ಕವನ : ನಸೀಬ ಗಡಿಯಾರ್
ಈ ಹುಚ್ಚು ಸ್ವಪ್ನದಿ,
ಮಿಡಿವ ಮನದಿ,
ವೈವಿಧ್ಯಗೊಂಡಿದೆ
ಕನ್ನಡವೆಂಬ ಸೊಬಗಿನ ನುಡಿ….
ಶಿರ ಕಡಿದರೂ,
ಎದೆ ಬಗೆದರೂ,
ಹರಿಯುವುದು ಕನ್ನಡದ ನೆತ್ತರು…..
ಈ ಭಾಷೆ…
ಕನ್ನಡಿಗರ ಉಸಿರು,
ಸ್ವಚ್ಛಂದದಿ ಪಸರಿಸಿದೆ ಕನ್ನಡವೆಂಬ
ಹಸಿರು,
ಇನ್ನೇಕೆ ಬಳಿಯುವಿರಿ ಕನ್ನಡದ ಇತಿಹಾಸಕೆ ಕೆಸರು….
ಸಹಸ್ರಾರು ವರುಷದ ಪ್ರಾಧಾನ್ಯಕ್ಕೆ
ಪುರಾತನ ಕಾಲದ ಕನ್ನಡವೆಂಬ ಆಯುಧಕ್ಕೆ
ಮಾತೃಭಾಷೆಯ ತುಳಿದು
ಹೊಸ ಭಾಷೆಯ(ಹಿಂದಿ) ಹೇರಿಕೆ ಇನ್ನೇತಕೆ?
ಹೊಸ ಭಾಷೆಯ(ಹಿಂದಿ) ಮತ್ತೇರಿಸಿ,
ಕನ್ನಡ ಸಂಪೂರ್ಣ ಅಳಿಸಿ,
ಪ್ರಖ್ಯಾತ ಭಾಷೆಯ ಕೊನೆಗೊಳಿಸಿ,
ಕನ್ನಡ ನುಡಿಗೆ ಬಳಿಯದಿರಿ ಮಸಿ…
ಹೆತ್ತವ್ವ ಕಲಿಸಿದ ಮೊದಲ ಪದ,
ತೊಟ್ಟಿಲಲಿ ಆಲಿಸಿದ ಆ ನಾದ,
ಹೇಗೆ ಅಳಿಸುವುದು ಮಾತೃಭಾಷೆಯ ಬಂಧ,
ದಯಕೋರುವೆ, ಮುಚ್ಚಿ ಹಾಕದಿರಿ ಕನ್ನಡದ ಕದ….
ಕಂದಮ್ಮ ನುಡಿದ ತೊದಲು ,
ಮುದಿ ಜೀವವು ಮೋಡಿ ಕಥೆಗಳ ಹೇಳಲು,
ಚಂದಿರನ ತೋರಿ ಕೈತುತ್ತು ತಿನಿಸಲು
ಅವ್ವ ಹಾಡಿದ ಆ ಪದ್ಯದ ಸಾಲು,
ಎಲ್ಲವೂ ಕನ್ನಡದ ಹೊನಲು….
ಕನ್ನಡಿಗರ ತವರು
ಕನ್ನಡದ ಬೀಡು
ಈ ಕರುನಾಡು……..