-ಅಶೀರುದ್ದೀನ್ ಆಲಿಯಾ

ಕರ್ನಾಟಕ ಉದ್ದಗಲಕ್ಕೂ ವಿಧಾನಸಭಾ ಚುನಾವಣೆಯ ಬಿಸಿಲಿನಲ್ಲಿ ಬೆಂದು ಹೋಗಿದೆ. ರಾಜಕೀಯ ಶಕ್ತಿಗಳ ಪೈಪೋಟಿ, ಬಲಾ-ಬಲ, ಒಬ್ಬರಿಗಿಂತ ಒಬ್ಬರು ಮೇಲೆಂದು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣಾ ದಿನ ನಿಗದಿಯಾದಂದಿನಿಂದಲೂ ಪ್ರಜೆಗಳು ಪ್ರಭುಗಳಾಗಿಯೂ, ಪ್ರಭುಗಳು ಪ್ರಜೆಗಳಾಗಿಯೂ ಬದಲಾಗಿದ್ದಾರೆ. ಜನಪ್ರತಿನಿಧಿಗಳು ಮತದಾರರ ಕಾಲು ಹಿಡಿದು ಬೇಡಿಕೊಂಡು ಮತಯಾಚಿಸುವ ಮಟ್ಟಕ್ಕೆ ಇಳಿದಿದ್ದಾರೆ. ಕರ್ನಾಟಕ ಚುನಾವಣೆಯ ಬಿರುಸಿನ ನಡುವೆ ಒಂದು ಪಕ್ಷಿನೋಟ ನಿಮ್ಮ ಮುಂದೆ ಇಟ್ಟಿದ್ದೇನೆ. ಚುನಾವಣೆ ಎಂಬ ಔಪಚಾರಿಕ ವ್ಯವಸ್ಥೆಯಲ್ಲಿ ಮತದಾರ ಭಾಂದವರೇ ಪ್ರಭುಗಳು. ನಾಡಿನ, ರಾಜ್ಯದ, ರಾಷ್ಟ್ರದ ಭವಿಷ್ಯ ನಿರ್ಮಾಣದಲ್ಲಿ ಮತದಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ. ರಾಷ್ಟ್ರದ ಬೆಳವಣಿಗೆಯೂ ಮತದಾರರಾದ ಪ್ರಜೆಗಳ ಕೈಯಲ್ಲಿದೆ. ಪ್ರಜಾಪ್ರಭುತ್ವದ ಮುಖ್ಯ ಅಂಗವಾಗಿದೆ ಚುನಾವಣೆ. ಅಬ್ರಹಾಂ ಲಿಂಕನ್ ವ್ಯಕ್ತಪಡಿಸಿರುವಂತೆ ‘ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರೂಪಿಸಲಾದ ಸರಕಾರ ಪ್ರಜಾಪ್ರಭುತ್ವ ಸರಕಾರ’. ಜನರು ತೀರ್ಮಾನಿಸಿ ಕೊಡುವ ಅಧಿಕಾರ. ಪ್ರಜೆಗಳಿಂದ ಆರಿಸಿ ಬಂದ ಜನಪ್ರತಿನಿಧಿಗಳು ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಸಂವಿಧಾನ ತಿಳಿಸಿದೆ.

ಹದಿನೆಂಟು ವಯಸ್ಸು ಮೀರಿದ ಪ್ರತಿಯೊಬ್ಬನಿಗೂ ಅದು ಜಾತಿ, ಧರ್ಮ, ಬಡವ-ಶ್ರೀಮಂತ, ವಿಕಲಾಂಗ, ಬುದ್ಧಿಮಾಂದ್ಯ, ವೃದ್ಧ, ಮಹಿಳೆಯೆಂಬ ವ್ಯತ್ಯಾಸವಿಲ್ಲದೆ ಮತದಾನದ ಹಕ್ಕನ್ನು ನೀಡಿದೆ. ಅದನ್ನು ಜವಾಬ್ದಾರಿಯುತರಾಗಿ ಚಲಾಯಿಸುವ ಹಕ್ಕು ಮತದಾರರಿಗಿರುವುದು. ಹಲವು ವಿದೇಶಿ ರಾಷ್ಟ್ರಗಳಲ್ಲಿ ಮತ ಚಲಾಯಿಸದಿರುವುದೇ ದೊಡ್ಡ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಅದಕ್ಕಾಗಿ ಕಠಿಣ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಏಕೆಂದರೆ ಮತದಾನ ಅತ್ಯಂತ ಮಹತ್ವಪೂರ್ಣವಾಗಿದೆ. 1952ರ ಎಪ್ರಿಲ್‍ನಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆಯ ಮೂಲಕ ಭಾರತದಲ್ಲಿ ಚುನಾವಣಾ ರೀತಿಯೂ ಪ್ರಜಾಸತ್ತಾತ್ಮಕವಾಗಿ ಜಾರಿಯಾಯಿತು. ಪ್ರತಿಯೊಬ್ಬ ವಯಸ್ಕ ಪ್ರಜೆಗೆ ಮತದಾನ ಮಾಡುವ ಮತ್ತು ಚುನಾವಣೆಯಲ್ಲಿ ಸ್ಪರ್ದಿಸುವ ಸ್ವಾತಂತ್ರ್ಯವನ್ನು ನೀಡಲಾಗಿದೆ. ಚುನಾವಣೆಯೂ ಸ್ವತಂತ್ರ ಭಾರತದ ಗಮನಾರ್ಹ ಅಂಶವಾಗಿ ಪರಿಣಮಿಸಿದೆ.

ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯೂ ಕನ್ನಡಿಗರ ಪಾಲಿಗೆ ಮಹತ್ತರವಾದ ಜವಾಬ್ದಾರಿಯುತವಾದ ಹೊಣೆಗಾರಿಕೆಯಾಗಿದೆ. ಕರ್ನಾಟಕದಲ್ಲಿನ ಸುಮಾರು 6.30 ಕೋಟಿಯಷ್ಟು ಜನ ಸಂಖ್ಯೆಯಲ್ಲಿ ಸುಮಾರು 4.75 ಕೋಟಿಯಷ್ಟು ಜನರು ಮತದಾನದ ಹಕ್ಕನ್ನು ಹೊಂದಿರುತ್ತಾರೆ. ಇದರಲ್ಲಿ ಬಹುಪಾಲು ಯುವಸಮುದಾಯ ಮತ್ತು ವಿದ್ಯಾರ್ಥಿ ಸಮುದಾಯ ಎಂಬುವುದು ವಿಶೇಷ. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾನವೆಂಬುವುದು ಅಖಂಡ ಪ್ರಜಾಪ್ರಭುತ್ವ ಸಮೂಹದ ಧ್ವನಿ.
ಭಾರತವು ಸಮಾನತೆಯನ್ನು ಸಾರಿದ ದೇಶ. ಖೇದಕರವಾದ ವಿಷಯವೇನೆಂದರೆ, ಇತ್ತೀಚಿನ ದಿನಗಳಲ್ಲಿ ಸಮಾಜವಾದಿ ರಾಷ್ಟ್ರವಾದ ಭಾರತ ಕೋಮುವಾದಿ ದೃಷ್ಟಿಕೋನದತ್ತ ವಾಲುತ್ತಿದೆ. ಕೋಮುವಾದವು ರಾಷ್ಟ್ರ ನಿರ್ಮಾಣದಲ್ಲಿ ಭ್ರಷ್ಟಾಚಾರಕ್ಕಿಂತಲೂ ಮಾರಕವಾದುದು. ಡಾ. ಬಿ.ಆರ್. ಅಂಬೇಡ್ಕರ್ ರವರು ರಚಿಸಿದ ಸಂವಿಧಾನ ಧಾರ್ಮಿಕ, ವೈಯಕ್ತಿಕ ಸಮಾನತೆಯಿಂದ ಬಾಳುವ ಸ್ವಾತಂತ್ರ್ಯವನ್ನು ನೀಡಿದೆ. ಇನ್ನೊಂದು ಕೋಮಿನ ವಿರುದ್ಧ ಕೆರಳಿಸುವ ಮತ್ತು ಸಮಾನತೆಯನ್ನು ಸಾರಿದ ಸಂವಿಧಾನವನ್ನು ಬದಲಿಸಬೇಕೆಂಬ ಮಾತಗಳನ್ನಾಡುವ ವಿಕೃತ ಮನಸ್ಸಿನ ರಾಜಕೀಯ ಸಿದ್ಧಾಂತವನ್ನು ಬೆಳೆಸಿರುವ ಜನಪ್ರತಿನಿಧಿಗಳನ್ನು ಬೆಂಬಲಿಸುವುದರಿಂದ ಸಂವಿಧಾನವು ಅಪಾಯದಲ್ಲಿ ಸಿಲುಕಿದೆ. ಜಾತಿ, ಧರ್ಮಗಳಾಚೆ ನಾವು ಭಾರತೀಯರು ಏಕೋದರ ಸಹೋದರರು ಎಂಬ ಪರಿಕಲ್ಪನೆ ನಮಗಿದೆ. ಭಾರತವು ವಿಭಿನ್ನತೆಯಲ್ಲಿ ಏಕತೆಯನ್ನು ಸಾರಿದ ದೇಶ. ಕೋಮು ರಾಜಕೀಯ ವಿಷರಾಜಕೀಯ. ಕೋಮು ಮನಸ್ಸಿನ ಜನ ಪ್ರತಿನಿಧಿಗಳಿಗೆ ಅಧಿಕಾರದ ಗದ್ದುಗೆಯನ್ನು ನೀಡುವ ಮುಂಚೆ ಮತದಾರರು ಆಲೋಚಿಸಬೇಕು. ನಾನಾ ವಿಧದ ಆಸೆ ಆಮಿಷಗಳಿಗೆ ಬಲಿಯಾಗಿ, ಹಣದ ಕಟ್ಟುಗಳಿಗೆ ಮತವನ್ನು ಮಾರಿಕೊಳ್ಳುವ ಮುಂಚೆ, ಬೆಲೆಬಾಳುವ ಸೀರೆ, ಪಾತ್ರೆ-ಪಗಡೆ, ಮದ್ಯ ಸಾರಾಯಿಗಳಿಗಿಂತ ನಮ್ಮ ಮತ ಬೆಲೆಬಾಳುವಂತಹದ್ದು. ನಮ್ಮ ಮತ ನಾಡಿನ ಹಿತಕ್ಕಾಗಿರಬೇಕು ಎಂದು ಎಲ್ಲರೂ ಅರಿತುಕೊಳ್ಳಬೇಕು.

ಕೆಲವರು ಮತದಾನದ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಮತದಾನದಂದು ಪ್ರವಾಸ ಹೊರಡುವುದು, ವೈಯಕ್ತಿಕ ಮೋಜಿನಲ್ಲಿ ತಲ್ಲಿನರಾಗುವುದು, ಕ್ಷುಲ್ಲಕ ಕಾರಣಕ್ಕಾಗಿ ಮತದಾನವನ್ನು ವಿರೋಧಿಸುವುದು, ಮತದಾನವನ್ನು ಒಂದು ಜವಾಬ್ದಾರಿಯುತ ಹೊಣೆಗಾರಿಕೆ ಎಂಬುವುದಾಗಿ ಪರಿಗಣಿಸದಿರುವುದು ಪ್ರಜ್ಞಾವಂತ ಸಮಾಜದ ಲಕ್ಷಣವಲ್ಲ. ನಮ್ಮ ನಿರ್ಲಕ್ಷ್ಯದಿಂದಲೋ ನಾವು ಚಲಾಯಿಸಿದ ಮತದಿಂದಲೋ, ಕೋಮುವಾದಿ, ಭ್ರಷ್ಟ, ಸಂವಿಧಾನ ವಿರೋಧಿ, ಅಜ್ಞಾನಿ ಪ್ರತಿನಿಧಿಯೊಬ್ಬ ಆರಿಸಿ ಬಂದರೆ ಆದರ ಹೊಣೆಗಾರರು ನಾವಾಗಿರುತ್ತೇವೆ. ನಮ್ಮ ಮತ ನಮ್ಮ ಹಕ್ಕು. ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತರಾಗಿ ಮತ ಚಲಾಯಿಸಬೇಕು. ನನ್ನ ಮತ ನನ್ನ ಜವಾಬ್ದಾರಿ ಎಂಬ ಪರಿಜ್ಞಾನ ನಮಗಿರಬೇಕು.

1 COMMENT

LEAVE A REPLY

Please enter your comment!
Please enter your name here