ಇಸ್ಮತ್ ಫಜೀರ್

ನಮಗೆಲ್ಲಾ ಗೊತ್ತಿರುವ ಹಾಗೆ ಅಕ್ಕ ಗೌರಿ ಲಂಕೇಶ್ ಮೇಲೆ ಮುಸ್ಲಿಂ ಪಕ್ಷಪಾತಿಯೆಂಬ ಬಹುದೊಡ್ಡ ಆರೋಪವಿತ್ತು. ಇದು ನ್ಯಾಯ ಪಕ್ಷಪಾತಿಯಾದ ಪ್ರತಿಯೋರ್ವ ಸೆಕ್ಯುಲರ್ ವ್ಯಕ್ತಿಯ ಮೇಲೆ ಬಂದ ಮತ್ತು ಬರುವ ಬಹಳ ಸಹಜವಾದ ಆರೋಪ. ಇಂತಹ ಆರೋಪ ಮಹಾತ್ಮ ಗಾಂಧೀಜಿಯವರ ಮೇಲೆಯೂ ಇದೆ. ಅಷ್ಟಕ್ಕೂ ಅಕ್ಕ ಮುಸ್ಲಿಂ ಪಕ್ಷಪಾತಿಯಾಗಿದ್ದರೇ? ಎಂಬುವುದಕ್ಕೆ ಉತ್ತರ ಕಂಡುಹುಡುಕುವ ಅಗತ್ಯ ಖಂಡಿತವಾಗಿಯೂ ಇಲ್ಲ. ಅಕ್ಕನ ಹುತಾತ್ಮತೆಯ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಬಹುದಾದ ಮಾತು “ಈ ನೆಲದ ಸಂವಿಧಾನದ ಉಳಿವಿಗಾಗಿ ಹೋರಾಡಿ ಮಡಿದ ಅನೇಕ ಹೋರಾಟಗಾರರಲ್ಲಿ ಅಕ್ಕ ಕೂಡಾ ಒಬ್ಬರು”.

ದೇಶದ ಪ್ರಥಮ ಪ್ರಧಾನಿ ಜವಾಹರ್‍ಲಾಲ್ ನೆಹರೂ ಕೋಮುವಾದದ ಬಗ್ಗೆ ಬಹಳ ಸ್ಪಷ್ಟವಾದ ನಿಲುವೊಂದನ್ನು ತಳೆದಿದ್ದರು. “ಅಲ್ಪಸಂಖ್ಯಾತರ ಕೋಮುವಾದ ಸ್ವತಃ ಅವರಿಗೇ ಮಾರಕವಾದರೆ ಬಹುಸಂಖ್ಯಾತರ ಕೋಮುವಾದ ರಾಷ್ಟ್ರಕ್ಕೆ ಮಾರಕ”.

ನಮ್ಮಲ್ಲಿ ಹೇಗೆ ಹಿಂದೂ ಕೋಮುವಾದದ ವಿರುದ್ಧ ಮಾತನಾಡುವ ಹಿಂದೂಗಳ ಮೇಲೆ ಹಲ್ಲೆ ದೌರ್ಜನ್ಯಗಳು ಮತ್ತವರ ಕೊಲೆ ನಡೆಯುತ್ತವೆಯೋ ಅಂತೆಯೇ ಪಾಕಿಸ್ತಾನದಲ್ಲಿ ಅಲ್ಲಿನ ಮುಸ್ಲಿಮ್ ಕೋಮುವಾದದ ವಿರುದ್ಧ ಮಾತನಾಡುವ ಮುಸ್ಲಿಂ ಚಿಂತಕರ ಹೋರಾಟಗಾರರ ಮೇಲೆಯೂ ಹಲ್ಲೆ, ದೌರ್ಜನ್ಯ, ಕೊಲೆಗಳೂ ನಡೆಯುತ್ತವೆ. ಉದಾ: ಅಸ್ಮಾ ಜಹಾಂಗೀರ್, ಇಸ್ಮಾಯಿಲ್ ಗುಲೆಲೋವ್. ಅಕ್ಕ ತನ್ನ ಕಂಡ ಹಾಗೆ ಎಂಬ ಸಂಪಾದಕೀಯ ಅಂಕಣದಲ್ಲಿ ಅನೇಕಾರು ಬಾರಿ ಪಾಕಿಸ್ತಾನಿ ಮೂಲಭೂತವಾದಿಗಳ ವಿರುದ್ಧ ಮತ್ತು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಪರ ಧ್ವನಿಯೆತ್ತುವ ಮುಸ್ಲಿಂ ಚಿಂತಕರ ಹೋರಾಟಗಾರರ ಪರವಾಗಿ ಬರೆದಿದ್ದಾರೆ. ದುರಂತವೇನೆಂದರೆ ಅಕ್ಕನ ಇಂತಹ ಜೀವಪರ, ದುರ್ಬಲರ ಪರ ನಿಲುವುಗಳು ಅಕ್ಕನನ್ನು ನಖಶಿಖಾಂತ ವಿರೋಧಿಸುತ್ತಿದ್ದ, ಅಕ್ಕ ಹುತಾತ್ಮರಾದ ಬಳಿಕವೂ ಅವರ ಮೇಲೆ ನೀಚಾತಿನೀಚವಾಗಿ ಬರೆಯುವ, ಮಾತನಾಡುವ ಹಿಂದೂತ್ವವಾದಿ ಶಕ್ತಿಗಳಿಗೆ ಇದು ಎಂದೂ ಅರ್ಥವಾಗುವುದಿಲ್ಲ.

ಅಕ್ಕನ ಮೇಲೆ ಹಿಂದೂತ್ವವಾದಿ ಶಕ್ತಿಗಳು ಮೊಟ್ಟ ಮೊದಲು ಮುಗಿಬಿದ್ದು ದ್ವೇಷ ಸಾಧಿಸತೊಡಗಿದ್ದು ಬಾಬಾ ಬುಡಾನ್‍ಗಿರಿ ಹೋರಾಟದ ಪ್ರಾರಂಭಕಾಲದಲ್ಲಿ. ಅಕ್ಕ ಎಲ್ಲೂ ಕೂಡಾ ಬಾಬಾ ಬುಡಾನ್‍ಗಿರಿಯನ್ನು ಮುಸ್ಲಿಮರ ಸ್ವತ್ತು ಎಂದು ವಾದಿಸಿಲ್ಲ. ಅಕ್ಕನ ಮತ್ತು ಅಕ್ಕನ ಸಂಗಾತಿಗಳಾದ ನಮ್ಮೆಲ್ಲರ ವಾದ ಬಾಬಾ ಬುಡಾನ್‍ಗಿರಿ ಈ ನೆಲದ ಸೌಹಾರ್ದ ಪರಂಪರೆಯ ಬಹುದೊಡ್ಡ ಕೇಂದ್ರಗಳಲ್ಲೊಂದು ಎಂದಾಗಿತ್ತು. ಅಂದಿನಿಂದ ಇಂದಿನವರೆಗೂ ನಮ್ಮ ಘೋಷಣೆ “ಬಾಬಾ ದತ್ತ ಬೇರೆಯಲ್ಲ, ಹಿಂದೂ-ಮುಸ್ಲಿಂ ಶತ್ರುಗಳಲ್ಲ” ಎಂಬುವುದಾಗಿದೆ. ಯಾವಾಗ ಹಿಂದೂತ್ವವಾದಿಗಳು ಅದನ್ನು ಕೇವಲ ಹಿಂದೂಗಳ ಶ್ರದ್ಧಾ ಕೇಂದ್ರವೆಂದು ವಾದಿಸ ಹೊರಟರೋ ಅದನ್ನು ಎದುರಿಸಿ ಅಕ್ಕ ಹೇಳುತ್ತಾ ಬಂದಿದ್ದಿಷ್ಟೆ. ಬಾಬಾ ಬುಡಾನ್‍ಗಿರಿ ಕೇವಲ ಹಿಂದೂಗಳ ಸ್ವತ್ತಲ್ಲ. ಅದು ಈ ನಾಡಿನ ಎಲ್ಲಾ ಸೌಹಾರ್ದಪ್ರಿಯರ ಸ್ವತ್ತು.

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು. ಒಮ್ಮೆ ಅಕ್ಕ ಯಾವನೋ ಒಬ್ಬ ಸ್ವಾಮಿಯ ಅಕ್ರಮಗಳನ್ನು ಬಯಲಿಗೆಳೆದಾಗ ಯುವಕನೊಬ್ಬ ಅಕ್ಕನಿಗೆ ಪತ್ರವೊಂದನ್ನು ಬರೆದು “ನೀನು ಕೇವಲ ಹಿಂದೂ ಸ್ವಾಮಿಗಳ ವಿರುದ್ಧ ಮಾತ್ರ ಬರೆಯುತ್ತಿಯಲ್ವಾ? ನಿನಗೆ ಧಮ್ ಇದ್ದರೆ ಓರ್ವ ಮುಸ್ಲಿಂ ಮೌಲವಿಯ ವಿರುದ್ಧ ಬರೆ” ಎಂದು ಸವಾಲು ಹಾಕಿದ್ದ. ಇದನ್ನು ಮುಂದಿನ ಸಂಚಿಕೆಯಲ್ಲಿ ಉಲ್ಲೇಖಿಸಿದ ಅಕ್ಕ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗರರಲ್ಲೊಬ್ಬರಾದ ಮೌಲಾನಾ ಅಬುಲ್ ಕಲಾಂ ಆಝಾದ್ ಬಗ್ಗೆ ಬರೆದರು. ಮೌಲಾನಾ ಕೂಡಾ ಓರ್ವ ಇಸ್ಲಾಮೀ ಮೌಲವಿಯಾಗಿದ್ದರು.

ಸೆಕ್ಯುಲರ್ ಆಗಿ ಚಿಂತಿಸುವ ಸ್ವಾಮೀಜಿಗಳ ಬಗ್ಗೆ ಬರೆದರೆ ಇವರು ಅಂತಹ ಸ್ವಾಮಿಗಳನ್ನು ಸಾಬರಿಗೆ ಹುಟ್ಟಿದ ಸ್ವಾಮಿಗಳು ಎಂದರೆ ಏನು ಮಾಡಕ್ಕಾಗುತ್ತೆ? ತಮ್ಮ ಪಾಡಿಗೆ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ, ಯಾವ ರಾಜಕೀಯ ಮೂಲಭೂತವಾದಿ ಸಂಘಟನೆಗಳ ಜೊತೆ ಕೈ ಜೋಡಿಸದಿದ್ದ ಸ್ವಾಮಿಗಳ ವಿರುದ್ಧ ಯಾವತ್ತೂ ಅಕ್ಕ ಬರೆದಿಲ್ಲ. ಪ್ರಗತಿಪರರೊಂದಿಗೆ ಗುರುತಿಸಿಕೊಳ್ಳದೆಯೂ ತಮ್ಮ ಮಠಗಳೊಳಗೆ ಪೂಜೆ ಪುರಸ್ಕಾರಗಳಲ್ಲದೇ ಅನ್ನ ದಾಸೋಹ, ಅಕ್ಷರ ದಾಸೋಹ ಮುಂತಾದ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದ ಮಠ ಮತ್ತು ಸ್ವಾಮಿಗಳನ್ನು ಸಾಂದರ್ಭಿಕವಾಗಿ ಅಕ್ಕ ಪ್ರಶಂಸಿಸಿ ಬರೆದದ್ದೂ ಇದೆ.

ಮಠಗಳ ವಿಚಾರಕ್ಕೆ ಬಂದಾಗಲೂ ಯಾವುದಾದರೂ ದುರ್ಬಲ ಸಮುದಾಯದ ಮಠದ ಮೇಲೆ ಆರ್ಥಿಕವಾಗಿ ಮತ್ತು ಸಾಮುದಾಯಿಕವಾಗಿ ಬಲಿಷ್ಠವಾಗಿರುವ ಮಠ, ಸ್ವಾಮಿಗಳು ದರ್ಪ, ದಬ್ಬಾಳಿಕೆ ಮಾಡಿದಾಗ, ಅವರ ಸ್ವತ್ತು ಕಬಳಿಸಲು ಯತ್ನಿಸಿದಾಗ, ಅವರ ಮೇಲೆ ಯಜಮಾನಿಕೆ ಪ್ರದರ್ಶಿಸಿದಾಗ ಅಕ್ಕ ಬಲಿಷ್ಠರ ವಿರುದ್ಧ ಮತ್ತು ಬಲಹೀನರ ಪರ ಬರೆದ ಧಾರಾಳ ಉದಾಹರಣೆಗಳಿವೆ. ಗೋಕರ್ಣ ದೇವಸ್ಥಾನವನ್ನು ಹೊಸನಗರ ರಾಮಚಂದ್ರಾಪುರ ಮಠ ತನ್ನ ಅಧೀನಕ್ಕೆ ತರಲು ರಾಜಕೀಯ ಬಲದ ಮೂಲಕ ಯತ್ನಿಸಿದಾಗ ಗೋಕರ್ಣ ದೇವಳದ ಪರ ನಿರಂತರ ವರದಿ, ಲೇಖನಗಳನ್ನು ಪ್ರಕಟಿಸಿದ್ದಿದೆ. ಗೋಕರ್ಣ ದೇವಸ್ಥಾನವೇನೂ ಪ್ರಗತಿಪರ ಮಠವಲ್ಲ. ಅದು ಅಪ್ಪಟ ಆಸ್ತಿಕ ಹಿಂದೂಗಳದ್ದು. ಅದೆಷ್ಟೋ ಸ್ವಾಮಿಗಳ ಜನಪರ ಕಾರ್ಯಕ್ರಮಗಳಿಗೆ ಪತ್ರಿಕೆಯ ಮೂಲಕ ಬೆಂಬಲ ನೀಡಿದ ಅಕ್ಕ ಅದೇ ಸ್ವಾಮಿಗಳ ರಾಜಕೀಯ ಹಿತಾಸಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದೂ ಇದೆ.

ಅಕ್ಕ ಗೋ ಹತ್ಯಾ ನಿಷೇಧ ಕಾನೂನಿನ ಬಗ್ಗೆ ಬರೆದಾಗ, ಹೋರಾಡಿದಾಗ ಹಲವರು ಅಕ್ಕ ಮುಸ್ಲಿಮರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ಆರೊಪಿಸುತ್ತಿದ್ದರು. ಅಕ್ಕನಿಗೆ ಗೋವು ಯಾವತ್ತೂ ರಾಜಕೀಯ ಮತ್ತು ಧಾರ್ಮಿಕ ಸಂಗತಿಯಾಗಿರಲೇ ಇಲ್ಲ. ಅಕ್ಕ ಆಗ ಮಾಡಿದ ಹೋರಾಟ ಜನರ ಆಹಾರದ ಹಕ್ಕಿನ ಬಗ್ಗೆ ಮತ್ತು ಸಂವಿಧಾನದತ್ತ ಹಕ್ಕಿನ ಬಗ್ಗೆ.

ಅಮೃತ ಮಹಲ್ ಎಂಬ ದೇಸೀ ತಳಿಯ ಹಸುವಿನ ರಕ್ಷಣೆಯ ನೆಪದಲ್ಲಿ ಆಗಿನ ರಾಜ್ಯದ ಬಿ.ಜೆ.ಪಿ. ಸರಕಾರ ಹೊಸನಗರ ಮಠಕ್ಕೆ ಗೋಮಾಳಗಳನ್ನು ವಹಿಸಿಕೊಟ್ಟಾಗ, ಅದಕ್ಕಾಗಿ ನಿಧಿ ನೀಡಿದಾಗ ಅಕ್ಕ ಅದನ್ನು ವಿರೋಧಿಸಿ ಬರೆದರು. ಅದನ್ನು ನಿರ್ದಿಷ್ಟವಾಗಿ ಒಂದು ಬಲಿಷ್ಠ ಸಮುದಾಯದ ಮಠಕ್ಕೆ ವಹಿಸಿಕೊಡುವುದರ ಬಗ್ಗೆ ಅಕ್ಕನಿಗೆ ವಿರೋಧವಿತ್ತು. ಅದಕ್ಕೆ ಬಹಳ ಸ್ಪಷ್ಟ ಕಾರಣವಿತ್ತು. ಗೋವಿನ ಹೆಸರಲ್ಲಿ ದುಡ್ಡು ಬಾಚುವ ಹುನ್ನಾರದ ಬಗ್ಗೆ ಅಕ್ಕನಿಗೆ ಸ್ಪಷ್ಟ ವಿರೋಧವಿತ್ತು. ಸ್ವತಃ ಅಕ್ಕ ತನ್ನ ತೋಟದಲ್ಲಿ ದನ ಸಾಕುತ್ತಿದ್ದರು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.

ಅಕ್ಕನ ವಿರುದ್ಧ ಮುಸ್ಲಿಂ ಪಕ್ಷಪಾತದ ಆರೋಪ ಹೊರಿಸುವವರು ಇನ್ನೊಂದು ವಿಚಾರವನ್ನು ಗಮನಿಸಬೇಕು. ಅಕ್ಕ ಯಾವತ್ತೂ ವಿವೇಚನಾರಹಿತರಾಗಿ, ಸಾರಾಸಗಟಾಗಿ ಮುಸ್ಲಿಮರನ್ನು ಬೆಂಬಲಿಸಿಲ್ಲ. ಮುಸ್ಲಿಮರ ತಪ್ಪುಗಳನ್ನು ಖಡಾಖಂಡಿತವಾಗಿ ವಿರೋಧಿಸಿದ ಧಾರಾಳ ಉದಾಹರಣೆಗಳಿವೆ. ಸ್ವತಃ ನಾನು ದಾರುಲ್ ಉಲೂಂ ದೇವ್‍ಬಂದ್‍ನ ಕೆಲವು ಅನಪೇಕ್ಷಿತ ಮತ್ತು ಜನವಿರೋಧೀ ಫತ್ವಾಗಳನ್ನು ಖಂಡಿಸಿ ಬರೆದ ಲೇಖನಗಳನ್ನು ಅಕ್ಕ ಒಳ್ಳೆಯ ಪ್ರಾಶಸ್ತ್ಯ ನೀಡಿ ಪ್ರಕಟಿಸಿದ್ದಾರೆ. ದೆಹಲಿಯ ಜಾಮಿಯಾ ಮಸೀದಿಯ ಶಾಹಿ ಇಮಾಮ್ ಬುಖಾರಿಯ ಎಡಬಿಡಂಗಿತನದ ರಾಜಕೀಯ ಹೇಳಿಕೆಗಳನ್ನು, ಕೃತ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಿ ಅಕ್ಕ ಬರೆದಿದ್ದಾರೆ. ಶಾಹಿ ಇಮಾಂ ಬುಖಾರಿ ಜಾಮಿಯಾ ಮಸೀದಿಯನ್ನು ಮತ್ತದರ ಸ್ವತ್ತನ್ನು ಪಿತ್ರಾರ್ಜಿತ ಸ್ವತ್ತಿನಂತೆ ಬಳಸುತ್ತಿದ್ದುದರ ವಿರುದ್ಧ ನಾನು ಬರೆದ ಲೇಖನಗಳನ್ನು ಅಕ್ಕ ಪ್ರಕಟಿಸಿದ್ದಾರೆ. ಮುಸ್ಲಿಂ ಪುರೋಹಿತಶಾಹಿತ್ವದ ಮಹಿಳಾ ವಿರೋಧೀ ನಿಲುವಿನ ವಿರುದ್ಧ ಅಕ್ಕ ತನ್ನ ‘ಕಂಡ ಹಾಗೆ’ ಸಂಪಾದಕೀಯ ಅಂಕಣದಲ್ಲಿ ಅನೇಕ ಬಾರಿ ಬರೆದದ್ದಿದೆ. ಅಕ್ಕ ಮುಸ್ಲಿಂ ಮಹಿಳೆಯರ ಬುರ್ಖಾ ಧರಿಸುವ ಹಕ್ಕಿನ ಪರ ಬರೆದಿದ್ದರು. ಆದರೆ ಅಕ್ಕ ಅಲ್ಲೆಲ್ಲೂ ಪುರುಷ ಪ್ರಧಾನ ನೀತಿಯನ್ನು ಬೆಂಬಲಿಸಿಲ್ಲ. ಅಕ್ಕ “ಬುರ್ಖಾ ಆಯ್ಕೆ ಮತ್ತು ಸ್ವಾತಂತ್ರ್ಯದ ಪ್ರಶ್ನೆ” ಎಂಬ ನಿಲುವು ತಾಳಿದ್ದರು. ಅದೇ ಸಂದರ್ಭ ಅಕ್ಕ ಸಾರಾ ಅಬೂಬಕರ್ ಅವರ ಬುರ್ಖಾ ವಿರೋಧೀ ಬರಹಗಳನ್ನೂ ಪ್ರಕಟಿಸಿದ್ದರು.

2014 ರ ಡಿಸೆಂಬರ್ ತಿಂಗಳಲ್ಲಿ ಯಾದಗಿರಿ ಜಿಲ್ಲೆಯ ತಿಂಥಣಿಯಲ್ಲಿ ನಡೆದ ಕೋಮು ಸೌಹಾರ್ದ ವೇದಿಕೆಯ ಸಮಾವೇಶದಲ್ಲಿ ನನ್ನ ಜೊತೆ ನನ್ನ ಪತ್ನಿಯೂ ಭಾಗವಹಿಸಿದ್ದಳು. ಬುರ್ಖಾಧಾರಿಯಾಗಿದ್ದ ನನ್ನ ಪತ್ನಿಯ ಜೊತೆ ಬುರ್ಖಾ ಕಳಚುವಂತೆ ವಾದಿಸಿದ್ದರು. ಆಗ ಆಕೆ “ಇದು ನನ್ನ ಮೇಲೆ ಯಾರೂ ಹೇರಿದ್ದಲ್ಲ. ಇದು ನನ್ನ ಆಯ್ಕೆ ಮತ್ತು ನನ್ನ ಸ್ವಾತಂತ್ರ್ಯ” ಎಂದು ಅಕ್ಕನ ಬಳಿ ವಾದಿಸಿದ್ದಳು.

ಅಕ್ಕನನ್ನು ಮುಸ್ಲಿಂ ಪಕ್ಷಪಾತಿ ಎನ್ನುವವರು ಅಕ್ಕನ ಬರಹಗಳನ್ನು ಪೂರ್ವಾಗ್ರಹ ರಹಿತವಾಗಿ ಓದಬೇಕು. ಅಕ್ಕನ ಕಂಡ ಹಾಗೆ ಸಂಪಾದಕೀಯ ಬರಹಗಳ ಮೂರು ಸಂಪುಟಗಳಿವೆ. ಅವುಗಳನ್ನು ಓದಿದಾಗ ಅಕ್ಕ ಏನು ಎಂದು ತಿಳಿಯುತ್ತದೆ.

LEAVE A REPLY

Please enter your comment!
Please enter your name here