ಒಂದು ಕವಿತೆ
- ಸಂತೆಬೆನ್ನೂರು ಫೈಜ್ನಟ್ರಾಜ್
ಕಡಲಿಗೆ ಮುಖ
ಮಾಡಿದಷ್ಟು
ಎಂದೋ ಮುಳುಗಿದ
ದೋಣಿ ಗಳ ಆತ್ಮಗಳು
ಮಾತಿಗಿಳಿಯುತ್ತವೆ!
ಆಲದ ಮರದಡಿ
ಪದ್ಮಾಸನ ಹಾಕಿ ಏಕಾಂತ
-ವರಸಿ ಕಣ್ಮುಚ್ಚಿದರೆ ಎಲ್ಲೋ
ಬುದ್ಧ ನಕ್ಕಂತೆ ಭಾಸವಾಗಿ ಏಳುತ್ತೇನೆ!
ಹೆಜ್ಜೆಗಳಿಗೇನೂ ಹೇಳದೇ
ದಾರಿ ಮುಗಿದು ತುದಿ ಮುಟ್ಟುವವರೆಗೂ
ಸಾಗ ಹೊರಟರೆ
ಗುರಿ ಸಿಗದೆ ಚಡಪಡಿಸೋ ಮನಸುಗಳೇ
ಎದುರಾಗುತ್ತವೆ
ಕತ್ತಲು ಮತ್ತು ಒಂಟಿ
ಹದಕ್ಕೆ ಸಿಕ್ಕ ಹಾಡೆಂದು ಎತ್ತರಿಸಿ
ಹಾಡ ಹೋದರೆ
ಛೆ, ಎದೆ ಮುರಿದ ಸಪ್ಪಳ ಕೇಳಿ ಮೌನವಾಗುತ್ತೇನೆ!
ಮನುಜನಾಗದೇ ಕವಿಯಾಗಲಾರೆ
ಕವಿತ್ವದ ಲಂಗೋಟಿ ಎಸೆದು ಬೆತ್ತಲಾಗು
ಬಹುಶಃ ಕಡಲ ಧ್ಯಾನ ಮನದ ಸದ್ದು ಅಡಗಿ
ಪೂರ್ಣತೆ ದಕ್ಕೀತೇನೋ!?