–ಮೌಲಾನ ವಹಿದುದ್ದೀನ್ ಖಾನ್
ಭಾಗ: 3
ರಷ್ಯಾದ ಖಗೋಳ ಯಾತ್ರಿಕ ಎನ್ಡ್ರನ್ ನಿಕೊಲಾಯಿಫ್ 1962ರ ಆಗಸ್ಟ್ನಲ್ಲಿ ಖಗೋಳ ಕ್ಷಿಪಣಿಯಿಂದ ಹಿಂದಿರುಗಿ, ಆಗಸ್ಟ್ 21ರ ಒಂದು ಪತ್ರಿಕಾಗೋಷ್ಠಿಯಲ್ಲಿ, “ನಾನು ಧರೆಗಿಳಿದಾಗ ಭೂಮಿಯನ್ನೊಮ್ಮೆ ಚುಂಬಿಸಲೋ ಎಂದು ನನಗೆ ತೋಚಿತು” ಎಂದರು. ಮಾನವನಿಗೆ ಅಗತ್ಯವಿರುವ ಎಲ್ಲಾ ವಸ್ತುಗಲು ಇದೇ ಭೂಮಿಯಲ್ಲಿ ಅಡಕವಾಗಿದೆ. ಅದು ಇನ್ನೆಲ್ಲಿಂದಲೂ ಪಡೆಯ ಬೇಕಾಗಿಲ್ಲ. ಖಗೋಳದಲ್ಲಿ ಮಾನವನಿಗೆ ಸಂತೃಪ್ತಿ ನೀಡುವ ಯಾವುದೇ ವಸ್ತುವಿಲ್ಲ ಎಂಬುವುದ ಆ ಯಾತ್ರಿಕನಿಗೆ ಖಾತ್ರಿಯಾಯಿತು. ಅನುಭವದೊಂದಿಗೆ ಅವನು ಭೂಮಿಗಿಳಿದಾಗ ಅದರ ಸ್ಥಾನ ಅವನಿಗೆ ತಿಳಿಯಿತು. ಬಾಯಾರಿಕೆಯಾದಾಗ ನೀರಿನ ಅಗತ್ಯ ಕಂಡಂತೆ ಅಗತ್ಯವಿರುವ ಸಕಲ ಸರಂಜಾಮುಗಳೊಂದಿಗೆ ಭೂಮಿಯನ್ನು ಕಂಡಾಗ ಅಪ್ಪಿಕೊಳ್ಳಲು ಅಥವಾ ತನ್ನ ಸ್ನೇಹಾದರ ತೋರಿಸಲು ಮಾನವನು ನಿರ್ಬಂಧಿತನಾದನು.
ಇಸ್ಲಾಮೀ ನಿಯಾಮಗಳಂತೆ ಇದನ್ನೇ ಆರಾಧ್ಯನನ್ನಾಗಿ ಮಾಡುವುದು ಎನ್ನಲಾಗಿದೆ. ಮಾನವನು ಸೃಷ್ಟಿಕರ್ತನನ್ನು ಕಾಣುತ್ತಿಲ್ಲ. ಆದುದರಿಂದಲೇ ಸ್ವತಃ ಸೃಷ್ಟಿಗಳನ್ನೇ ತನ್ನ ಆರಾಧ್ಯನನ್ನಾಗಿ ಮಾಡಿಕೊಳ್ಳುತ್ತಿದ್ದಾನೆ. ಈ ಸತ್ಯವನ್ನು ಅರಿತು ಹೊರಗಿನಿಂದ ಇದರ ಅಂತರಾಳಕ್ಕಿಳಿದವನೇ ಸತ್ಯವಿಶ್ವಾಸಿಯಾಗಿದ್ದಾನೆ. ಈ ಕಾಣುವುದೆಲ್ಲಾ ಯಾರೋ ಕೊಟ್ಟದ್ದು ಎಂಬ ವಾಸ್ತವಿಕತೆಯನ್ನು ಅರಿತವನಾಗಿದ್ದಾನೆ, ಭೂಮಿಯ ಮೇಲಿರುವುದೆಲ್ಲವೂ ಒಬ್ಬ ಸೃಷ್ಟಿಕರ್ತನ ಸೃಷ್ಟಿಯಾಗಿದೆ. ಈ ಸೃಷ್ಟಿಗಳನ್ನು ಕಂಡು ಸೃಷ್ಟಿಕರ್ತನನ್ನು ಅರಿಯಬೇಕು ಮತ್ತು ಅವನನ್ನು ತನ್ನ ಸರ್ವಸ್ವವಾಗಿ ಒಪ್ಪಿಕೊಳ್ಳಬೇಕು. ತನ್ನ ಎಲ್ಲಾ ಭಾವನೆಗಳನ್ನು ಆತನಿಗೆ ಸಮರ್ಪಿಸುವಂತಾಗಬೇಕು.
ರಷ್ಯಾದ ಯಾತ್ರಿಕನಿಗೆ ಭೂಮಿಯನ್ನು ಕಂಡಾಗ ಅವನಲ್ಲಿ ಉಂಟಾದ ಸ್ಥಿತಿಗಿಂತ ಅಧಿಕ ಪಟ್ಟು ಮಾನವನು ದೇವನನ್ನು ಅರಿತಾಗ ಅವನಲ್ಲಿ ಉಂಟಾಗಬೇಕು. ಸೂರ್ಯನನ್ನು ಕಂಡಾಗ ಅವನ ಪ್ರಕಾಶದಲ್ಲಿ ದೇವನನ್ನು ಕಾಣುವಂತೆ, ಆಕಾಶದ ವಿಶಾಲತೆಯಲ್ಲಿ ದೇವನ ವಿಶಾಲತೆ ದರ್ಶಿಸುವಂತೆ, ಹೂಗಳ ಪರಿಮಳದಲ್ಲಿ ದೇವನ ಸುವಾಸನೆ ಸವಿಯುವಂತೆ, ನೀರಿನ ಹರಿವಿನಲ್ಲಿ ದೇವನ ಕೊಡುಗೆಗಳನ್ನು ನೋಡಿ ಅರಿಯುವವನೇ ಒಬ್ಬ ನೈಜ ಸತ್ಯವಿಶ್ವಾಸಿ.
ಸತ್ಯವಿಶ್ವಾಸ ಮತ್ತು ಅವಿಶ್ವಾಸಿಗಳ ಮಧ್ಯೆ ಇರುವ ವ್ಯತ್ಯಾಸವೇನೆಂದರೆ ಅವಿಶ್ವಾಸಿಗಳ ದೃಷ್ಟಿಯು ಸೃಷ್ಟಿಗಳಲ್ಲಿ ಮುಳುಗಿರುತ್ತದೆ. ಆದರೆ, ಒಬ್ಬ ಸತ್ಯವಿಶ್ವಾಸಿಯೂ ಮುಂದುವರಿದು ಸೃಷ್ಟಿಕರ್ತನೆಡೆಗೆ ಚಲಿಸುತ್ತಾನೆ. ಅವಿಶ್ವಾಸಿಯು ಸೃಷ್ಟಿಗಳ ಒಳಿತನ್ನು ಕಂಡು ಅದರಲ್ಲಿಯೇ ಮಗ್ನನಾಗುತ್ತಾನೆ. ಆದರೆ, ವಿಶ್ವಾಸಿಯು ಅವುಗಳ ಒಳಿತಿನಲ್ಲಿ ದೇವನನ್ನು ಕಾಣುತ್ತಾನೆ ಮತ್ತು ತನ್ನನ್ನು ದೇವನಿಗೆ ಅರ್ಪಿಸುತ್ತಾನೆ. ಅವಿಶ್ವಾಸಿಯ ಸಾಷ್ಟಾಂಗವು ವಸ್ತುಗಳಿಗಾದರೆ, ವಿಶ್ವಾಸಿಯ ಸಾಷ್ಟಾಂಗವು ವಸ್ತುಗಳ ಸೃಷ್ಟಿಕರ್ತನಿಗಿರುತ್ತದೆ.
ಅನುವಾದ: ತಲ್ಹಾ ಇಸ್ಮಾಯಿಲ್ ಕೆ.ಪಿ