- ಶರೀಫ್ ಕಾಡುಮಠ,ಬೆಂಗಳೂರು
ನಿನ್ನೆಯಂದ ವಾಟ್ಸಾಪ್ನಲ್ಲಿ ಒಂದು ಒಂದು ತುಳು ಆಡಿಯೊ ಊರಿಡೀ ಹರಡುತ್ತಿದೆ. ತಾಯಿ ಮತ್ತು ಮಗ (ಅಥವಾ ಮಗಳೋ) ಫೋನಿನಲ್ಲಿ ನಡೆಸುವ ಸಂಭಾಷಣೆ ಅದು. ಫೋನಿನಲ್ಲಿ ಸರಿಯಾಗಿ ಮಾತು ಕೇಳಿಸದೆ ಆ ತಾಯಿ ಬೇರೆಯೇ ಉತ್ತರ ಕೊಡುತ್ತಾಳೆ. ತಾನು ತಿಂಡಿ ಮಾಡಿಟ್ಟಿದ್ದು, ಅದ್ನು ತಿನ್ನುವಂತೆ ಹೇಳುತ್ತಾಳೆ. ಆದರೆ ಈ ಆಡಿಯೊ ಯಾವ ಕಾರಣಕ್ಕೋ ಏನೊ, ತುಂಬಾ ವೈರಲ್ ಆಗುತ್ತಿದೆ.
ಇದೊಂದು ದೊಡ್ಡ ತಮಾಷೆಯಾಗಿ ನಮಗೆಲ್ಲಾ ಅನಿಸುತ್ತದೆ ಎಂದರೆ, ಅದನ್ನು ಅರ್ಥಮಾಡಿಕೊಳ್ಳಲಾಗದ ತಪ್ಪು ನಮ್ಮಲ್ಲಿದೆ ಎಂದೆ ಭಾವಿಸಬೇಕು.. ಒಬ್ಬ ಸಾಮಾನ್ಯ ತಾಯಿಯನ್ನೇಕೆ ನಾವು ಹೀಗೆ ತಮಾಷೆ ಮಾಡುತ್ತಿದ್ದೇವೆ?? ಸೋಷಿಯಲ್ ಮೀಡಿಯಾಗೆ ನಾವು ಅಷ್ಟೂ ಹುಚ್ಚರಾಗಿಬಿಟ್ಟಿದ್ದೇವೆ ಎಂಬುದನ್ನು ಇದು ಸೂಚಿಸುತ್ತದೆ.
ಇದನ್ನು ಕೇಳಿ ತಾನು ನಗಾಡಿದೆ, ಹಾಗೆ ಉಳಿದ ಗ್ರೂಪ್ಗಳಿಗೆ ಹಂಚಿದರೆ ಅವರೂ ನಗುತ್ತಾರೆ, ಆಗ ತಾನು ಕಳಿಸಿದ ಈ ತಮಾಷೆಗೆ ಎಲ್ಲರೂ ನಗುತ್ತಿದ್ದಾರೆ ಎಂಬ ಕ್ರೆಡಿಟ್ ತನ್ನದಾಗುತ್ತದೆ ಎಂಬ ಭಾವನೆ ಹಲವರಲ್ಲಿ ಅವರಿಗೇ ಗೊತ್ತಿಲ್ಲದ ಹಾಗೆ ಅಡಗಿರಬಹುದು. ಇಂಥ ದ್ದನ್ನೆಲ್ಲ ಎಲ್ಲರಿಗೂ ವಾಟ್ಸಾಪ್ ನಲ್ಲಿ ಹಂಚುವುದು ಒಂದು ಚಾಳಿ ಆಗಿಬಿಟ್ಟಿದೆ. ಒಂದು ಕ್ಷಣ ಯೋಚಿಸಿ ನೋಡಿ. ಆ ತಾಯಿ ನನ್ನ ತಾಯಿ ಆಗಿದ್ದರೆ, ಅಥವಾ ನಿಮ್ಮ ತಾಯಿ ಆಗಿದ್ದರೆ? ಆ ಮುಗ್ಧ ತಾಯಿಯ ಭಾವನೆ ಯನ್ನು ಅರ್ಥ ಮಾಡಿಕೊಳ್ಳಿ.
ತಾಯಿ ಎಂಬ ಕರುಣೆಯ ಕಡಲನ್ನು ಎಲ್ಲಕ್ಕಿಂತ ಹೆಚ್ಚು ಕಾಡುವುದು, ತನ್ನ ಮಕ್ಕಳ ಹಸಿದ ಹೊಟ್ಟೆ ಎಂಬ ಬಲುದೊಡ್ಡ ಪಾಠ ಈ ಆಡಿಯೊದಿಂದ ನಾವು ಕಲಿಯಬೇಕಾದ ಸಂಗತಿಯೇ ಹೊರತು ಅದರಲ್ಲಿನ ತಮಾಷೆ ಯನ್ನು ದೊಡ್ಡ ವಿಷಯವಾಗಿಸುವುದಲ್ಲ. ಮಗು ಏನೋ ಹಿಂದಿ ಬುಕ್ ಹಿಂದಿ ಬುಕ್ ಅಂತ ಹೇಳುತ್ತಿದೆ. ಆದ್ರೆ ತಾಯಿಗೆ ಫೋನಿನಲ್ಲಿ ಸರಿಯಾಗಿ ಕೇಳಿಸುತ್ತಿಲ್ಲ. ಆದರೂ ಅವಳ ಊಹೆ ನೋಡಿ… ದಿನಾ ಶಾಲೆಯಿಂದ ಬಂದೋ ಅಥವಾ ಆಟವಾಡಿ ಬಂದೋ ‘ಅಮ್ಮಾ ತಿನ್ರೆ ದಾದುಂಡಮ್ಮಾ….’ ಅಂತ ತನ್ನ ಮಕ್ಕಳು ಕೇಳುತ್ತಾರೆ ಎಂಬ ಪ್ರಜ್ಞೆ ಆ ತಾಯಿಯಲ್ಲಿ ಬೇರೂರಿದೆ. ಮಕ್ಕಳಿಗೆ ತಾಯಿಯಲ್ಲಿ ಕೇಳಲು ಬೇರೆ ಪ್ರಶ್ನೆಗಳಿಲ್ಲ… ಅದೇ ಅವರ ಪ್ರಶ್ನೆ. ತಿಂಡಿ, ಹಸಿವು… ತನ್ನ ಮಗು ವೇನೋ ಹಸಿದು, ತಿಂಡಿಯ ಬಗ್ಗೆಯೇ ವಿಚಾರಿಸುತ್ತಿರಬೇಕು, ಏನೇ ಇರಲಿ ತಿಂಡಿ ಅಲ್ಲಿ ಟ್ಟಿದ್ದೇನೆ ಅದನ್ನು ತೆಗೆದು ತಿನ್ನಲು ಹೇಳಿ ಬಿಡೋಣ ಎಂದು ಆ ತಾಯಿ ಹಾಗೆ ಹೇಳಿರಬಹುದು.
ನಾಲ್ಕು ಜನ ನಗಬೇಕು ಎಂದು ನಮಗನಿ ಸುವಾಗ ನಾವು ಯಾವ ಮಟ್ಟಕ್ಕೆಲ್ಲ ತಲುಪುತ್ತೇವೆ ಅಲ್ಲವೇ!? ಯಾರೋ ಪಾಪ, ಸಾಮಾನ್ಯ ಜನರು ಬದುಕಿನ ಸಂಕಟದ ನಡುವೆ ನಡೆಸಿದ ಸಂಭಾಷಣೆ ಯನ್ನು ಹೇಗೆಲ್ಲ ತಮಾಷೆಯಾಗಿ ಬಳಸಿ ಹರಡುತ್ತೇವೆ…
ನಗುವುದಕ್ಕೆ ಸಹಸ್ರ ಸಾವಿರ ವಿಷಯಗಳು ನಮ್ಮ ನಡುವೆ ಇವೆ. ಕಾಮೆಡಿ ಸಿನಿಮಾ ಜೋಕ್ಸ್ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಯೂಟ್ಯೂಬ್ ನಲ್ಲಿ ಬೇಕಾದಷ್ಟು ಸಿಗುತ್ತವೆ.
ಟ್ರೋಲ್ಗೋಸ್ಕರ, ತಮಾಷೆ ಗೋಸ್ಕರ ಜನಸಾಮಾನ್ಯರ ಬದುಕನ್ನು ಬಳಸಿಕೊಳ್ಳುವುದು ಸರಿಯಲ್ಲ. ಒಂದು ಕ್ಷಣಕ್ಕೆ ಅದೇನೋ ಖುಷಿ ಕೊಡಬಹುದು. ಆದರೆ ಒಂದು ಬಾರಿ ಅವರ ಸ್ಥಾನದಲ್ಲಿ ನಿಂತು ಯೋಚಿಸಿ, ಟ್ರೋಲ್ ಆದ ವ್ಯಕ್ತಿಯನ್ನು ಸುತ್ತಮುತ್ತಲಿನ, ಸಮಾಜದ ಜನ ಹೇಗೆ ನಡೆಸಿಕೊ ಳ್ಳುತ್ತಾರೆ ಎಂಬುದು ನೆನಪಿರಲಿ. ಯಾವುದೇ ತಪ್ಪು ಮಾಡದ ಮುಗ್ಧ ಜನರನ್ನು ಏಕೆ ಹೀಗೆ ಹಿಂಸಿಸಬೇಕು?
ಮೊನ್ನೆ ಕೊತ್ಮೀರಿ ಸೊಪ್ಪು ಎಂದು ಆ ತಾಯಿಯ ಜೀವ ಹಿಂಡಿದಿರಿ….ಈಗ ಈ ಆಡಿಯೊ ಹಿಡಿದುಕೊಂಡು ಈ ತಾಯಿಯನ್ನು ನೋಯಿಸುತ್ತೀರಿ… ಇನ್ನೆಷ್ಟು ಮಾತೃ ಹೃದಯಗಳನ್ನು ಕಂಪಿ ಸುವಂತೆ ಮಾಡುತ್ತೇವೋ ಏನೊ… ಆದರೆ ನಮಗೂ ಒಬ್ಬಳು ತಾಯಿ ಇದ್ದಾಳೆಂಬ ನೆನಪು ನಮ್ಮ ಹೃದಯದಲ್ಲಿರಲಿ.