ಕವನ : ಸಲ್ಮಾ ಮಂಗಳೂರು
ಸ್ವಾತಂತ್ರ್ಯದ ಓಘ
ಓ ಸ್ವಾತಂತ್ರ್ಯ ದಿನವೆ.
ಏನ ತಂದಿರುವಿ.. ಹದುಳವನೆ?
ಐಕ್ಯಮಂತ್ರವೊಂದೇ ನೀ ಕಾಣುವೆ
ಬಗೆದರು ಮೆದುಳನೆ..
ಧರೆಯ ಮುತ್ತಲು
ಮಸೀದಿಯ ಕಮಾನು,
ಅಂತರ್ಧಾರೆಯು ಕೊರಳ ಬಿಗಿದರೂ
‘ಸಂವಿಧಾನ’ವೇ ಗುರುವು.
ಅಭಿವ್ಯಕ್ತಿ ಅಪರಾಧವೊ..
ಪೌರತ್ವವೋ?
ಭೋರಿಡುವ ಅಸ್ತಿತ್ವಕೆ
ಸಾಂತ್ವನವೆ ‘ಮುಲಭೂತ ಹಕ್ಕು’
ಗಲಭೆ ಗೋಲಿಬಾರಲಿ
ಬುಡಕಡಿದ ನನ್ನತನಕೆ
ಆನಿಸಿದ ಹೆಗಲೇ ‘ಭಾತೃತ್ವ’
ಇತಿಹಾಸವು ಮತಿಗೆಡಲು,
ಎಳೆಕೈಗಳಲಿ ರಾಜಕೀಯದುರುಳು..
ನೊಂದವರ ಊರುಗೋಲು ‘ಪ್ರಜಾಪ್ರಭುತ್ವ’
ರೋಗಕ್ಕೂ ಧರ್ಮದ ಅಫೀಮೆ?
ದಿಕ್ಕೆಟ್ಟವರ ಸಂಜೀವಿನಿ
‘ವಿವಿಧತೆಯಲ್ಲಿ ಏಕತೆ’
ಕೇಸರಿ ಆಗಸ,ಶ್ವೇತ ಕಡಲು
ಪಚ್ಚೆ ಭುವಿಯೊಡಲು.
ಧುಮ್ಮಿಕ್ಕಲಿ ದೇಶಪ್ರೇಮ ಅನುಕ್ಷಣ.
ಸ್ವಾತಂತ್ರ್ಯವು ಕೇಳಿತು..’ ಓ ಪ್ರಜೆಯೆ,
ನೀ ಏನ ನೀಡಿರುವಿ.. ಹದುಳವನೆ?’