- ಲಬೀದ್ ಆಲಿಯಾ
“ಅಂದು ಮುಂದೆ ಗುರಿ ಇತ್ತು, ಹಿಂದೆ ಗುರು ಇದ್ದ; ಸಾಗುತಿತ್ತು ರಣಧೀರರ ದಂಡು. ಇಂದು ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ; ಸಾಗುತಿದೆ ರಣಹೇಡಿಗಳ ಹಿಂಡು”. ಕುವೆಂಪು ಅವರ ಈ ಮಾತನ್ನು ಇಂದಿನ ಕಾಲಕ್ಕೆ ಅನುಗುಣವಾಗಿ ಈ ರೀತಿ ಓದಬಹುದು. ಮುಂದೆ ಹಣ ಇತ್ತು ಹಿಂದೆ ಗುರು ಇದ್ದ ಸಾಗುತ್ತಿದೆ ಭ್ರಷ್ಟಾಚಾರಿಗಳ ದಂಡು. ಕ್ರಿಮಿನಲ್ ಹಿನ್ನೆಲೆಯಿರುವ ಪ್ರಸಾದ್ ಅತ್ತಾವರ್ ಗೆ ಉಪ ಕುಲಪತಿ ಹುದ್ದೆಗಾಗಿ ಸುಮಾರು 17.5 ಲಕ್ಷ ಹಣವನ್ನು ಮಂಗಳೂರು ವಿವಿ ಯ ಒಬ್ಬ ಪ್ರಾಧ್ಯಾಪಕ ಕೊಡುವುದಾರರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ಎತ್ತ ಕಡೆ ಸಾಗುತ್ತಿದೆ ಎಂದು ಪ್ರಶ್ನಿಸಬೇಕಾಗಿದೆ. ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿಗಳಿಂದ ಇಂತಹ ಕೃತ್ಯವನ್ನು ಊಹಿಸಬಹುದು ಆದರೆ ಒಬ್ಬ ಪ್ರಾಧ್ಯಾಪಕರು ಇಂತಹ ಕೆಳ ಮಟ್ಟಕ್ಕೆ ಇಳಿಯುತ್ತಾರೆಂದಾದರೆ ಇದು ರಾಜ್ಯದ ವಿವಿಯ ಘನತೆಗೆ ಮಾಡಿದ ಪ್ರಹಾರವಾಗಿದೆ. ಒಂದತೂ ಸ್ಪಷ್ಟವಾಗಿದೆ. ವಿ.ವಿ ಯಲ್ಲಿ ನಡೆಯುವ ನೇಮಕಾತಿ ರಾಜಕೀಯ ಪ್ರೇರಿತವಾಗಿದೆ. ಅಲ್ಲಿ ಪ್ರತಿಭೆಗಿಂತಲೂ ಅಧಿಕಾರ ಮತ್ತು ಹಣ ಮಹತ್ವವನ್ನು ಪಡೆಯುವುದಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಅಧಪತನದ ಅಂಚಿನಲ್ಲಿದೆ ಎಂದರ್ಥ. ರಾಜ್ಯದ 17 ವಿವಿಗಳಲ್ಲಿ ಬೆಳಕಿಗೆ ಬಂದ 500 ಕೋಟಿ ರೂ.ಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ಪ್ರಕರಣದ ಕುರಿತು ಉನ್ನತ ಶಿಕ್ಷಣ ಇಲಾಖೆಯ ಈ ಹಿಂದಿನ ಹೇಳಿಕೆಯನ್ನೂ ಇಲ್ಲಿ ಜತೆಯಾಗಿ ಓದಬೇಕು. ಒಂದು ಶಾಲೆ ಒಂದು ಜೈಲನ್ನು ಮುಚ್ಚುತ್ತದೆ ಎಂಬ ವಿಕ್ಟರ್ ಹ್ಯೂಗೊ ರವರ ಮಾತು ಇಂದಿಗೆ ಒಂದು ಶಾಲೆ ಒಂದು ಜೈಲನ್ನು ತೆರೆಯುವುದು ಎಂದು ಬರೆಯುವ ಕಾಲ ದೂರವಿಲ್ಲ. ರಾಜ್ಯದಲ್ಲಿ ನಡೆಯುವ ಎಲ್ಲಾ ನೇಮಕಾತಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡುವುದರ ಜತೆಗೆ ರಾಜಕೀಯದಿಂದ ಹಾಗೂ ಹಣ ಬಲದಿಂದ ಮಕ್ತವಾಗಿಸಿ ವಿವಿಯ ಘನತೆಯನ್ನು ಕಾಪಾಡಲು ಸರಕಾರವು ಮುಂದಾಗಬೇಕು.