
ಒಳ್ಳೆಯ ಸಿನಿಮಗಳು ಸಿನಿಪ್ರಿಯರ ಮನಸ್ಸನ್ನು ಗೆಲ್ಲುತ್ತದೆ ದೊಡ್ಡ ಮೊತ್ತದ ಹಣ ಸಂಪಾದಿಸದಿದ್ದರೂ ಪ್ರೇಕ್ಷಕರ ಮನಸ್ಸನ್ನು ಕರಗಿಸಿ ಇತಿಹಾಸ ಪುಟ ಸೇರುತ್ತದೆ . ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಹೆಚ್ಚಿನ ಸಿನಿಮಾಗಳು ಅಶ್ಲೀಲತೆಯನ್ನು ಎತ್ತಿತೋರಿಸಿ ಜನರಿಂದ ಹಣ ಕೊಳ್ಳೇಹೊಡೆಯುವುದರ ಹೊರತು ಹೆಚ್ಚಿನ ಸಂದೇಶಗಳೇನು ನಿರ್ಮಾಪಕರು ಜನರಿಗೆ ತೋರಿಸುವುದಿಲ್ಲ. ಇಂದು ಸಿನಿಮಾಗಳು ಅಶ್ಲೀಲತೆಯ ದೃಶ್ಯಾವಿಷ್ಕಾರವಾಗಿ ಮಾರ್ಪಟ್ಟಿದೆ ಕಾಮವಿಲ್ಲದೆ ಪ್ರೇಮವಿಲ್ಲ, ಅಶ್ಲೀಲತೆಯಿಲ್ಲದೆ ನೃತ್ಯವಿಲ್ಲ, ಸಂಭಾಷಣೆಯಿಲ್ಲ. ಒಟ್ಟಾಗಿ ಹೇಳುವುದಾದರೆ ಅಶ್ಲೀಲತೆಯಿಂದಲ್ಲದೆ ಸಿನಿಮಾ ಸಂಚರಿಸುವುದಿಲ್ಲ, ಅಂತಹ ಸಿನಿಮಾಗಳನ್ನು ಜನ ಮೆಚ್ಚುವುದಿಲ್ಲ ಎಂಬ ತಪ್ಪುಕಲ್ಪನೆಗಳು ನಿರ್ಮಾಪಕರಲ್ಲಿಯೂ ನಿರ್ದೇಶಗರಲ್ಲಿಯೂ ಮೂಡಿದೆ. ಆದರೆ ಅಂತಹ ಭಾವನೆಗಳನ್ನು ಸುಳ್ಳಾಗಿಸುತ್ತಾ ಕೇರಳದ ಯುವ ನಿರ್ದೇಶಕ ಝಕಾರಿಯಾ ಸ್ಟಾರ್ ನಟ ನಟಿಯರ ಆರ್ಭಟವಿಲ್ಲದೆ ಹೊಸ ಮುಖಗಳನ್ನಿಟ್ಟುಕೊಂಡು ಸಣ್ಣ ಬಜೆಟಿನಲ್ಲಿ ಉತ್ತಮ ಸಿನಿಮಾ ನಿರ್ದೇಶಿಸಿ. ಸಿನಿಮಾ, ಸಾಹಿತ್ಯ,ಸಾಂಸ್ಕೃತಿಕ ರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾನೆ.
ಝಕಾರಿಯಾ ನಿರ್ದೇಶನದ “ಸುಡಾನಿ ಫ್ರಮ್ ನೈಜಿರಿಯಾ” ಎಂಬ ಸಿನಿಮಾವು ಕೇರಳದ ಮಲಾಪುರಂ ಜಿಲ್ಲೆಯಲ್ಲಿ ನಿರಂತರ ನಡೆಯುವ ಫುಟ್ಬಾಲ್ ಆಟವನ್ನು ಕೇಂದ್ರವಾಗಿ ಇಟ್ಟುಕೊಂಡು ನಿರ್ಮಿಸಿದ ಚಿತ್ರ. ಫುಟ್ಬಾಲ್ ಕೇವಲ ವಿನೋದಕ್ಕಿರುವ ಆಟವಾಗಿರದೆ ಜೀವನದ ಉಪಾಧಿಯೂ ಆಗಿದೆ ಎಂಬ ಮುನ್ನುಡಿಯೊಂದಿಗೆ ಮಜೀದ್ ಎಂಬ ಯುವಕನ ಫುಟ್ಬಾಲ್ ಪ್ರೇಮದ ಜೊತೆ ಸಿನಿಮಾ ಸಂಚಾರವಾರಂಭಿಸುತ್ತದೆ . ಮಜೀದ್ ಒಬ್ಬ ಆಟಗಾರನಾಗದೆ ಒಂದು ಟೀಮನ್ನು ಮುನ್ನಡೆಸುವ ಮ್ಯಾನೇಜರ್ ಆಗಿರುತ್ತಾನೆ. ಮಲಪ್ಪುರಂ ಜಿಲ್ಲೆಯಲ್ಲಿ ಆಗಾಗ ನಡೆಯುತ್ತಿರುವ ಫುಟ್ಬಾಲ್ ಲೀಗ್ ಪಂದ್ಯಾಟಕ್ಕೆ ಸ್ವದೇಶದಿಂದಲೂ ವಿದೇಶದಿಂದಲೂ ಆಟಗಾರರನ್ನು ಸೇರಿಸಿ ತನ್ನ ಟೀಮನ್ನು ಬಲಪಡಿಸಿ ವಿಜಯಗಳಿಸಿ ಹಣ ಸಂಪಾದಿಸುವುದು ಮಜೀದನ ವಾಡಿಕೆಯಾಗಿತ್ತು. ದುರಾದ್ರಷ್ಟವಶಾತ್ ಸುಡಾನಿನಿಂದ ಬಂದ ಆಟಗಾರ ಸ್ಯಾಮುವೆಲ್ ರಾಬಿನ್ಸನ್ನ ಕಾಲಿಗೆ ಪೆಟ್ಟಾಗಿ ಆಸ್ಪತ್ರೆ ಸೇರುತ್ತಾನೆ. ಕಾಲಿಗೂ ಸೊಂಟಕ್ಕೂ ಹೆಚ್ಚು ಪೆಟ್ಟು ತಗುಲಿದರಿಂದ ಮುಂದೆ ಆಡಲು ಸಾಧ್ಯವಿಲ್ಲ ಮತ್ತು ಆಸ್ಪತ್ರೆಯ ದೈನಂದಿನ ಖರ್ಚುವೆಚ್ಚದ ಮೊತ್ತವನ್ನು ಕೇಳಿ ಮಜೀದ್ ಕುಗ್ಗಿ ಹೋಗುತ್ತಾನೆ. ಹಿರಿಯರ ಅಭಿಪ್ರಾಯದಂತೆ ಮಜೀದ್ ಸ್ಯಾಮುವೆಲ್ ನ್ನನ್ನು ತನ್ನ ಮನೆಯಲ್ಲಿ ಚಿಕಿತ್ಸೆ ನೀಡಲು ಸಜ್ಜಾಗುತ್ತಾನೆ. ಸ್ಯಾಮುವೆಲ್ ಮಜೀದ್ ನ ಮನೆಗೆ ಚಿಕೆತ್ಸೆಗಾಗಿ ಬಂದಂದಿನಿಂದ ಮಜೀದ್ನ ತಾಯಿ ತನ್ನ ಮಗನಂತೆ ಅವನ ಸುಶ್ರೂಷಗೆಯ್ಯುತ್ತಾರೆ, ಒಬ್ಬ ಪರದೇಶಿ, ಅಪರಿಚಿತ ವ್ಯಕ್ತಿಯೊಂದಿಗೆ ಮನೆಯ, ಊರಿನ ಜನರ ಸಂಬಂಧ ಪ್ರೀತಿ ವಿಶ್ವಾಸ, ಅವರು ತೊರಿಸುವ ಕಾಳಜಿಯೊಂದಿಗೆ ಸಿನಿಮಾ ಮುಂದುವರಿಯುತ್ತದೆ. ತಮ್ಮ ಮಕ್ಕಳ ನಿರ್ಲಕ್ಷದಿಂದ ಹೆತ್ತವರ ಕೊರಗು, ನೆರೆಕರೆ ಸಂಬಂಧ, ಸಹಧರ್ಮಿಯರೊಂದಿಗಿರುವ ಬಹುಕಾಲದ ಬಾಂಧವ್ಯವನ್ನು ತೋರಿಸುತ್ತಾ ಜಾತಿ ಧರ್ಮಗಳ ಆಚೆ ಮನುಷ್ಯನ ನೋವು ಸಮಾನವಾದದ್ದು ಎಂಬ ಸತ್ಯವನ್ನು ಯುವ ನಿರ್ದೇಶಕ ಝಕಾರಿಯಾ ನೊಡುಗರ ಹೃದಯ ತಟ್ಟುವ ರೀತಿಯಲ್ಲಿ ಚಿತ್ರಿಸುವಲ್ಲಿ ತನ್ನ ಮೊದಲ ಸಿನಿಮಾದಲ್ಲೇ ಯಶಸ್ವಿಗೊಂಡಿದ್ದಾರೆ. ಜೊತೆಗೆ ಸೂಡಾನ್ ಜನತೆಯ ಸಂಕಷ್ಟ ದಾರಿದ್ರ್ಯ, ನಿರಂತರ ಸಾಗುತ್ತಿರುವ ಯುದ್ಧಗಳು, ಮುಂತಾದ ವಿಷಯಗಳನ್ನು ಚರ್ಚಿಸುತ್ತಾ ಸಿನಿಮಾ ಫುಟ್ಬಾಲ್ ಆಟದ ಕಡೆಗೆ ಸಂಚರಿಸುತ್ತದೆ. ಫುಟ್ಬಾಲ್ ಕೇವಲ ಒಂದು ಆಟವಲ್ಲ ಒಂದು ವಿಭಾಗದ ಹೋರಾಟ ಮತ್ತೊಂದು ವಿಭಾಗದ ಜೀವನದ ಉಪಾದಿ, ಹಾಗು ಹೊಟ್ಟೆಪಾಡಿಗಾಗಿ ಆಡುತ್ತಾರೆ ಎಂಬ ನಿಜಾಂಶವನ್ನು ವಿವರಿಸಿದ್ದಾರೆ. ಸೂಡಾನ್ ಜನತೆಯ ಕಷ್ಟದ ಬದುಕಿನ ಜೊತೆಗೆ ಭಾರತೀಯರು ಭಾರತೀಯರಿಗಿರುವ ಮುಕ್ತ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿ ಪರಸ್ಪರ ಕಚ್ಚಾಟದಲ್ಲಿ ತೊಡಗಿರುವುದನ್ನು ಸಿನಿಮ ವಿಮರ್ಷಸುತ್ತದೆ ಮತ್ತು ಖೇದಿಸುತ್ತದೆ. ಬರಗಾಲದಿಂದಾಗಿ ಒಂದು ಜನತೆ ತಮ್ಮ ಸಂಪಾದನೆಯಲ್ಲಿ ನಿರಿಗಾಗಿ ಹಣವನ್ನು ವಿನಿಯೊಗಿಸಿದರೆ.. ನಮ್ಮಿಂದ ಆಗುತ್ತಿರುವ ನೀರಿನ ದುರ್ಬಲಕೆಯ ಬಗ್ಗೆ ಸಿನಿಮ ಪ್ರಶ್ನಿಸುತ್ತದೆ. ಪತ್ರಕರ್ತರು ತಮ್ಮ ಸ್ವಾರ್ಥಕ್ಕಾಗಿ ಗೀಚಿಕೊಂಡರೆ ಸಮಾಜದಲ್ಲಿ ಆಗುವ ಅನಾಹುತಗಳು ವಲಸಿಗರ ನಿರಾಶ್ರಿತರ ನೋವುಗಳು, ಕಷ್ಟ ನಷ್ಟಗಳು ನೋವು ನಲಿವು ಹಾಸ್ಯ ಅಪಹಾಸ್ಯ ಮುಂತಾದ ವಿಷಯಗಳಲ್ಲಿ ಸಿನಿಮಾ ಸಂಚರಿಸಿ ಜನರನ್ನು ಚರ್ಚೆಗೀಡು ಮಾಡುತ್ತದೆ ಯುವ ನಿರ್ದೇಶಕನ ಈ ಪ್ರಥಮ ಚಿತ್ರದ ಪ್ರಥಮ ಪ್ರಯತ್ನ ಯಶಸ್ವಿಗೊಂಡಿದೆ, ಜನ ಮೆಚ್ಚಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ ಮಲೆಪ್ಪುರಂ ಜಿಲ್ಲೆಯ ಬಗ್ಗೆ ಅಲ್ಲಿನ ಜನರ ವರ್ತನೆಯ ಬಗ್ಗೆ ಕೇರಳೀಯ ಇತರ ಜನವಿಭಾಗದವರಲಿರುವ ನಿರ್ಲಕ್ಷ ಭಾವನೆಯನ್ನು ಹೋಗಲಾಡಿಸಿ ಅಲ್ಲಿನ ಜನತೆಯ ಪ್ರೀತಿ ವಿಶ್ವಾಸ,ಸಾಮರಸ್ಯ, ವಿಶಾಲ ಹೃದಯವಂತಿಕೆಯನ್ನು ಚಿತ್ರಿಸಿ ಜನರಿಂದ ತಮ್ಮ ಬಗ್ಗೆಯಿರುವ ತಪ್ಪು ಕಲ್ಪನೆಗಳನ್ನು ಹೊಗಲಾಡಿಸುವ ಪ್ರಯತ್ನವೂ ಈ ಸಿನಿಮದಲ್ಲಿ ನಡೆದಿದೆ
“ಕಿನಾವು ಕೊಂಡು ಒರು ಕಲೀಮುಟ್ಟಂ” ಮತ್ತು “ಚೆರುಕಥೆ ಪೋಲ್ ಜನ್ಮಮ್” ಎಂಬ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ ಅಶ್ಲೀಲತೆಯಿಲ್ಲದೆ, ಐಟಂ ಡಾನ್ಸ್ ಗಳಿಲ್ಲದೆ, ಕಾಮ ಪೂರಿತ ಪ್ರೀತಿಯಿಲ್ಲದೆ, ಅಶ್ಲೀಲ ಸಂಭಾಷಣೆಯಿಲ್ಲದೆ ಬ್ರಂಹಾಂಡ ನಾಯಕ ನಟಿಯರಿಲ್ಲದೆ ಸಣ್ಣ ಬಜೆಟಿನಲ್ಲಿ ಉತ್ತಮ ಸಿನಿಮಾ ನಿರ್ಮಿಸಿ ಯಶಸ್ವಿ ಗೊಳಿಸಬಹುದೆಂದು “ಸುಡಾನಿ ಫ್ರಮ್ ನೈಜೀರಿಯಾ” ತೋರಿಸಿಕೊಟ್ಟಿತು . ಮಲೆಯಾಲಂ ಸಿನಿಮಾ ರಂಗದ ಮಜೀದ್ ಆಗಿ ಸೌಬಿನ್ ಶಾಹಿರ್ ನಟಿಸಿ,ಸ್ಯಾಮುವೆಲ್ ಪಾತ್ರದಲ್ಲಿ ಸ್ಯಾಮುವೆಲ್ ಅಬಿಯೊಲಾ ರೊಬಿನ್ಸನ್ , ಸಾವಿತ್ರಿ ಶ್ರೀದೆವಿ ತಾಯಿ ಪಾತ್ರದಲ್ಲಿಯೂ, ಸರಸ ಬಾಲಿಶೇರಿ ಅವರು ಬೀಯುಮ್ಮಳಾಗಿಯು, ಕೆ ಟಿ ಸಿ ಅಬ್ದುಲ್ಲಾ ತಂದೆಯಾಗಿಯೂ ನಟಿಸಿರುವರು ವಿವಾದದಲ್ಲಿ ತೂಗಾಡುತ್ತಿರುವ ಮಲೆಯಾಳಂ ಸಿನಿಮಾರಂಗಕ್ಕೆ ಝಕಾರಿಯಾ ಮತ್ತು ಬಳಗ ಒಂದು ಮಾದರಿಯಾಗಲಿ ಎಂದು ಹಾರೈಸೋಣ


















































