- ತಲ್ಹಾ ಇಸ್ಮಾಯಿಲ್ ಬೆಂಗ್ರೆ, ವಕೀಲರು ಬೆಂಗಳೂರು.
ಕೋವಿಡ್’ನಿಂದ ಲಸಿಕೆ ತಯಾರಿಸಿದವರು ಮತ್ತು ಅದರ ವ್ಯಾಪಾರಿಗಳನ್ನು ಬಿಟ್ಟರೆ, ಇಡೀ ಲೋಕವೇ ನಷ್ಟ ಅನುಭವಿಸಿದೆ ಎಂದರೆ ತಪ್ಪಾಗಲಾರದು. ತಿಂಗಳುಗಟ್ಟಲೆ ಲಾಕ್ ಡೌನ್ ವಿಧಿಸಿದ್ದ ಪರಿಣಾಮ ವ್ಯಾಪಾರ ಇಲ್ಲ, ಉದ್ಯೋಗ ಇಲ್ಲ, ರೋಗ ಬಂದರೆ ವೈದ್ಯರ ಬಳಿ ಹೋಗುವಂತೆಯೂ ಇಲ್ಲ ಮತ್ತು ಹೋದರೆ ಕೊರೋನಾ ಟೆಸ್ಟ್ ಮೊದಲು, ಬಾಕಿ ವಿಚಾರ ನಂತರ ಎಂಬ ಆಜ್ಞೆ. ತಿನ್ನಲು ಕುಡಿಯಲು ಇಲ್ಲದೆ ನರಕಯಾತನೆ ಅನುಭವಿಸಿದ ಸಾವಿರಾರು ಬಡವರು, ಎರಡು ವರ್ಷದಿಂದ ಶಾಲೆಯ ಮುಖ ನೋಡದ ಮಕ್ಕಳ ಕಲಿಕೆಯ ಸ್ಥಿತಿ ಕರುಣಾಜನಕವಾಗಿದೆ. ಇನ್ನು ಮಕ್ಕಳ ಬಗ್ಗೆ ಹೇಳುವುದಾದರೆ,
ಹಳ್ಳಿಗಳಲ್ಲಿ ಜನರು ಕಳೆದ ಒಂದೆರಡು ವರ್ಷದಲ್ಲಿ ತಾನು ಮಾಡಿದ ಸಾಲ ತೀರಿಸಲು, ತನ್ನ ಅಮಾಯಕ ಮಕ್ಕಳನ್ನು ಫ್ಯಾಕ್ಟರಿಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳು ಕೋವಿಡ್’ನ ಎರಡನೆಯ ಅಲೆ’ಗಿಂತ ಮುಂಚಿತವಾಗಿಯೇ ನಾನಾ ಫ್ಯಾಕ್ಟರಿಗಳಿಗೆ ದುಡಿಮೆಗೆಂದು ಹೊರಟ್ಟಿದ್ದರು. ಅವರು ಫ್ಯಾಕ್ಟರಿಯ ಮಾಲಕರಿಗೆ ಚೀಪ್ ಲೇಬರ್’ಗಳು. ಒಮ್ಮೆ ಶಾಲೆ ಪ್ರಾರಂಭವಾದರೆ ಇದರ ನೈಜ್ಯತೆ ವ್ಯಕ್ತವಾಗಲಿದೆ. ಆದರೆ ಸರಕಾರದ ಬಳಿ ಮಕ್ಕಳ ಸತ್ಯಾಸತ್ಯತೆಯನ್ನು ಸರಿಯಾಗಿ ಜನಸಾಮಾನ್ಯರಿಗೆ ನೀಡುವ ಯಾವುದೇ ಧಾಖಲೆಗಳಿಲ್ಲ.
ಇನ್ನೂ ಇಂತಹ ಮಕ್ಕಳೇ ಹೆಚ್ಚಿನಾಂಶ ತುತ್ತಾಗುವುದು, ಮಕ್ಕಳ ಕಳ್ಳಸಾಗಾಣಿಕೆ ಎಂಬ ಸಾಮಾಜಿಕ ಪಿಡುಗಿಗೆ ಮತ್ತು ಈ ರೀತಿ ಕಳ್ಳಸಾಗಾಣಿಕೆ ಮಾಡಲಾದ ಮುಗ್ದರನ್ನು ವೇಶ್ಯಾವಾಟಿಕೆ, ಆರ್ಗನ್ಸ್ ಟ್ರೇಡ್ ಮತ್ತು ಇನ್ನಿತರ ಅಪಾಯಕ್ಕೆ ತಳ್ಳುವುದು ಕಳ್ಳಸಾಗಾಣಿಕೆಗಾರರ ಹಳೆಯ ಕೆಟ್ಟ ಸಂಪ್ರದಾಯ. ಇನ್ನೂ (ಸ್ಟ್ರೀಟ್ ಚಿಲ್ದ್ರೆನ್ಸ್ ) ರಸ್ತೆ ಬದಿಯ ಮಕ್ಕಳ ಬಗ್ಗೆ ಹೇಳುವುದಾದರೆ ಅವರನ್ನು ಭಿಕ್ಷಾಟನೆಗಾಗಿ ಬಳಸುವುದು ಮುಂದಿನ ದಿನಗಳಲ್ಲಿ ಜಾಸ್ತಿಯಾಗಬಹುದು. ಒಟ್ಟಿನಲ್ಲಿ ಲಾಕ್ ಡೌನ್’ನಿಂದಾಗಿ ಅತೀ ಹೆಚ್ಚು ಪ್ರಭಾವಿತವಾದ ವರ್ಗವೆಂದರೆ, ಅದು ಪುಟಾಣಿ ಮಕ್ಕಳ ವರ್ಗ, ಒಂದು ಕಡೆ ಅವರಿಗೆ ಶಾಲೆ ಇಲ್ಲದೆ ಶಿಕ್ಷಣದಿಂದ ವಂಚಿತರಾದರೆ ಇನ್ನೊಂದು ಕಡೆ ಅವರ ಮೇಲೆ ನಡೆಯುವ ಅತಿಯಾದ ದೌರ್ಜನ್ಯದ ಕುರಿತು ವ್ಯಕ್ತವಾಗಿ ‘ಬಚ್ ಪನ್’ ಬಚಾವೋ ಎನ್ನುವ ಸಂಘಟನೆಯು ಸುಪ್ರೀಂ ಕೋರ್ಟ್’ನಲ್ಲಿ ದೂರು ಸಲ್ಲಿಸಿತ್ತು. ಆದರೆ ಕಳೆದ ಒಂದು ವರ್ಷದಿಂದ ಸರಕಾವು ಈ ನಿಟ್ಟಿನಲ್ಲಿ ಕೈಗೊಂಡ ಕೆಲಸಗಳು ಕೇವಲ ಬೆರಳಣಿಕೆಯಷ್ಟು. ಇನ್ನೂ ಬಾಲ ಕಾರ್ಮಿಕ ಕಾಯ್ದೆಗೆ 2014 ರಲ್ಲಿಯೇ ತಿದ್ದುಪಡಿ ತಂದು ಅದನ್ನು ಒಂದು ರೀತಿ ಸಡಿಲಿಸಿರುವ ಸರಕಾರಕ್ಕೆ (ಹೆಣ್ಣು ಮಕ್ಕಳು ಮನೆ ಕೆಲಸದಂತಹ ಕೆಲಸಗಳಲ್ಲಿ ಮತ್ತು ಗಂಡು ಮಕ್ಕಳು ಫ್ಯಾಮಿಲಿ ಉದ್ಯೋಗಗಳಲ್ಲಿ ಕೆಲಸಕ್ಕೆ ಉಪಯೋಗಿಸುವುದು ತಪ್ಪಲ್ಲ) ಇದು ದೊಡ್ಡ ವಿಚಾರವಾಗಿರಲಿಕ್ಕಿಲ್ಲ.