ಹುಚ್ಚು ಮನಸ್ಸಿನ ಸಾವಿರ ಮುಖಗಳು 08

  • ಯೋಗೀಶ್ ಮಾಸ್ಟರ್ ಬೆಂಗಳೂರು

ವ್ಯಕ್ತಿಯೊಬ್ಬನ ಅಮಲೇರುವಂತಹ ಅಸ್ವಾಭಾವಿಕ ಆಲೋಚನೆಗಳು, ಸಹಜ ಪಶು ಪ್ರವೃತ್ತಿಗಳು, ವೈವಿಧ್ಯದ ಚಿಂತನಾ ಕ್ರಮಗಳು, ತಮ್ಮ ಕಾಲಕ್ಕೆ, ನೆಲಕ್ಕೆ, ಆ ನೆಲದ ಮೇಲಾಗುವ ಚಳಿ, ಮಳೆ, ಬೆಳೆ, ಬಿಸಿಲು, ಗಾಳಿಗೆ ಅನುಗುಣವಾಗಿ ಕಟ್ಟಿಕೊಂಡಿರುವ ಸಾಂಸ್ಕೃತಿಕ ನೆಲೆಗಳು, ಎದುರಿಸಿದ ಕಷ್ಟ, ಸಮಸ್ಯೆ, ಸಂಘರ್ಷಗಳಿಗೆ ಅನುಗುಣವಾಗಿ ಹುಟ್ಟಿದ ಸಿದ್ಧಾಂತಗಳು, ತಮ್ಮ ಅಗತ್ಯ ಮತ್ತು ಅನಿವಾರ್ಯತೆಗಳ ನಿರ್ವಹಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳು, ಈ ಎಲ್ಲಾ ವ್ಯವಸ್ಥೆಗಳ ಅಧೀನವಾಗಿ ನಡೆಯದಿದ್ದರೆ ಸಿಗುವಂತಹ ಶಿಕ್ಷೆಗಳು, ಕಾನೂನಿನ ಕ್ರಮಗಳು ಅಥವಾ ಅಧೀನವಾಗಿ ನಡೆಯುವ ಯಶಸ್ಸು ಲಭಿಸಿದರೆ ಸಿಗುವ ಪುರಸ್ಕಾರಗಳು; ಇವೆಲ್ಲಾ ಸಮಾಜದ ಮೂಲಕ ವ್ಯಕ್ತಿಗಳಿಗೆ ಕಡಿಮೆ ಹುಚ್ಚು ಹಿಡಿಸುವುದೇನಲ್ಲ. ನಿಜ ಹೇಳಬೇಕೆಂದರೆ ಕಟ್ಟುಪಾಡುಗಳೊಳಗೆ ತನ್ನತನವನ್ನು ಬಲಿಗೊಟ್ಟು ನಡೆದರೆ ಪುರಸ್ಕಾರವೇನೂ ಸಿಗುವುದಿಲ್ಲ. ಆದರೆ ತನ್ನತನಕ್ಕೆ ಬದ್ಧನಾದರೆ ತಿರಸ್ಕಾರವಂತೂ ಕಟ್ಟಿಟ್ಟದ್ದು. ಸಮಾಜದ ಎಲ್ಲಾ ಕಟ್ಟಳೆಗಳನ್ನು ಆಂತರಿಕವಾಗಿ ತಿರಸ್ಕರಿಸುವಂತಹ ಮಾನಸಿಕ ಒತ್ತಡವಿದ್ದರೂ ವ್ಯಕ್ತಿಯು ತಾನು ಸಮಾಜದ ತಿರಸ್ಕಾರಕ್ಕೆ ಒಳಗಾಗದಿರುವಂತೆ ತನ್ನ ತಾನು ನೋಡಿಕೊಳ್ಳಬೇಕು. ಇಲ್ಲಿರುವ ಬಹುದೊಡ್ಡ ವ್ಯಂಗ್ಯವನ್ನು ಗಮನಿಸಿ. ಮನುಷ್ಯನ ಮೂಲಭೂತ ಆಶಯವೇ ‘ಉಳಿಯುವುದು’, ಆ ಉಳಿವಿಗಾಗಿ ಅಗತ್ಯವಿರುವ ಶಕ್ತಿ ಸಂವರ್ಧನೆ ಮಾಡಿಕೊಳ್ಳುವುದು, ತಾನು ದೀರ್ಘಕಾಲ ಬಾಳುವುದು, ತನ್ನ ಸಂತಾನದ ಮೂಲಕ ಮುಂದಿನ ಪೀಳಿಗೆಗಳಲ್ಲಿಯೂ ತಾನು ಬದುಕುವುದು, ಇರುವಷ್ಟು ಕಾಲ ತನ್ನ ಭದ್ರತೆ ಅಥವಾ ರಕ್ಷಣೆ ಮಾಡಿಕೊಳ್ಳುವುದು; ಅಲ್ಲವೇ? ಆದರೆ ಅವನು ಆ ಮೂಲ ಪ್ರವೃತ್ತಿಯ (ಬೇಸಿಕ್ ಇನ್‍ಸ್ಟಿಂಕ್ಟ್) ಆಶಯವನ್ನು ತಾವು ನೆರವೇರಿಸುವುದಾಗಿ ಸಾಮಾಜಿಕ ಕಟ್ಟುಪಾಡುಗಳು ವಾಗ್ದಾನ ಮಾಡುತ್ತವೆ. ಮನುಷ್ಯರೆಲ್ಲರಿಗೂ ಆ ಪ್ರವೃತ್ತಿಯೇ ಇದ್ದು ಎಲ್ಲರೂ ಅದನ್ನು ಸಾಧಿಸಬೇಕು. ಹಾಗಾಗಿ ನಿನ್ನ ಪ್ರವೃತ್ತಿಗೆ ಅನುಗುಣವಾಗಿ ನಿನ್ನಿಷ್ಟಕ್ಕೆ ನೀನು ನಡೆದುಕೊಳ್ಳಬಾರದು ಎಂದು ಕಟ್ಟಳೆಗಳು ಸೂಚಿಸುತ್ತವೆ. ನಿನ್ನ ಇಷ್ಟದ ತಿಂಡಿಯನ್ನು ನಾವು ಕೊಡುತ್ತೇವೆ. ಆದರೆ ನೀನೇ ಇಷ್ಟಪಡಬೇಡ; ಇದು ಸಾಮಾಜಿಕ ಕಟ್ಟುಪಾಡಿನ ವ್ಯಂಗ್ಯ. ಮನಸ್ಸಿನ ‘ತನ್ನತನದ’ ದೃಷ್ಟಿಯಲ್ಲಿ ತಾನೇ ಜಗತ್ತಿನ ಕೇಂದ್ರ. ತಾನೇ ಎಲ್ಲರಿಗಿಂತ ಮೇಲಿದ್ದು ಸ್ವಾಮಿತ್ವವನ್ನು ಸ್ಥಾಪಿಸಬೇಕಾಗಿರುವುದು. ಎಲ್ಲವೂ ತನ್ನ ಅಧೀನದಲ್ಲಿರಬೇಕು ಎಂಬುದು. ತಾನು ಎಲ್ಲರಿಗಿಂತ ಮುಂದೆ ಹೋಗಿ ತನಗೆ ಬೇಕಾದ್ದ ಪಡೆಯದಿದ್ದರೆ ತಾನು ಉಳಿಯಲಾರೇನೋ ಎಂಬ ಭಯ. ಏಕೆಂದರೆ ಅವನು ಪ್ರಾರಂಭಿಕ ಕಾಲದಲ್ಲಿ ಬೇಟೆಯಾಡುತ್ತಿದ್ದಾಗ ಹಾಗೇ ಇದ್ದದ್ದು. ಮನುಷ್ಯ ತಾನು ಉಳಿಯಬೇಕೆಂದರೆ ಬೇಟೆಯಾಡಿ ತಿನ್ನಬೇಕಿತ್ತು. ಅದಕ್ಕಾಗಿ ಹೊಡೆದಾಡಬೇಕಿತ್ತು. ಆ ಹೊಡೆದಾಟದಿಂದಾಗಿಯೇ ತನ್ನ ಉಳಿಯುವ ಆಶಯಕ್ಕೆ ಧಕ್ಕೆ ಬರುವುದನ್ನು ಗಮನಿಸಿಕೊಂಡು ‘ಹಂಚಿಕೊಳ್ಳುವ’ ಅನಿವಾರ್ಯತೆಯನ್ನು ಕಂಡುಕೊಂಡ. ಹಂಚಿಕೊಂಡು ಉಣ್ಣುವುದು ಹೀಗೆ ಒಂದು ಮೌಲ್ಯವಾಗಿದ್ದು ಬಲಾಬಲಗಳ ಸಂಘರ್ಷದಿಂದ ಉಂಟಾಗುವ ಅನಾಹುತವನ್ನು ತಪ್ಪಿಸುವ ಅನಿವಾರ್ಯತೆಯಿಂದ. ಇಂದು ಯಾವುದನ್ನು ನಾವು ಮೌಲ್ಯವೆಂದು ಕರೆಯುತ್ತೇವೆಯೋ ಅವೆಲ್ಲವೂ ಅನಿವಾರ್ಯತೆಗಳೇ. ಸೌಹಾರ್ದ, ಸಹಬಾಳ್ವೆ, ಸಹಿಷ್ಣುತೆ ಇವೆಲ್ಲವೂ ಅನಿವಾರ್ಯಗಳೇ. ಕರುಣೆ ಎಂಬುದೋ, ಔದಾರ್ಯ ಎಂಬುದೋ, ಸಮಾನತೆ ಎಂಬುದೋ, ಸಾಮಾಜಿಕ ನ್ಯಾಯ ಎಂಬುದೋ; ಇವುಗಳೆಲ್ಲಾ ಮೌಲ್ಯವೆಂದು ನಾವು ಆನಂದದಿಂದ ಸ್ವೀಕರಿಸಿದ್ದೇನಲ್ಲ. ಅನಿವಾರ್ಯವಾಗಿ ಒಪ್ಪಿಕೊಂಡಿದ್ದು. ಉಳಿಯುವಿಕೆಯ ಆಶಯವನ್ನು ಪೂರೈಸಿಕೊಳ್ಳಲು ಅಗತ್ಯವಿರುವ ಅನಿವಾರ್ಯಗಳು.ದಾಂಪತ್ಯವೆಂಬುದು ಕೂಡಾ ಅನಿವಾರ್ಯತೆಯ ಕೂಸು. ಗಮನಿಸಿದ್ದೀರಾ? ನಾಯಿಗಳಿಗೆ ವರ್ಷಕ್ಕೆರಡು ಬಾರಿ ಸಂಭೋಗದ ಸಮಯ ಬರುತ್ತದೆ. ಆಗ ರಸ್ತೆ ರಸ್ತೆಗಳಲ್ಲಿ ಋತುಮತಿಯಾಗಿರುವ ನಾಯಿಯ ಹಿಂದೆ ಗಂಡು ನಾಯಿಗಳ ದೊಡ್ಡ ದಿಂಡೇ ನೆರೆದಿರುತ್ತದೆ. ಅವುಗಳೆಷ್ಟು ಕಾಯುತ್ತವೆ, ಹೋರಾಡುತ್ತವೆ, ಕಚ್ಚಾಡುತ್ತವೆ, ಬಲಶಾಲಿ ನಾಯಿಗಳು ದುರ್ಬಲ ಮತ್ತು ನಿರ್ಬಲ ನಾಯಿಗಳನ್ನು ಬೆದರಿಸಿ, ಹೋರಾಡಿ ಓಡಿಸಿ ಹೆಣ್ಣು ನಾಯಿಗೆ ಸಂಭೋಗ ಮಾಡುತ್ತದೆ. ಅದು ಮಾಡುತ್ತಿರುವಾಗಲೇ ಮತ್ತೊಂದು ನಾಯಿ ತಾನೂ ಮಧ್ಯೆ ಪ್ರವೇಶಿಸಿ ತನ್ನ ತೃಷೆಯನ್ನು ತೃಪ್ತಿಪಡಿಸಿಕೊಳ್ಳಲು ಯತ್ನಿಸುತ್ತದೆ. ಇದಕ್ಕಿಂತ ತೀರಾ ಭಿನ್ನವಾದ ಸ್ಥಿತಿಯೇನೂ ಮನುಷ್ಯರದ್ದಾಗಿರಲಿಲ್ಲ. ಪ್ರಾಣಿಗಳಿಗೆಲ್ಲಾ ಮೇಟಿಂಗ್ ಸೀಸನ್ ಅಂತ ಒಂದಿರತ್ತೆ. ಆದರೆ ಈ ಮನುಷ್ಯನಿಗೋ 24/7. ಎಲ್ಲಾ ಕಾಲದಲೂ, ಎಲ್ಲಾ ವೇಳೆಯೊಳೂ ಎಲ್ಲಾದರೂ, ಹೇಗಾದರೂ ಸಂಭೋಗಿಸಬಲ್ಲ. ಅವನ ಸಂಭೋಗಕ್ಕೆ ಋತುಮಾನವೆಂಬುದೇನಿಲ್ಲ. ಹೀಗಿರುವಂತಹ ಮನುಷ್ಯ ಸಂಭೋಗಿಸಲು ಎಂತೆಂತಹ ಸಂಘರ್ಷಗಳನ್ನು ಆದಿಮ ಕಾಲದಲ್ಲಿ ಮಾಡಿದ್ದಿರಬಹುದು. ಮನೆಯಲ್ಲಿ ನಾಯಿಗಳನ್ನು ಸಾಕುವವರು, ಬ್ರೀಡ್ ಮಾಡುವವರು ತಮ್ಮ ಸಾಕು ನಾಯಿಗಳಿಗೆ ಸಂಭೋಗಕ್ಕಾಗಿ ಒಂದು ಅವಕಾಶವನ್ನು ಕಲ್ಪಿಸುವರು. ಅವರ ಕಣ್ಗಾವಲಿನಲ್ಲಿ, ಸೂಕ್ತ ವ್ಯವಸ್ಥೆಯಲ್ಲಿ ಅವುಗಳು ಸಂತಾನಾಭಿವೃದ್ಧಿಯ ಕಾರಣಕ್ಕಾಗಿ ಸಂಭೋಗ ಕಾರ್ಯ ನೆರವೇರುವುದು. ಇದು ಮದುವೆ ಎಂಬ ವ್ಯವಸ್ಥೆ. ಹೆಣ್ಣನ್ನು ತನ್ನ ವಶವಾಗಿಸಿಕೊಂಡು ಸಂಭೋಗ ಮಾಡಲು ಬಲಶಾಲಿಯು ದುರ್ಬಲನ ಮೇಲೆ ಮಾಡುವ ದೌರ್ಜನ್ಯವನ್ನು ದಮನಿಸಲು ವಿವಾಹ, ದಾಂಪತ್ಯವೆಂಬ ವ್ಯವಸ್ಥೆಯನ್ನು ರೂಢಿಸಿಕೊಳ್ಳಲಾಯಿತು. ಬಲಶಾಲಿಗಳ ಆಕ್ರಮಣವನ್ನು ಮತ್ತು ಅತಿಕ್ರಮಣವನ್ನು ನೈತಿಕತೆಯ ಚೌಕಟ್ಟಿನಲ್ಲಿ ನಿರ್ಬಂಧಿಸಲಾಯಿತು. ಅದೇ ಮದುವೆ. ಪರಸ್ತ್ರೀಯನ್ನು ನೋಡಬೇಡ, ಅವರಿಗಾಗಿ ಆಸೆ ಪಡಬೇಡ ಎಂಬ ಕಟ್ಟಳೆಯನ್ನು ಅನಿವಾರ್ಯವಾಗಿ ಮೌಲ್ಯವನ್ನಾಗಿಸಲಾಯಿತು. ಈ ಅನಿವಾರ್ಯಗಳನ್ನು ಕಂಡುಕೊಳ್ಳುವ ಮೊದಲು ಹೋರಾಟ ಅಥವಾ ಪೈಪೋಟಿ ಎಂಬುದೇ ಸಹಜವಾಗಿದ್ದದ್ದು. ನಡೆಯುವ ಹೋರಾಟಗಳಲ್ಲೆಲ್ಲಾ ಸದಾ ಜಯಗಳಿಸುವಷ್ಟು ಶಕ್ತಿಶಾಲಿಯಾದವನು ಯಾವ ಸಂಧಾನ ಅಥವಾ ರಾಜಿಗಳಿಗೆ ಸಮ್ಮತಿಸುತ್ತಾನೆ? ಅವನಿಗೆ ತನಗಿಂತ ಬಲಹೀನನಾದವನ ಜೊತೆಗೆ ಸಂಧಾನ ಮಾಡಿಕೊಳ್ಳುವ ಅಗತ್ಯವೇನಿದೆ? ಆದರೆ ತನ್ನ ಬಲವೂ ಇತರರ ಬಲದ ಮುಂದೆ ಸೋಲುವ ಸಂದರ್ಭಗಳು ಒದಗಿದಾಗ ಸಾಮರಸ್ಯ, ಸೌಹಾರ್ದ, ಸಹಬಾಳ್ವೆ ಎಂಬ ಸಂಧಾನದ ಅನಿವಾರ್ಯತೆ ಒದಗುತ್ತದೆ. ಈ ಸಂಧಾನವೋ ಪರಮ ಮುಕ್ತವೂ, ಪೂರ್ಣ ಸ್ವಾತಂತ್ರ್ಯವನ್ನೂ ಎಂದಿಗೂ ಕೊಡದು. ನಿಬಂಧನೆಗಳಿರುತ್ತವೆ. ಕಂಡೀಶನ್ಸ್ ಅಪ್ಲೈ. ಯಾಕೆಂದರೆ ಈಗ ನನ್ನ ಸ್ವಾಮಿತ್ವದ ಆಸೆ ಸೋತರೂ ಉಳಿಯುವ ಆಸೆ ಸಾಯಬಾರದಲ್ಲಾ! ಒಂದು ಆಸೆಯನ್ನು ಉಳಿಸಿಕೊಳ್ಳಲು ಮತ್ತೊಂದು ಆಸೆಯನ್ನು ಬಲಿಗೊಡುವುದು ಅನಿವಾರ್ಯವಾದಾಗಲೇ ಮೌಲ್ಯಗಳು ಹುಟ್ಟಿದವು. ಹೌದು, ನಮ್ಮ ಆಸೆಗಳ ಪಟ್ಟಿಯಲ್ಲಿ ಆದ್ಯತೆಯನ್ನೂ ಮತ್ತು ಪ್ರಾಮುಖ್ಯತೆಯನ್ನೂ ಅನುಸರಿಸಬೇಕಾದ ಅನಿವಾರ್ಯತೆ ಇದೆ. ಈ ಆಸೆ ಸಧ್ಯಕ್ಕೆ ಹಿನ್ನೆಲೆಗೆ ಹೋಗಲಿ, ಈ ಆಸೆ ಮುನ್ನೆಲೆಗೆ ಬರಲಿ. ಇಂದು ಉಳಿದಿದ್ದರೆ ನಾಳೆ ನನ್ನ ಸ್ವಾಮಿತ್ವವನ್ನು ಅಥವಾ ಅಧಿಪತ್ಯವನ್ನು ಹೇಗಾದರೂ ಸಂಪಾದಿಸಿಯೇನು ಎಂಬ ಭರವಸೆ. ಈಗ ಅರ್ಥವಾಯಿತಾ? ಮನುಷ್ಯನ ಮನಸ್ಸಿನ ತನ್ನತನಕ್ಕೆ ನಿಬಂಧನೆಗಳಿಲ್ಲದೇ ಮುಕ್ತವಾಗಿ ಅಥವಾ ಸ್ವತಂತ್ರವಾಗಿ ಎಲ್ಲರಿಗಿಂತ ಮೇಲಿರಬೇಕೆಂಬ ಬಯಕೆ. ಆದರೆ ತನ್ನದೇ ಬಲಾಬಲಗಳ ಏರುಪೇರುಗಳಿಂದಾಗಿ ನಿಬಂಧನೆಗೆ ಒಳಗಾಗಿ ಕಟ್ಟುಪಾಡುಗಳಲ್ಲಿ ಇರಬೇಕಾದ ಅನಿವಾರ್ಯತೆ. ಇಲ್ಲಿ ಮತ್ತೆ ಮುಕ್ತತೆ ಮತ್ತು ಅನಿವಾರ್ಯತೆಗಳಿಂದಾಗಿ ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಂಘರ್ಷ. ಇದು ಉಂಟು ಮಾಡುವ ನಿರಾಶೆ ಕಡಿಮೆ ಪ್ರಮಾಣದ್ದಲ್ಲ. ಮನಸ್ಸಿನ ನಿರಾಶೆ, ಹತಾಶೆಗಳು ಒಳಗೇ ಬಚ್ಚಿಟ್ಟುಕೊಂಡು ಸಂಚು ಹೂಡುತ್ತಾ ಸೇಡು ಸಾಧಿಸುವ ಕೇಡಿಗಳು. ಆಕ್ರಮಣಕಾರಿಗಳು. ಅತಿಕ್ರಮಣಕಾರಿಗಳು. ಅವುಗಳು ಯಾವಾಗಾದರೂ ತಮ್ಮ ಬಲದ ಪ್ರದರ್ಶನಕ್ಕೆ ಸಜ್ಜಾಗುತ್ತವೆ. ತಮ್ಮ ಸ್ವಾಮಿತ್ವ ಅಥವಾ ಅಧಿಪತ್ಯವನ್ನು ಸ್ಥಾಪಿಸಲು ನುಗ್ಗುತ್ತವೆ. ಅದೋ ಅದಮ್ಯ ಬಯಕೆ. ಮನುಷ್ಯನ ಮನಸ್ಸಿನ ಅದಮ್ಯ ಬಯಕೆಯನ್ನು ದಮನಿಸುವ ಅಗತ್ಯವಿರುವ ಕಾರಣದಿಂದಲೇ ನಿಬಂಧನೆಗಳನ್ನು ರೂಪಿಸುವ ಕಾರಣವೂ ಇರುವುದು. ಮೋಶೆಯೆಂಬ ಜಾಣ ಹತ್ತು ನಿಬಂಧನೆಗಳನ್ನು ತಾನು ತಂದೆನೆಂದು ಹೇಳಿಬಿಟ್ಟಿದ್ದರೆ ಅವನ ಮಾತುಗಳನ್ನು ಅವನ ಎದುರಾಳಿಗಳಿರಲಿ, ಅವನು ಯಾರನ್ನು ಬಂಧಮುಕ್ತರನ್ನಾಗಿ ಮಾಡಬೇಕೆಂದು ಬಯಸುತ್ತಿದ್ದನೋ ಅವರೇ ಕೇಳುತ್ತಿರಲಿಲ್ಲ. ಆದ್ದರಿಂದ ನಮ್ಮೆಲ್ಲರ ಬಲಕ್ಕಿಂತ ಮಹಾಬಲ ಹೊಂದಿರುವ ಸರ್ವಶಕ್ತನಾದ ದೇವರು ಈ ನಿಬಂಧನೆಗಳನ್ನು ಕೊಟ್ಟ ಎಂದು ಆ ಕಾಲದಲ್ಲಿ ಅವನ ಜನಕ್ಕೆ ಅಗತ್ಯವಾಗಿರುವ ಟೆನ್ ಕಮಾಂಡ್ಮೆಂಟ್ಸ್ ಕೊಟ್ಟ. ಬೈಬಲ್ಲನ್ನು ಒಡಂಬಡಿಕೆ ಎನ್ನುವುದು ಏನೂ ಆಶ್ಚರ್ಯವಿಲ್ಲ. ಅದು ದೇವರು ಮತ್ತು ಮನುಷ್ಯರ ನಡುವಿನ ಒಡಂಬಡಿಕೆ ಅಲ್ಲ. ಮನುಷ್ಯನ ವೈಯಕ್ತಿಕವಾಗಿರುವ ಉಳಿಯುವ ಆಶಯಕ್ಕೂ ಮತ್ತು ಇಡೀ ಮನುಕುಲವು ಸಾಮೂಹಿಕವಾಗಿ ಉಳಿಯುವ ಆಶಯಕ್ಕೂ ನಡುವಿರುವ ಒಡಂಬಡಿಕೆ. ಅವುಗಳೆರಡರ ನಡುವಿನ ಸಂಘರ್ಷದ ಅನಾಹುತಗಳನ್ನು ತಪ್ಪಿಸಲೆಂದು ಮಾಡಿಕೊಂಡಿರುವ ರಾಜಿ ಸಂಧಾನ. ಬೈಬಲ್ಲಿನ ಹಳೆಯ ಮತ್ತು ಹೊಸ ಒಡಂಬಡಿಕೆ ಬೋಧಿಸುವುದೇ ವ್ಯಕ್ತಿಗತವಾದ ಅದಮ್ಯ, ಆಕ್ರಮಣಕಾರಿ ಮತ್ತು ಅತಿಕ್ರಮಣಕಾರಿಯಾಗಿರುವ ಆಶಯವನ್ನು ನಿಗ್ರಹಿಸಿಕೊಂಡು, ಉಪಶಮನ ಮಾಡಿಕೊಂಡು ಮನುಕುಲವು ತಾಳಿಕೊಂಡು ಉಳಿದು ಇಂದೂ ಮತ್ತು ಮುಂದೂ ಬಾಳಬೇಕಾಗಿರುವ ಸೂತ್ರಗಳನ್ನು ಅಳವಡಿಸಿಕೋ ಎಂದು. ಅದಕ್ಕೆ ಪ್ರವಾದಿಗಳೆಂಬ ಜಾಣ ಜಾದೂಗಾರರು ದೇವರೆಂಬ ಮಾತಾಡುವ ಗೊಂಬೆಗಳನ್ನು ಬಳಸಿಕೊಂಡರು. ದೇವರೆಂಬ ಸರ್ವಶಕ್ತನೊಬ್ಬನ ಪರಿಕಲ್ಪನೆ ಮನುಷ್ಯನ ಆಕ್ರಮಣಕಾರಿ ಮನಸ್ಸಿನ ಶಕ್ತಿಗಳನ್ನು ನಿಯಂತ್ರಿಸಲು ಅಗತ್ಯವಾಗಿತ್ತು. ಆದರೆ ಆ ಪ್ರವಾದಿಗಳೆಲ್ಲರ ಪ್ರಜ್ಞೆ, ದೃಷ್ಟಿ, ಆಸೆಗಳೆಲ್ಲವೂ ಒಂದು ಹಂತಕ್ಕೆ ಮಾರ್ಗ ತೋರಿಸಿ ಒಂದಷ್ಟು ಜನರನ್ನು ಅವರವರ ಸಂಕಷ್ಟ, ಸಂಘರ್ಷಗಳಿಂದ ಮುಕ್ತರಾಗಿಸಿದರೂ ಅದು ಇಡೀ ಮನುಕುಲಕ್ಕೆ ವಿಸ್ತರಿಸಲು ಸಾಧ್ಯವೇ ಆಗಲಿಲ್ಲ. ಸ್ವಲ್ಪ ಸಿಲ್ಲಿ ಎನಿಸಿದರೂ ಸುಮ್ಮನೆ ಯೋಚನೆ ಮಾಡಿ. ಯಾವ ಧರ್ಮದಲ್ಲಿ ರೌಡಿಗಳು, ಕಳ್ಳಸಾಕಣೆದಾರರು, ಮೋಸಗಾರರು, ಭ್ರಷ್ಟಾಚಾರಿಗಳು, ಅತ್ಯಾಚಾರಿಗಳು ಇಲ್ಲ? ಯಾವ ಧರ್ಮವು ಯಾವ ಸಂಘರ್ಷವನ್ನೂ ಹೊಂದಿರದೇ ಪ್ರಶಾಂತವಾದ ಬದುಕನ್ನು ನಡೆಸಿಕೊಂಡಿರಲು ಒಟ್ಟಾರೆ ಜಾಗತಿಕ ಸಮಾಜಕ್ಕೆ ನೀಡಿದೆ? ಯಾವುದೇ ಧರ್ಮವು, ಸಿದ್ಧಾಂತವು ಅಥವಾ ಸಂಸ್ಕೃತಿಯು ತನ್ನ ಸ್ವರೂಪದಲ್ಲಿ ಸಾಮುದಾಯಿಕವಾಗಿ ಪ್ರಕಟಗೊಂಡರೂ ವ್ಯಕ್ತಿಗತವಾದ ವಿವೇಚನೆಯಲ್ಲಿ ನಡೆಯುವಂತಹ ದಾರಿಯನ್ನು ತೋರಿಸಿತೇ ವಿನಹ, ಇಡೀ ಮನುಕುಲಕ್ಕೆ ಸಮಗ್ರವಾದ ನೆಮ್ಮದಿಯ ಗುರಿಯನ್ನು ಸಾಧಿಸಲು ಸಾಧ್ಯವಾಗಲೇ ಇಲ್ಲ. ಆದರೆ ಒಬ್ಬ ಮುಸ್ಲೀಂ ಇಸ್ಲಾಂ ಧರ್ಮವನ್ನು ಮಾದರಿ ಧರ್ಮವೆಂದೋ, ಒಬ್ಬ ಹಿಂದೂ ತನ್ನ ಧರ್ಮವು ಉತ್ತಮ ಜೀವನ ಕ್ರಮವೆಂದೋ, ಕ್ರೈಸ್ತನೊಬ್ಬ ತನ್ನ ಧರ್ಮದ ಶ್ರೇಷ್ಟ ಪ್ರತಿನಿಧಿಯಾಗಿ ವ್ಯಕ್ತಿಗತವಾದ ಪ್ರಜ್ಞೆ, ಅರಿವು ಮತ್ತು ವರ್ತನೆಗಳಿಂದ ನಡೆದುಕೊಳ್ಳಬಹುದು. ತಾನು ಅನುಸರಿಸುವ ಧರ್ಮದಲ್ಲಿರುವ ಯಾವ್ಯಾವ ನಿಬಂಧನೆಗಳು ತನಗೂ ಮತ್ತು ಹೊರಜಗತ್ತಿಗೂ ಅನುಕೂಲಕರವಾಗಿದೆಯೇ ಅವುಗಳನ್ನು ಮುನ್ನೆಲೆಗೆ ತರುತ್ತಾ ಆಂತರಿಕವಾದ ಮಾರ್ಪಾಡುಗಳಿಗೆ ಒಗ್ಗಿಕೊಂಡು ನಡೆದುಕೊಳ್ಳಬಹುದು. ಆಗ ಅವನು ತನ್ನ ಧರ್ಮದ ಉತ್ತಮ ಪ್ರತಿನಿಧಿಯಾಗಿ ನಮಗೆ ಗೋಚರಿಸುತ್ತಾನೆ. ಆದರೆ, ವಿಷಯವೇನೆಂದರೆ ಅದು ‘ಅವನ’ ವಿವೇಚನೆಯ ಬಲದ ಪರಿಣಾಮವಾಗಿರುತ್ತದೆ. ಮತಾಂಧರು ತಮ್ಮ ತಿಕ್ಕಲುತನದ ಪ್ರಕಟಣೆಗಳಲ್ಲಿ ತಮ್ಮ ಧರ್ಮದ, ಸಂಸ್ಕೃತಿಯ ಲಾಂಛನಗಳನ್ನು ಹಿಡಿದೆತ್ತಿದಂತೆ, ಈ ಪ್ರಜ್ಞಾವಂತರೂ, ಅರಿವುಳ್ಳವರೂ, ಬದುಕುವ ಕಲೆಯನ್ನು ಬಲ್ಲವರೂ ಕೂಡಾ ತಮ್ಮ ಲಾಂಛನವನ್ನು ಹಿಡಿದೆತ್ತುತ್ತಾರೆ. ಈಗ ಅರ್ಥವಾಯಿತೇ ಸಮಸ್ಯೆಗಳು ಇರುವುದು ಲಾಂಛನಗಳಲ್ಲಿ ಅಲ್ಲ, ಮನಸ್ಸುಗಳಲ್ಲಿ ಎಂದು?ಒಟ್ಟಾರೆ ವಿಷಯ ಇಷ್ಟೇ ನಮ್ಮ ಉಳಿವಿಗೆ ಅಗತ್ಯವಿರುವುದನ್ನು ಅಳವಡಿಸಿಕೊಳ್ಳಬೇಕು. ಬೇಡದಿರುವುದನ್ನು ಬಿಡಬೇಕು. ಪರಿಸರದ ಜೊತೆಗೆ, ಕಾಲದ ಜೊತೆಗೆ, ದೇಶ ಮತ್ತು ಕಾಲಗಳ ಉಪಲಬ್ಧಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಸತತವಾಗಿ ಮಾಡಿಕೊಳ್ಳುವ ಹೊಂದಾಣಿಕೆಗಳಿಂದ ಮಾನಸಿಕವಾಗಿ ರೂಪಾಂತರ ಹೊಂದಲು ಸಾಧ್ಯ. ಉಳಿಯುವಿಕೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ರೂಪಾಂತರಗೊಳ್ಳಬೇಕು. ವಿಕಾಸವಾದದಲ್ಲಿ ಇದನ್ನೇ ಅಡಾಪ್ಟೇಶನ್ ಎಂದು ಕರೆದಿರುವುದು.

(ಮುಂದುವರಿಯುವುದು)

LEAVE A REPLY

Please enter your comment!
Please enter your name here