್ ಸಿಂಗ್ ಹೀಗೆ ರಾಸ್ ಬಿಹಾರಿಯವರ ಮೂಲಕ ಸ್ವಾತಂತ್ರ್ಯ ಹೋರಾಟಕ್ಕಿಳಿದವರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ನಯವಂಚನೆ, ಶೋಷಣೆಗೊಳಗಾದ ಜನರ ಬಗ್ಗೆ ಅವರಿಗಿದ್ದ ಪ್ರೀತಿ-ಅನುಕಂಪ ಹಾಗೂ ಆಳುವ ವರ್ಗ ನಡೆಸುವ ಅನ್ಯಾಯ-ಅಕ್ರಮಗಳ ವಿರುದ್ಧ ಅವರಿಗಿದ್ದ ಆಕ್ರೋಶ, ಅಸಹನೆಗಳು ಅವರಲ್ಲಿ ಆ ಅಪ್ರತಿಮ ಕೆಚ್ಚನ್ನು ಎದೆಗಾರಿಕೆಯನ್ನೂ ಬೆಳೆಸಿತ್ತು.  ಪರಕೀಯರ ಆಳ್ವಿಕೆ ಕಾಲದಲ್ಲಿ ರಾಜಿರಹಿತವಾಗಿ ಅಂದಿನ ಕ್ರಾಂತಿಕಾರಿಗಳು ಹೋರಾಡಿದಂತೆ ಇಂದಿನ ಸಮಾಜದಲ್ಲಿರುವ ಸಮಸ್ಯೆಗಳ ವಿರುದ್ಧ ಜಾತಿ, ಧರ್ಮ, ಪ್ರಾದೇಶಿಕತೆಯ ಭೇದಕ್ಕೊಳಗಾದೇ ಯುವಕರು ಸಂಘಟಿತರಾಗಿ ಹೋರಾಡುವುದೇ ನಾವು ರಾಸ್ ಬಿಹಾರಿ ಬೋಸ್ ರವರಿಗೆ  ಸಲ್ಲಿಸಬಹುದಾದ ನೈಜ ಗೌರವ!

LEAVE A REPLY

Please enter your comment!
Please enter your name here