‘ವರದಕ್ಷಿಣೆ’ ಎಂಬ ಪಿಡುಗು ನಮ್ಮ ದೇಶವನ್ನು ಶತಮಾನಗಳಿಂದ ಕಾಡುತ್ತಲೇ ಬಂದಿದೆ. ಹಿಂದೆ, ಅನಕ್ಷರತೆ ವರದಕ್ಷಿಣೆಯನ್ನು ಬೇಡಲು ಪ್ರಚೋದಿಸುತಿತ್ತು; ಪ್ರಸ್ತುತ ದಿನಗಳಲ್ಲಿ ಅಕ್ಷರತೆ ವರದಕ್ಷಿಣೆಯ ಪ್ರಮಾಣವನ್ನು ಅಳೆಯುತ್ತಿದೆ. ಇಂದಿನದ ಆಧುನಿಕ ಸಮಾಜದಲ್ಲೂ, ವಿಶೇಷವಾಗಿ ವಿದ್ಯಾವಂತ ಮನೆತನಗಳಲ್ಲಿ, ಹೆಣ್ಣು ಮಕ್ಕಳು ವರದಕ್ಷಿಣೆ ಮೋಹಿಗಳ ಕ್ರೂರತೆಗೆ ಶರಣಾಗಿ ತಮ್ಮ ಬದುಕನ್ನು ಕಳೆಯುತ್ತಿರುವುದು ಇಪ್ಪತ್ತೊಂದನೆ ಶತಮಾನದ ದುರಂತವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಬಿಡುಗಡೆಗೊಳಿಸಿದ ಇತ್ತೀಚಿನ ವರದಿಯ ಪ್ರಕಾರ, 2024ರಲ್ಲಿ ಭಾರತದಲ್ಲಿ 5,737 ವರದಕ್ಷಿಣೆ ಸಾವುಗಳು ದಾಖಲಾಗಿದ್ದು, ಪ್ರತಿದಿನ ಸುಮಾರು 16 ಸಾವುಗಳು ನಡೆದಿವೆ.
ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ಅವರ ಪತ್ನಿ ದಿವ್ಯಾ ಗೆಹ್ಲೋಟ್, ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ದೈಹಿಕ–ಮಾನಸಿಕ ಹಿಂಸೆ, ಕೊಲೆ ಯತ್ನ ಹಾಗೂ ನಾಲ್ಕು ವರ್ಷದ ಮಗಳ ಅಪಹರಣದ ಗಂಭೀರ ಆರೋಪಗಳನ್ನು ಹೊರಿಸಿರುವ ಘಟನೆ ಕೆಲವು ತಿಂಗಳ ಹಿಂದೆ ಬೆಳಕಿಗೆ ಬಂದಿತು. ಈ ವರ್ಷದ ಜನವರಿಯಲ್ಲಿ, ದಿಲ್ಲಿ ಪೊಲೀಸ್ನ ವಿಶೇಷ ಶಸ್ತ್ರಾಸ್ತ್ರ ಮತ್ತು ತಂತ್ರಗಾರಿಕೆ (SWAT) ವಿಭಾಗದ ಕಮಾಂಡೋ ಆಗಿದ್ದ 27 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ವರದಕ್ಷಿಣೆಗಾಗಿ ಅತ್ಯಂತ ಕ್ರೂರವಾಗಿ ಕೊಂದಿದ್ದನು. ಅಂಕುರ್ ಎಂಬ ಆರೋಪಿಯು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ತನ್ನ ಪತ್ನಿ ಕಾಜಲ್ ಚೌಧರಿ ಅವರ ತಲೆಗೆ ಡಂಬೆಲ್ ನಿಂದ ಪದೇ ಪದೇ ಹೊಡೆದು ಕೊಲೆ ಮಾಡಿದ್ದನು. ಕಳೆದ ಕೆಲವು ದಿನಗಳಲ್ಲಿ ನಾಲ್ವರು ಯುವತಿಯರು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಈ ಸಾವುಗಳು ಸಂಭವಿಸಿದ್ದು ನಗರಗಳಲ್ಲಿ ವಾಸಿಸುತ್ತಿದ್ದ ವಿದ್ಯಾವಂತ ಮನೆತನಗಳಲ್ಲಿ ಎಂಬುವುದು ಗಮನಾರ್ಹವಾಗಿದೆ.
ಮಕ್ತೂಬ್ ಮೀಡಿಯಾ ವರದಿ ಮಾಡಿದಂತೆ, ಮೇ 6ರಂದು ಬಿಡುಗಡೆಯಾದ NCRBಯ “ಕ್ರೈಮ್ ಇನ್ ಇಂಡಿಯಾ 2024” ವರದಿಯಲ್ಲಿ ಈ ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಆತ್ಮಹತ್ಯೆ ಅಥವಾ ಇತರ ಸಂಶಯಾಸ್ಪದ ವೈವಾಹಿಕ ಸಾವುಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ಸುಮಾರು ಪ್ರತಿ 90 ನಿಮಿಷಗಳಿಗೊಮ್ಮೆ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ವರದಿ ಸೂಚಿಸುತ್ತದೆ.
ಕಳೆದ ದಶಕದಲ್ಲಿ ವರದಕ್ಷಿಣೆ ಸಾವುಗಳು 2015ರಲ್ಲಿನ 7,634 ಪ್ರಕರಣಗಳಿಂದ 2024ರಲ್ಲಿ 5,737ಕ್ಕೆ ಕುಸಿದಿದ್ದರೂ, ಅಂತಹ ಘಟನೆಗಳು ದೇಶಾದ್ಯಂತ ವ್ಯಾಪಕವಾಗಿ ಮುಂದುವರಿಯುತ್ತಿವೆ ಎಂದು ವರದಿ ತೋರಿಸುತ್ತಿದೆ. NCRBಯ ಅಂಕಿ-ಅಂಶಗಳ ಪ್ರಕಾರ, ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 2023ರಲ್ಲಿ ಒಟ್ಟು 15,489 ಪ್ರಕರಣಗಳು ವರದಿಯಾಗಿದ್ದು, ಇದು 2022ರಲ್ಲಿನ 13,479ಕ್ಕೆ ಹೋಲಿಸಿದರೆ 14% ಹೆಚ್ಚಳವಾಗಿದೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಹತ್ತು ವರ್ಷಗಳ ಪ್ರವೃತ್ತಿಯನ್ನು ಅನುಸರಿಸಿ, 2024ರಲ್ಲಿ ದೇಶಾದ್ಯಂತ ಪತಿ ಮತ್ತು ಅವನ ಮನೆತನದವರ ಕ್ರೌರ್ಯದ 1.20 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಸತತ ಐದನೇ ವರ್ಷ ದೆಹಲಿ ಅತ್ಯಧಿಕ ವರದಕ್ಷಿಣೆ ಸಾವುಗಳನ್ನು ದಾಖಲಿಸಿದೆ; 2024ರಲ್ಲಿ 111 ಸಾವುಗಳನ್ನು ಒಳಗೊಂಡ 109 ಪ್ರಕರಣಗಳು ನೋಂದಾಗಿವೆ. ದೇಶದ ರಾಜಧಾನಿಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 1.4 ವರದಕ್ಷಿಣೆ ಸಾವಿನ ದರವನ್ನು ವರದಿ ಮಾಡಿದೆ. ದೆಹಲಿಯಲ್ಲಿ 2023ರಲ್ಲಿ 114 ಮತ್ತು 2021ರಲ್ಲಿ 136 ಅಂತಹ ಪ್ರಕರಣಗಳು ದಾಖಲಾಗಿದ್ದವು. ಕಾನ್ಪುರದಲ್ಲಿ 2024ರಲ್ಲಿ 54 ವರದಕ್ಷಿಣೆ ಸಾವಿನ ಪ್ರಕರಣಗಳು ವರದಿಯಾಗಿದ್ದು; ಬೆಂಗಳೂರಿನಲ್ಲಿ 25 ದಾಖಲಾಗಿವೆ. ಕೊಚ್ಚಿ ಮತ್ತು ಚೆನ್ನೈನಲ್ಲಿ ವರ್ಷದಲ್ಲಿ ಯಾವುದೇ ವರದಕ್ಷಿಣೆ ಸಾವುಗಳು ವರದಿಯಾಗಿಲ್ಲ.
ರಾಜ್ಯಮಟ್ಟದಲ್ಲಿ ಉತ್ತರ ಪ್ರದೇಶವು ಅತ್ಯಧಿಕ ವರದಕ್ಷಿಣೆ ಸಾವುಗಳನ್ನು ದಾಖಲಿಸಿದೆ. 2,038 ಪ್ರಕರಣಗಳೊಂದಿಗೆ ದೇಶದ ಒಟ್ಟು ಮೊತ್ತದ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಪಾಲು ಹೊಂದಿದೆ. ಬಿಹಾರ 1,078 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಮಧ್ಯ ಪ್ರದೇಶವು 450 ಸಾವುಗಳನ್ನು ವರದಿ ಮಾಡಿದೆ; ಆದರೆ, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ ಕ್ರಮವಾಗಿ 386 ಮತ್ತು 337 ಪ್ರಕರಣಗಳನ್ನು ದಾಖಲಿಸಿವೆ.
ವರದಕ್ಷಿಣೆ ವಿವಾದಗಳಿಗೆ ಸಂಬಂಧಿಸಿದ ನೇರ ಮಾರಕ ಹಿಂಸಾಚಾರವನ್ನು ಒಳಗೊಂಡ ಪ್ರಕರಣಗಳನ್ನು ಉಲ್ಲೇಖಿಸುವ “ವರದಕ್ಷಿಣೆ ಕೊಲೆಗಳು” ಎಂದು ವರ್ಗೀಕರಿಸಿದ ಘಟನೆಗಳನ್ನು ವರದಿ ದಾಖಲಿಸಿದೆ. ಪಶ್ಚಿಮ ಬಂಗಾಳವು 163 ಪ್ರಕರಣಗಳೊಂದಿಗೆ ಅಂತಹ ಪ್ರಕರಣಗಳಲ್ಲಿ ಅತ್ಯಧಿಕವಾಗಿದ್ದು, ಒಡಿಶಾ 161 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಾಜಸ್ಥಾನ 75 ಪ್ರಕರಣಗಳನ್ನು ವರದಿ ಮಾಡಿದೆ. ಬಿಹಾರ ಮತ್ತು ಉತ್ತರ ಪ್ರದೇಶ ಕ್ರಮವಾಗಿ 66 ಮತ್ತು 58 ಪ್ರಕರಣಗಳನ್ನು ವರದಿ ಮಾಡಿವೆ. ಉತ್ತರ ಪ್ರದೇಶವು 2024ರಲ್ಲಿ ಗಂಡ ಮತ್ತು ಸಂಬಂಧಿಕರ ದುರ್ವರ್ತನೆಯ 21,266 ಪ್ರಕರಣಗಳನ್ನು ವರದಿ ಮಾಡಿದ್ದು, ಪಶ್ಚಿಮ ಬಂಗಾಳವು 19,666 ಪ್ರಕರಣಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ತೆಲಂಗಾಣವೂ ಪ್ರತಿಯೊಂದೂ 10,000ಕ್ಕೂ ಹೆಚ್ಚು ಪ್ರಕರಣಗಳನ್ನು ನೋಂದಾಯಿಸಿವೆ.
ವರದಕ್ಷಿಣೆಗೆ ಕಡಿವಾಣ ಹಾಕಲು ಕೇವಲ ಸರಕಾರಕ್ಕೆ ಸಾಧ್ಯವೇ ಇಲ್ಲ. ವರದಕ್ಷಿಣೆಯನ್ನು ಬೇರು ಸಮೇತ ಕಿತ್ತು ಹಾಕಲು ಸಾಮಾಜಿಕ ಕಾಳಜಿಯುಳ್ಳ ಸಂಘ-ಸಂಸ್ಥೆಗಳು ಜನಸಾಮಾನ್ಯರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಸರ್ವ ಧರ್ಮದ ಗುರುಗಳು ಧಾರ್ಮಿಕ ನೆಲೆಯಲ್ಲಿ ಇದೊಂದು ನಾಚಿಕೆಗೇಡಿನ ದುಷ್ಕೃತ್ಯ ಎಂದು ತಮ್ಮ ಬೋಧನೆಗಳಲ್ಲಿ ಹೇಳಬೇಕು.
‘ವರದಕ್ಷಿಣೆ ಮೋಹಿಗಳು, ಸಮಾಜ ದ್ರೋಹಿಗಳು’ ಎಂದು ಸರ್ವತಃ ಮರೆಯಬಾರದು. ಸರಳ ಭಾಷೆಯಲ್ಲಿ ವಿವರಿಸುವುದಾದರೆ, ವರದಕ್ಷಿಣೆ ಮೋಹಿಗಳು ದೇಶದ ‘ಆತ್ಮ’ವನ್ನು ‘ಹತ್ಯೆ’ಗೈಯುತ್ತಿದ್ದಾರೆ!















































