• ಯೋಗೇಶ್ ಮಾಸ್ಟರ್.

ಪುಸ್ತಕ ವಿಮರ್ಶೆ

ವಿವಿಧ ರಚನಾಕಾರರ ಸ್ತೋತ್ರಗಳ ಸಂಗ್ರಹ ಈ ಸ್ತವಕುಸುಮಾಂಜಲಿ. ಶ್ರೀ ರಾಮಕೃಷ್ಣಾಶ್ರಮದ ಹಳೆಯ ಪ್ರಕಟಣೆಗಳಲ್ಲೊಂದು. ಇದು ಖಂಡಿತವಾಗಿ ಆಸ್ತಿಕ ಸಂಪತ್ತು. ಆದರೆ ಇದರ ವಿಶೇಷವೇನೆಂದರೆ ಭಗವಂತನೊಡನೆ ಭಕ್ತನ ಸಂಬಂಧವನ್ನು ಗಾಢಗೊಳಿಸುವಂತ ರಚನೆಗಳು. ದೇವರ ಮತ್ತು ಶರಣಾಗತನು ಮನುಷ್ಯ ಸಹಜವಾಗಿ ಒಬ್ಬರನ್ನೊಬ್ಬರು ನೆಚ್ಚಿಕೊಳ್ಳುವುದು. ಆ ಮೂಲಕ ಭಾವನಾತ್ಮಕವಾಗಿ ಆಪ್ತತೆಯನ್ನು ಪಡೆಯುವುದು. ಮಾನಸಿಕವಾಗಿ ನಿರಾಳತೆಯನ್ನು ಅನುಭವಿಸುವುದು. ಸಾಗಬೇಕಾಗಿರುವ ಬದುಕಿನ ದಾರಿಯಲ್ಲಿ ದೃಢತೆಯನ್ನು ಹೊಂದುವುದು.

ಪುರಾಣ ಪ್ರವಚನ, ಸಾಮೂಹಿಕವಾಗಿ ಮಾಡುವ ದೇವರ ಭಜನೆ, ಸತ್ಸಂಗಗಳೆಲ್ಲವೂ ಮೊದಲಿನಿಂದಲೂ ಭಕ್ತರಿಗೆ ಪರೋಕ್ಷವಾಗಿ ಸಮಾಲೋಚನೆ ಮಾಡುವಂತವೇ ಆಗಿವೆ. ಆಸ್ತಿಕ ಭಾವವನ್ನು ಗಟ್ಟಿಗೊಳಿಸುವ ಆ ಮಂಡಳಿಗಳು ಜಾತ್ಯಾತೀತವಾಗಿರುತ್ತಿದ್ದವು, ನಿರ್ಧರ್ಮಿಗಳಾಗಿರುತ್ತಿದ್ದವು, ಎಲ್ಲರನ್ನೂ ಒಳಗೊಳ್ಳುವ ಮನೋಭಾವದಲ್ಲಿರುತ್ತಿದ್ದವು. ನಮ್ಮೆಲ್ಲಾ ತಪ್ಪು ಒಪ್ಪುಗಳನ್ನು ಭಗವಂತ ನೋಡುತ್ತಿರುತ್ತಾನೆ ಮತ್ತು ಅವನು ನಮ್ಮನ್ನು ಕೈ ಬಿಡಲಾರ ಎಂಬ ಸಾಮೂಹಿಕ ಮನಸ್ಥಿತಿಯನ್ನು ಗಟ್ಟಿಗೊಳಿಸಿಕೊಳ್ಳುವುದರಲ್ಲಿ ಬಾಳ್ವೆಗೆ ಅಗತ್ಯವಾದ ನೈತಿಕತೆ ಮತ್ತು ಭರವಸೆಗಳು ಸದಾ ಜೀವಂತವಾಗಿರುತ್ತಿದ್ದವು.

ಸ್ತವಕುಸುಮಾಂಜಲಿಯೂ ಕೂಡ ಅದೇ ರೀತಿ ಸಾಮೂಹಿಕವಾಗೆನಿಸದಿದ್ದರೂ ಓದಿಕೊಳ್ಳುವಂತಹ ಒಬ್ಬ ವ್ಯಕ್ತಿಗೆ ಸಾಂತ್ವಾನವಿದೆ, ಸಮಾಲೋಚನೆ ಇದೆ, ತತ್ವವಿದೆ. ಜೊತೆಗೆ ಶರಣಾಗತಿ ಇದೆ. ಪಾಪ ನಿವೇದನೆ ಇದೆ. ಶಿವನೋ, ದೇವಿಯೋ, ಹರಿಯೋ, ಗುರುವೋ, ಯಾವ ಮೂರ್ತ ದೇವರನ್ನು ಒಲ್ಲದ ಆತ್ಮಾನುಯಾಯಿಯೋ; ಅವರವರ ಆಯ್ಕೆಗೆ, ಅಭಿರುಚಿಗೆ ಆಧ್ಯಾತ್ಮಿಕ ಮತ್ತು ತಾತ್ವಿಕ ಸಮಾಲೋಚನೆಯಿದೆ.

ಪ್ರಾಣಿ ಪಕ್ಷಿ ಮತ್ತು ಇತರ ನೈಸರ್ಗಿಕ ಜೀವಿಗಳಿಗಿಲ್ಲದ ದೇವರು ಬೇಕಾಗಿರುವುದು ಈ ಮನುಷ್ಯನಿಗೆ. ಸ್ವಭಾವತಃ ಸಮಾಜ ಜೀವಿಯಾದ ಮನುಷ್ಯನಿಗೆ ಪರ್ಯಾಯವಾಗಿ ಹುಟ್ಟಿದ್ದು ದೇವರು. ದೇವರಿಗೆ ಪರ್ಯಾಯವನ್ನು ನೀಡಬೇಕೆಂದರೆ ಅದು ಮನುಷ್ಯನೇ. ಮನುಷ್ಯನೊಬ್ಬ ಮಾನಸಿಕವಾಗಿ, ಭಾವನಾತ್ಮಕವಾಗಿ, ವ್ಯಾವಹಾರಿಕವಾಗಿ ಕುಸಿದಾಗ, ಕಂಗೆಟ್ಟಾಗ, ಕೈಯಾಸರೆ ಬೇಕಾದಾಗ, ಮತ್ತೊಬ್ಬ ಮನುಷ್ಯ ಪ್ರಾಮಾಣಿಕವಾಗಿ ತನ್ನ ಪ್ರೀತಿ, ಶಕ್ತಿ, ಸಮಯ ಮತ್ತು ಸಂಪನ್ಮೂಲಗಳನ್ನು ನಿರ್ಬಂಧನೆಗಳಿಲ್ಲದೆ ಹಂಚಿಕೊಂಡಿದ್ದೇ ಆಗಿದ್ದರೆ ದೇವರ ಪರಿಕಲ್ಪನೆಯ, ಅದಕ್ಕೆ ಶರಣು ಹೋಗುವ ಅಗತ್ಯವೇ ಇರುತ್ತಿರಲಿಲ್ಲ. ಆದರೆ ಮನುಷ್ಯನ ಶಕ್ತಿಯ ಇತಿಮಿತಿ, ಪ್ರೀತಿ ಮತ್ತು ಪ್ರಾಮಾಣಿಕತೆಗಳಲ್ಲಿರುವ ಕೊರತೆಯೇ ದೇವರನ್ನು ಅವಲಂಬಿಸಲು ಕಾರಣವಾಗಿರುವುದು. ಮನುಷ್ಯನ ಮೇಲೆ ವಿಶ್ವಾಸವು ಕುಸಿದಷ್ಟೂ ದೇವರ ಮೇಲೆ ವಿಶ್ವಾಸ ಹೆಚ್ಚುತ್ತದೆ. ಹಿಂದಿನ ಸಣ್ಣಸಣ್ಣ ಸತ್ಸಂಗ, ಭಜನಾ ಮಂಡಳಿಗಳಿಂದ ಹಿಡಿದು, ಇಂದಿನ ಹೈಟೆಕ್, ಕಾರ್ಪುರೇಟರ್ ಗುರುಗಳ ದೊಡ್ಡ ದೊಡ್ಡ ಆಶ್ರಮಗಳಲ್ಲಿ ಸೇರುವ ಭಕ್ತರ ಸಂಖ್ಯೆಯನ್ನು ನೋಡಿದರೆ ಮಾನುಷ ಪ್ರೀತಿಗೆ ಹಾತೊರೆಯುತ್ತಿರುವವರು, ತಮ್ಮ ಸಹಜೀವಿಗಳಿಂದ ಭ್ರಮನಿರಸನಗೊಂಡಿರುವವರು ಅದೆಷ್ಟು ಎಂದು ತಿಳಿಯಬಹುದು.

ಸ್ವಾಮಿ ಸೋಮನಾಥಾನಂದರು ತಮ್ಮ ಪ್ರಸ್ತಾವನೆಯಲ್ಲಿ ಹೇಳುತ್ತಾ ಹಲವು ಭಾವಪುಷ್ಪಗಳ ಸ್ತೋತ್ರಗಳನ್ನು ಅಣಿಮಾಡಿ ಇಟ್ಟಿದೆ. ಈ ಪುಷ್ಪಗಳೆಲ್ಲಾ ಪ್ರಖ್ಯಾತ ಭಕ್ತರು, ಜ್ಞಾನಿಗಳು, ವೈರಾಗಿಗಳ ಕೃತಿಗಳೆಂಬ ಹೂದೋಟ ದಿಂದ ಬಿಡಿಸಿ ತಂದವು. ಹೌದು. “ನೀನು ನನ್ನ ಉದ್ದಾರ ಮಾಡದೇ ಇದ್ದರೆ ನಾನು ದುಃಖಪಡುವೆ. ಅದೇನೂ ನನಗೆ ಹೊಸತಲ್ಲ. ಆದರೆ ನಿನ್ನ ಶರಣಾಗತನೊಬ್ಬ ಸೋತ ಅಪಖ್ಯಾತಿ ನಿನ್ನದೇ” ಎಂದು ಯಾಮುನಾಚಾರ್ಯ ದೇವರನ್ನು ಕಾಡುವರು. “ದೇವರು ನನ್ನ ಆಲಂಗಿಸಲಿ, ಆಚೆಗೆ ದಬ್ಬಲಿ, ಹೊಡೆಯಲಿ, ಅವನೇ ನನ್ನ ಪ್ರಾಣನಾಥ, ನನಗೆ ಇನ್ನು ಯಾರೂ ಗತಿಯಿಲ್ಲ” ಎಂದು ಚೈತನ್ಯ ಮಗುವು ತಾಯ ಹಿಡಿವಂತೆ ದೇವರನ್ನು ಹಿಡಿವರು.
ಕುಲಶೇಖರ ಆಳ್ವಾರ್ “ನನಗೆ ಧರ್ಮದಲ್ಲಿ, ವಿಷಯ ಸಂಚಯಗಳಲ್ಲಿ, ಭೋಗಗಳಲ್ಲಿ ಆಸಕ್ತಿ ಇಲ್ಲ. ಯಾವುದು ಹೇಗೆ ನಡೆಯಬೇಕೋ ಹಾಗೆ ನಡೆದುಹೋಗಲಿ. ಆದರೆ ನಿನ್ನ ಅಡಿದಾವರೆಗಳಲ್ಲಿ ಭಕ್ತಿ ನಿಶ್ಚಲವಾಗಿರಲಿ” ಎಂದು ಪ್ರಾರ್ಥಿಸುವರು.
“ಕೆಟ್ಟ ಮಗ ಹುಟ್ಟಿದರೂ ಹುಟ್ಟಬಹುದು, ಕೆಟ್ಟ ತಾಯಿ ಇರುವುದಿಲ್ಲ.” “ನನ್ನಂತಹ ಪಾತಕಿಯೂ ಇಲ್ಲ, ನಿನ್ನಂತಹ ಪಾಪನಾಶಕನೂ ಇಲ್ಲ” ಎಂದು ಶಂಕರ ತಾನು ಕೆಟ್ಟವನೆಂದು ಪಾಪನಿವೇದನೆ ಮಾಡುತ್ತಾ ಆದರೂ ನನ್ನ ಕೈ ಬಿಡಬೇಡ ಎಂದು ದೇವಿಯನ್ನು, ಶಿವನನ್ನು ಪ್ರಾರ್ಥಿಸುತ್ತಾರೆ.

ಒಳ್ಳೆಯದಾಗಿದ್ದರೆ ಮಾತ್ರ ಒಳ್ಳೆಯದು ಮಾಡುವ ಮನುಷ್ಯರಿಂದ ನಿರೀಕ್ಷಿಸಲಾಗದ್ದನ್ನು ಪಡೆಯಲು ದೇವರು ಬೇಕಾಗಿದೆ. ಕ್ಷಮಿಸಲು ಸಿದ್ಧವಿಲ್ಲದೇ ಶಿಕ್ಷಿಸಲು ಸನ್ನದ್ಧನಾಗಿರುವ ಮನುಷ್ಯನಿಂದ ತಪ್ಪಿಸಿಕೊಳ್ಳಲು ದೇವರು ಬೇಕಿದೆ. ಕೊಟ್ಟರೆ ಕೊಡುವೆ ಎಂಬ ಲಾಭನಷ್ಟದ ಲೆಕ್ಕಾಚಾರದ ಹೊರತಾದ ಔದಾರ್ಯವನ್ನು ಪಡೆಯಲು ದೇವರು ಬೇಕಿದೆ. ಪ್ರೀತಿ, ಔದಾರ್ಯ, ಕ್ಷಮೆ, ಸಾಂತ್ವಾನ, ಸ್ವೀಕಾರಗಳೆಲ್ಲವೂ ಮನುಷ್ಯನಿಂದ ಪ್ರಾಮಾಣಿಕವಾಗಿ ಸಿಗಬಹುದಾಗಿದ್ದರೆ ದೇವರು ಏಕೆ ಬೇಕಿತ್ತು!

LEAVE A REPLY

Please enter your comment!
Please enter your name here